ತಬ್ಲೀಘಿ ಸಭೆ ಬಗ್ಗೆ ಗೊತ್ತಿದ್ದರೂ, ಕಣ್ಣು ಮುಚ್ಚಿ ಕುಳಿತಿತ್ತಾ ದಿಲ್ಲಿ ಸರ್ಕಾರ?

By Suvarna NewsFirst Published Apr 17, 2020, 7:07 PM IST
Highlights

ದಿಲ್ಲಿಯಲ್ಲಿ ತಬ್ಲೀಘಿಗಳು ಒಂದು ಸಭೆ ನಡೆಸದೇ ಹೋಗದ್ದಿದ್ದರೆ, ಭಾರತದಲ್ಲಿ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಿತ್ತು. ರೋಗ ಹಬ್ಬುವುದ ಗೊತ್ತಿದ್ದರೂ ದಿಲ್ಲಿ ಸಿಎಂ ಕಣ್ಣು ಮುಚ್ಚಿ ಕುಳಿತರಾ?

ಮಾರ್ಚ್ 16ರಿಂದ 18ರ ವರೆಗೆ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ಹತ್ತು ಸಾವಿರ ಜನ ಸೇರಿದ್ದರೂ, ದಿಲ್ಲಿ ಪೊಲೀಸರು ಮತ್ತು ದಿಲ್ಲಿ ಸರ್ಕಾರ ಕಣ್ಣುಮುಚ್ಚಿ ಹೇಗೆ ಕುಳಿತಿದ್ದವು ಎಂಬುದರ ಬಗ್ಗೆ ಇನ್ನೂ ಸರಿಯಾದ ಉತ್ತರ ಸಿಗುತ್ತಿಲ್ಲ. ಅಲ್ಲಿ 10 ಸಾವಿರ ಜನ ಇದ್ದಾರೆ ಎಂದು ದಿಲ್ಲಿ ಪೊಲೀಸರಿಗೆ ಗೊತ್ತಿತ್ತು. ಆದರೆ ಶಹೀನ್‌ಬಾಗ್‌ ನಂತರ ಅನಗತ್ಯ ಕಿತ್ತಾಟ ಬೇಡ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಸುಮ್ಮನಿದ್ದರಂತೆ. ದಿಲ್ಲಿ ಚುನಾವಣೆಯಲ್ಲಿ ತಬ್ಲೀಘಿ ಮುಖ್ಯಸ್ಥನಿಂದ ರಾಜಕೀಯ ಸಹಾಯ ಪಡೆದಿದ್ದ ಆಮ್‌ ಆದ್ಮಿ ಸರ್ಕಾರ ಬೇಕಂತಲೇ ಕಣ್ಣುಮುಚ್ಚಿತ್ತು ಎಂಬ ಗುಸುಗುಸು ಇದೆ. ಜೊತೆಗೆ ಈಗ ತಲೆಮರಿಸಿಕೊಂಡಿರುವ ತಬ್ಲೀಘಿ ಮುಖ್ಯಸ್ಥನಿಗೆ ಮಧ್ಯ ಏಷ್ಯಾದ ಮುಸ್ಲಿಂ ರಾಷ್ಟ್ರಗಳೊಂದಿಗೆ ಘನಿಷ್ಠ ಸಂಬಂಧಗಳಿವೆ. 

ಆದರೆ, ದಿಲ್ಲಿ ಪೊಲೀಸರು ಮತ್ತು ಸರ್ಕಾರದ ಕಣ್ಣು ಮರ್ಕಜ್‌ ಮೇಲೆ ಬಿದ್ದಿದ್ದು, ಕಾಶ್ಮೀರ ಮತ್ತು ಶಿರಾದಲ್ಲಿ ಎರಡು ಸಾವು ಸಂಭವಿಸಿದ ಮೇಲೆ. ಕಾಶ್ಮೀರದ ಹೈದರ್‌ಪೂರಾದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದ ಮೊಹಮ್ಮದ್‌ ಅನಿಮ್‌ ಇಂಡೋನೇಷ್ಯಾದಿಂದ ಸೋಂಕು ಅಂಟಿಸಿಕೊಂಡು ಬಂದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣನಾದ ಎನ್ನುತ್ತವೆ ದಿಲ್ಲಿ ಪೊಲೀಸ್‌ ಮೂಲಗಳು. ತಬ್ಲೀಘಿ ಜಮಾತ್‌ ಸಭೆ ಆರಂಭವಾದ ದಿನದಿಂದಲೇ ಸುತ್ತಮುತ್ತಲಿನ ಮುಸ್ಲಿಂ ಕುಟುಂಬಗಳು ಫೋನ್‌ ಮಾಡಿ ದೂರು ನೀಡಿದರೂ ಸರ್ಕಾರ ಕ್ಯಾರೇ ಅಂದಿಲ್ಲ. ಮೂಲ ಯೋಜನೆ ಪ್ರಕಾರ, ಅಲ್ಲಿ ಸೇರಿದ್ದ ಯಾರನ್ನೂ ಕೂಡ ಹೊರಗಡೆ ಬಿಡಬಾರದು ಎಂದೇ ಇತ್ತಂತೆ. ಆದರೆ ಹೇಗೋ ಏನೋ ಸರ್ಕಾರದ ಪ್ರಬಂಧನದ ತಪ್ಪಿನಿಂದ ಅಲ್ಲಿದ್ದವರು ದೇಶಕ್ಕೆಲ್ಲ ಸೋಂಕು ಹಬ್ಬಿಸಿದರು.

