ಏನೆಲ್ಲಾ ಅಭಿವೃದ್ಧಿ ಮಾಡಿದ್ರೂ ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ? ಸ್ಥಳೀಯರು ಹೇಳೋದೇನು?

By Anusha KbFirst Published Jun 5, 2024, 7:26 PM IST
Highlights

ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಅಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ್ನು ನಿರ್ಮಿಸಲಾಗಿತ್ತು, ಅಲ್ಲಿಗೆ ರೈಲು ಸೇವೆಗಳನ್ನು ಹೆಚ್ಚು ಮಾಡಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ ನಂತರವೂ ರಾಮ ನಗರಿಯಲ್ಲಿ ಬಿಜೆಪಿ ಏಕೆ ಸೋತಿತು? ಅಲ್ಲಿನ ಬಿಜೆಪಿಗರು, ಅಲ್ಲಿನ ಸ್ಥಳೀಯರು ಈ ಬಗ್ಗೆ ಹೇಳೋದೆನೋ ಇಲ್ಲಿದೆ ಡಿಟೇಲ್ಸ್, 

ಅಯೋಧ್ಯೆ:  ಕಳೆದ ಜನವರಿ 22 ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, 500 ವರ್ಷಗಳ ಬಳಿಕ ಬೃಹತ್ ರಾಮ ಮಂದಿರವನ್ನು ನಿರ್ಮಿಸಿ ಇತಿಹಾಸ ಬರೆಯಿತು. ಆದರೆ ಅದಾಗಿ ಬರೀ 4 ತಿಂಗಳ ನಂತರ ನಡೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದು ಬಿಜೆಪಿಗೆ ಅರಗಿಸಿಕೊಳ್ಳಲಾಗದ ಸೋಲು.

500 ವರ್ಷಗಳ ಬಳಿಕ ನಿರ್ಮಾಣವಾದ ರಾಮಮಂದಿರದಿಂದ ಖುಷಿಗೊಂಡ ಹಿಂದೂ ಸಮುದಾಯದ ಈ ಖುಷಿಯೇ ಮತವಾಗಿ ಬದಲಾಗಿ ಮುಂದೆ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಎಂದೇ ನಂಬಲಾಗಿತ್ತು. ಆದರೆ ಮಂದಿರ ಉದ್ಘಾಟನೆಯಾಗಿ ಕೇವಲ 4 ತಿಂಗಳ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ರಾಮನ ನೆಲದಲ್ಲಿಯೇ ಬಿಜೆಪಿ ಹೀನಾಯವಾಗಿ ಸೋತಿದೆ., ಇದು ಕೇಸರಿ ಪಾಳಯಕ್ಕೆ ತೀವ್ರ ಆಘಾತವನ್ನು ನೀಡಿದೆ.  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಅಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ್ನು ನಿರ್ಮಿಸಲಾಗಿತ್ತು ಅಲ್ಲಿಗೆ ರೈಲು ಸೇವೆಗಳನ್ನು ಹೆಚ್ಚು ಮಾಡಲಾಗಿತ್ತು. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ ನಂತರವೂ ರಾಮ ನಗರಿಯಲ್ಲಿ ಏಕೆ ಸೋತಿತು? ಅಲ್ಲಿನ ಬಿಜೆಪಿಗರು, ಅಲ್ಲಿನ ಸ್ಥಳೀಯರು ಈ ಬಗ್ಗೆ ಹೇಳೋದೆನೋ ಇಲ್ಲಿದೆ ಡಿಟೇಲ್ಸ್, 

Latest Videos

Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

ಫೈಜಾಬಾದ್ ಪ್ರಸ್ತುತ ಬಿಜೆಪಿ ಸೋಲಿನಿಂದ ಇಡೀ ದೇಶದ ಗಮನ ಸೆಳೆದ ಕ್ಷೇತ್ರ. ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆ. ರಾಮಮಂದಿರ ಬಿಜೆಪಿಯ ಸೈದ್ಧಾಂತಿಕ ಯೋಜನೆಗಳಲ್ಲಿ ಒಂದಾಗಿತ್ತು. ಆದರೂ ಇಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಲಲ್ಲುಸಿಂಗ್ ಅವರು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ವಿರುದ್ಧ 54,567 ಮತಗಳ ಅಂತರದಿಂದ ಸೋಲು ಕಂಡಿದ್ದರು.  ಈ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತಾ ಹೋದರೆ ಮೊದಲಿಗೆ ಕಾಣ ಸಿಗುವುದು ಸ್ಥಳೀಯರ ಸಮಸ್ಯೆಗಳು...

ದೇವಸ್ಥಾನ ಹಾಗೂ ವಿಮಾನ ನಿಲ್ದಾಣದ ಸುತ್ತಲಿನ ಭೂಸ್ವಾಧೀನ ವಿವಾದ:

ಅಯೋಧ್ಯೆಯ ಸ್ಥಳೀಯ ಸಮಸ್ಯೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಯಕರ ಗಮನಕ್ಕೆ ಬಾರದೇ ಹೋಯ್ತು. ರಾಮ ಮಂದಿರ ಹಾಗೂ  ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಹಲವು ಗ್ರಾಮಗಳ ಜನ ತೀವ್ರ ಆಕ್ರೋಶಗೊಂಡಿದ್ದರು. 

ಎಸ್‌ಪಿಯತ್ತ ಧ್ರುವೀಕರಣಗೊಂಡ ಬಿಎಸ್‌ಪಿ ಮತ
ಇತ್ತ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವದೇಶ್ ಪ್ರಸಾದ್ ದಲಿತ ನಾಯಕ ಎಂಬ ಕಾರಣಕ್ಕೆ ಮಯಾವತಿಯವರ ಬಿಎಸ್‌ಪಿ ಮತಗಳು ಸಮಾಜವಾದಿ ಪಕ್ಷದತ್ತ ಧ್ರುವೀಕರಣಗೊಂಡವು ಎಂದು ಹೇಳುತ್ತಾರೆ ಸ್ಥಳೀಯರು ಆದ ಬಿಜೆಪಿಯ ಕೌಂಟಿಂಗ್ ಏಜೆಂಟ್‌ ಕೂಡ ಆಗಿದ್ದ ಲಕ್ಷ್ಮಿಕಾಂತ್ ತಿವಾರಿ. 9 ಬಾರಿ ಶಾಸಕರಾಗಿದ್ದ ಅವದೇಶ್‌ ಅವರು ಯುಪಿಯ ಪ್ರಮುಖ ದಲಿತ ಮುಖವೂ ಆಗಿದ್ದಾರೆ.  ನಾವಿಲ್ಲಿ ಒಳ್ಳೆ ಕೆಲಸ ಮಾಡಿದ್ದೇವೆ. ಆದರೆ ರಾಮ ಮಂದಿರ ಉದ್ಘಾಟನೆ ಮತವಾಗಿ ಪರಿವರ್ತನೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.

Breaking: NDA ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆ

ಇನ್ನು ಗೆದ್ದು ಬೀಗುವ ಜೊತೆ ಕೇಸರಿ ಪಾಳಯದ ತೀವ್ರ ಮುಖಭಂಗಕ್ಕೆ ಕಾರಣವಾಗಿರುವ ಅವದೇಶ್ ಪ್ರಸಾದ್ ತಮ್ಮ ಗೆಲುವಿನ ಬಗ್ಗೆ ಹೇಳುವುದಿಷ್ಟು, 'ಇದೊಂದು ಐತಿಹಾಸಿಕ ಜಯ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇಲ್ಲಿ ನಮ್ಮನ್ನು ಕಣಕ್ಕಿಳಿಸಿದರು. ಜನ ಜಾತಿ ಸಮುದಾಯವನ್ನು ಮರೆತು ನನಗೆ ಮತ ಹಾಕಿದರು' ಎಂದು ಅವರು ಹೇಳಿದ್ದಾರೆ.

ತಿರುಗುಬಾಣವಾದ ಸಂವಿಧಾನ ಬದಲಾವಣೆಯ ಮಾತು

ನಿರುದ್ಯೋಗ, ಹಣದುಬ್ಬರ, ಭೂಸ್ವಾಧೀನದ ಕೋಪದ ಜೊತೆಗೆ ಸಂವಿಧಾನ ಬದಲಿಸುವ ಮಾತು ಕೂಡ ಇಲ್ಲಿ ಬಿಜೆಪಿಗೆ ತಿರುಗುಬಾಣವಾಗಿದೆ. ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್ ಕೂಡ ಇಲ್ಲಿ ಮತ ಪ್ರಚಾರದ ವೇಳೆ ಸಂವಿಧಾನ ಬದಲಿಸುವ ಮಾತಾಡಿದ್ದರು. ಸಂವಿಧಾನ ಬದಲಿಸುವುದಕ್ಕೆ ಬಿಜೆಪಿಗೆ 400 ಸೀಟುಗಲ ಅಗತ್ಯವಿದೆ ಎಂದಿದ್ದರು. 

ಮೂರನೇ ಅವಧಿಗೆ ಪ್ರಧಾನಿಯಾಗುವ ಮುನ್ನ..... ಅಂದುಕೊಂಡಷ್ಟು ಸುಗಮ ಹಾದಿಯ ...