ಚೀನಾದ ಝೂಮ್ ಬೇಡವೆಂದು ಪ್ರಧಾನಿಗೆ ಸಲಹೆ

ನಿಜಾಮುದ್ದೀನ್‌ ಮಾತ್ರ ಸೇಫ್‌!
ದಿಲ್ಲಿಯ ನಿಜಾಮುದ್ದೀನ್‌ ಬಸ್ತಿಯಲ್ಲಿರುವ ತಬ್ಲೀಘಿ ಮರ್ಕಜ್‌ ದೇಶಾದ್ಯಂತ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದರೂ ಮಸೀದಿ ಪಕ್ಕದಲ್ಲಿ ವಾಸಿಸುವ ಒಬ್ಬ ಭಿಕ್ಷುಕ ಮತ್ತು ಒಂದು ಕುಟುಂಬಕ್ಕೆ ಸೋಂಕು ತಗುಲಿದ್ದು ಬಿಟ್ಟರೆ ಅಲ್ಲಿ ವಾಸಿಸುವ 2800 ಕುಟುಂಬಗಳು ಸೇಫ್‌ ಆಗಿವೆ. ದಿಲ್ಲಿ ಸರ್ಕಾರದ ಅಧಿಕಾರಿಗಳ ಪ್ರಕಾರ, ತಬ್ಲೀಘಿ ಜಮಾತ್‌ನಲ್ಲಿನ ಇರುವಿಕೆ ಮತ್ತು ಊಟದ ಪದ್ಧತಿಗಳು ಅಲ್ಲಿದ್ದ ಬಹುಪಾಲು ಜನರಿಗೆ ಸೋಂಕು ಹರಡಲು ಕಾರಣವಂತೆ. ತಬ್ಲೀಘಿಗಳಲ್ಲಿ ಚುಚ್ಚುಮದ್ದುಗಳಿಗೆ ವಿರೋಧವಿರುವುದು ಕೂಡ ಇಷ್ಟೊಂದು ಸೋಂಕು ಹರಡುವಿಕೆಗೆ ಕಾರಣವಂತೆ.

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತರಾ ಆರ್‌ಬಿಐ ಗೌರ್ನರ್?

ವಿದೇಶಿ ಕನ್ನಡಿಗರು ಮನೆಗೆ
ವಿದೇಶಿ ನೆಲದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅನೇಕ ಕನ್ನಡಿಗರು ಸರ್ಕಾರ ಕಳಿಸಿದ್ದ ವಿಮಾನಗಳ ಮೂಲಕ ದಿಲ್ಲಿಗೆ ಬಂದು 14 ದಿನದ ಕಾರಂಟೈನ್‌ ಮುಗಿಸಿದ್ದಾರೆ. ಕ್ವಾರಂಟೈನ್‌ ಮುಗಿಸಿದ ನಂತರ ಕರ್ನಾಟಕ ಸರ್ಕಾರ, ದಿಲ್ಲಿಯ ಕರ್ನಾಟಕ ಭವನದ ಮೂಲಕ ಟ್ರಾವೆಲ್‌ ಪಾಸ್‌ ವ್ಯವಸ್ಥೆ ಮಾಡಿ ಅನೇಕರನ್ನು ವಿಶೇಷ ಬಸ್ಸು, ಕಾರ್‌ ವ್ಯವಸ್ಥೆ ಮಾಡಿ ಕರ್ನಾಟಕದವರೆಗೆ ಕರೆಸಿಕೊಂಡಿದೆ. ಆದರೆ ಕಾರಣವಿಲ್ಲದೆ ಬಂದು ಪ್ರಭಾವ ಬೀರಿ, ಪಾಸ್‌ ತೆಗೆದುಕೊಳ್ಳೋದನ್ನು ಬಂದ್‌ ಮಾಡಲಾಗಿದೆ. ಪಾಸ್‌ ಕೊಡೋ ಅಧಿಕಾರ ಆಯಾ ನಗರಗಳ ಕಮಿಷನರ್‌ಗಳಿಗೆ ಕೊಡಲಾಗಿದ್ದು, ಯಾರಿಗೆ ಪಾಸ್‌ ಕೊಡಲಾಗಿದೆ ಎನ್ನುವುದನ್ನು ಅಧಿಕಾರಿಗಳು ಸರ್ಕಾರಕ್ಕೆ ದಾಖಲೆ ಸಮೇತ ವರದಿ ಕೊಡೋದನ್ನು ಕಡ್ಡಾಯ ಮಾಡಲಾಗಿದೆ.

- ಪ್ರಶಾಂತ್ ನಾಥು, ದೆಹಲಿ ಪ್ರತಿನಿಧಿ, ಸುವರ್ಣ ನ್ಯೂಸ್
ಕನ್ನಡಪ್ರಭದಲ್ಲಿ ಪ್ರಕಟವಾದ ದೆಹಲಿಯಿಂದ ಕಂಡ ರಾಜಕಾರಣ ಅಂಕಣದಿಂದ 

click me!