ಈ ಬಗ್ಗೆ ಸ್ಥಳೀಯ ಮಿತ್ರಸೇನ್‌ಪುರದ 27 ವರ್ಷದ ಯುವಕ ವಿಜಯ್ ಯಾದವ್ ಹೇಳುವುದು ಹೀಗೆ 'ಅವರು ಈ ರೀತಿ ಮಾತನಾಡಬಾರದಿತ್ತು. ಇದೇ ವಿಚಾರವನ್ನು ಅವದೇಶ್ ಕುಮಾರ್ ಅವರು ತಮ್ಮ ಎಲ್ಲಾ ಪ್ರಚಾರ ಸಮಾವೇಶಗಳಲ್ಲಿ ವಿಷಯವನ್ನಾಗಿ ತೆಗೆದುಕೊಂಡರು' ಇದರ ಜೊತೆಗೆ ಪೇಪರ್ ಲೀಕ್ ಹಗರಣ, ನಾನು ಕೂಡ ಇದರ ಸಂತ್ರಸ್ತ, ಏಕಂದರೆ ನನಗೂ ಉದ್ಯೋಗವಿಲ್ಲ, ನಾನು ನನ್ನ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ನಮ್ಮ ಸಂಸದರು ಏನು ಕೆಲಸ ಮಾಡಿಲ್ಲ, ಹೀಗಾಗಿ ಜನ ಬದಲಾವಣೆಗಾಗಿ ಮತ ಹಾಕಿದ್ದಾರೆ. ರಾಮ ಮಂದಿರ ಹಾಗೂ ರಾಮಪಥದ (ಅಯೋಧ್ಯೆಗೆ ಹೋಗುವ ದಾರಿ) ಹೆಸರಿನಲ್ಲಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಂಡರು ಎಂದು ಹೇಳುತ್ತಾರೆ ವಿಜಯ್ ಯಾದವ್. 

ರಾಮಪಥಕ್ಕಾಗಿ ನಮ್ಮ ಜೀವನೋಪಾಯವನ್ನೇ ಕಸಿಯಲಾಯ್ತು
ಬಿಜೆಪಿ ಬೆಂಬಲಿಗನೆಂದು ಹೇಳಿಕೊಂಡಿರುವ ಅರವಿಂದ್ ತಿವಾರಿ, ಎಂಬಾತ ಬಿಜೆಪಿ ಸೋಲಿನ ಬಗ್ಗೆ ಹೇಳಿದಿಷ್ಟು' ರಾಮ ಮಂದಿರದ ಅದ್ದೂರಿತನ ಹೊರಗಿನವರನ್ನು ಆಕರ್ಷಿಸಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಇದರಿಂದ ಆದ ಅನಾನುಕೂಲವೇ ಹೆಚ್ಚು. ನಿಜ ಹೇಳಬೇಕೆಂದರೆ ಕೆಲವೇ ಕೆಲವು ಸ್ಥಳೀಯರಷ್ಟೇ ಅಯೋಧ್ಯೆಗೆ ಹೊಗುತ್ತಾರೆ. ಆದರೆ ಇಲ್ಲಿಗೆ ಬರುವ ಬಹುತೇಕರು ಹೊರಗಿನವರು, ರಾಮ ನಮ್ಮ ಆರಾಧ್ಯ ದೇವ ಆದರೆ ನಮ್ಮ ಜೀವನೋಪಾಯವನ್ನೇ ಅದಕ್ಕಾಗಿ ಕಸಿದುಕೊಂಡರೆ ನಾವು ಬದುಕುವುದು ಹೇಗೆ? ರಾಮಪಥದ ನಿರ್ಮಾಣದ ವೇಳೆ ಇಲ್ಲಿನ ಸ್ಥಳೀಯರಿಗೆ ಅಂಗಡಿ ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಯ್ತು ಆದರೆ ಅದಾವುದು ಆಗಲೇ ಇಲ್ಲ'

ಹಾಗೆಯೇ ಸಣ್ಣ ಟೆಂಟೊಂದರಲ್ಲಿ ಇಲ್ಲಿ ವಾಸ ಮಾಡುವ ಮೊಹಮ್ಮದ್ ಇಸ್ರೇಲ್ ಘೋಸಿ ಈ ಬಗ್ಗೆ ಮಾತನಾಡಿದ್ದು, 'ಲಲ್ಲು ಸಿಂಗ್ ವಿರುದ್ಧ ಸಾಕಷ್ಟು ಆಡಲಿತ ವಿರೋಧಿ ಅಲೆ ಇತ್ತು. ಅವರು ಅಯೋಧ್ಯೆಯ ಜನರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಅಯೋಧ್ಯೆಯ ಜನರಿಗಾಗಿ ಕೆಲಸ ಮಾಡುವುದನ್ನು ಬಿಜೆಪಿ ಮರೆತಿದೆ, ಅದರ ಜೊತೆಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿ ಲಲ್ಲು ಸಿಂಗ್ ಸ್ಥಳೀಯರ ಕೋಪಕ್ಕೆ ತುತ್ತಾದರು' ಎಂದು ಹೇಳಿದ್ದಾರೆ ಘೋಸಿ.

click me!