ಪ್ರಧಾನಿ ಮೋದಿ ಭೇಟಿ ಮಾಡಿದ ಮಮತಾ ಬ್ಯಾನರ್ಜಿ, 1 ಲಕ್ಷ ಕೋಟಿ ರೂ ಪರಿಹಾರ ಬಿಡುಗಡೆಗೆ ಆಗ್ರಹ!

By Suvarna NewsFirst Published Aug 6, 2022, 10:35 AM IST
Highlights

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 4 ದಿನದ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿಯಾದ ಮಮತಾ ಬ್ಯಾನರ್ಜಿ ಪರಿಹಾರ ಹಣ ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ. 

ನವದೆಹಲಿ(ಆ.06):  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 4 ದಿನದ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ನೀತಿ ಆಯೋಗದ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ದೀದಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ದೆಹಲಿ ಪ್ರವಾಸದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಬಂಗಾಳಕ್ಕೆ ಕೇಂದ್ರದಿಂದ ವಿವಿಧ ಯೋಜನೆಗಳಿಗೆ 1 ಲಕ್ಷ ಕೋಟಿ ರು. ಬರಬೇಕು. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಇನ್ನೂ ಕೆಲವು ಕೇಂದ್ರೀಯ ಯೋಜನೆಗಳ 17,996 ಕೋಟಿ ರು. ಬಾಕಿ ಬರಬೇಕು. ಈ ಹಣವನ್ನು ಬೇಗ ಕೇಂದ್ರ ಬಿಡುಗಡೆ ಮಾಡಬೇಕು ಎಂದು ಮಮತಾ ಮನವಿ ಮಾಡಿದ್ದಾರೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದ್ದಾರೆ. ಆದರೆ, ಈ ವೇಳೆ ರಾಜಕೀಯ ಚರ್ಚೆ ನಡೆಯಿತೇ ಎಂದು ಗೊತ್ತಾಗಿಲ್ಲ. ಆಪ್ತ ಪಾರ್ಥ ಚಟರ್ಜಿಯನ್ನು ಇ.ಡಿ ಅಧಿಕಾರಿಗಳು ಬಂಧಿಸಿದ ಬಳಿಕ ಇದು ಪ್ರಧಾನಿ ಜತೆಗಿನ ಮಮತಾರ ಮೊದಲ ಭೇಟಿಯಾಗಿದ್ದು, ಸಾಕಷ್ಟುಕುತೂಹಲ ಕೆರಳಿಸಿದೆ. ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಮಮತಾ 4 ದಿನಗಳ ಕಾಲ ದೆಹಲಿಯಲ್ಲಿದ್ದಾರೆ. ಇದರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಮಮತಾ ಭೇಟಿಯಾಗಲಿದ್ದಾರೆ. ಇದರೊಂದಿಗೆ ಮಮತಾ ವಿಪಕ್ಷಗಳ ನಾಯಕರನ್ನೂ ಭೇಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗದ ಸಭೆ ಆ. 7ರಂದು ನಡೆಯಲಿದ್ದು, ಕೃಷಿ, ಆರೋಗ್ಯ ಹಾಗೂ ಆರ್ಥಿಕತೆಗೆ ಸಂಬಂಧಿತ ಹಲವಾರು ವಿಚಾರಗಳು ಇಲ್ಲಿ ಚರ್ಚೆಯಾಗಲಿವೆ. ಮಮತಾ ಕೂಡಾ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರದಿಂದ ಬರಬೇಕಿರುವ 1,00,968.44 ಕೋಟಿ ರೂಪಾಯಿ ಬಾಕಿ ಇದೆ. ಈ ಕುರಿತು ಪ್ರಧಾನಿ ಮೋದಿಗೆ ಮನವರಿಕೆ ಮಾಡಿರುವ ಮಮತಾ ಬ್ಯಾನರ್ಜಿ, ರಾಜ್ಯದ ವ್ಯವಾಹರ ನಡೆಸಲು ತೀವ್ರ ಸಮಸ್ಯೆಯಾಗುತ್ತಿದೆ. ಕಳೆದ ಹಲವು ಬಾರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ದ ಜಿಎಸ್‌ಟಿ ವಿತರಣೆ ವಿಳಂಬ ಕುರಿತು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಕೇಂದ್ರ ಶೀಘ್ರ ಜಿಎಸ್‌ಟಿ ಪಾಲು ನೀಡಿದೆ. ಆದರೆ ಬಿಜೆಪಿಯೇತರ ಆಡಳಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಪಾಲು ನೀಡಲು ವಿಳಂಬ ಮಾಡುತ್ತಿದೆ ಎಂದು ಹಲವು ಬಾರಿ ಆರೋಪಿಸಿದ್ದಾರೆ. 

ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!

ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ 27,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಪ್ರಧಾನ ಸಲಹೆಗಾರ ಅಮಿತ್ ಮಿತ್ರಾ ಜೂನ್ ತಿಂಗಳಲ್ಲಿ ಹೇಳಿಕೆ ನೀಡಿದ್ದರು. ಇದೀಗ ಎಲ್ಲಾ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಮತಾ ಬ್ಯಾನರ್ಜಿ ಮೋದಿ ಬಳಿ ಮನವಿ ಮಾಡಿದ್ದಾರೆ.  

ಪ್ರಧಾನಿ ಮೋದಿ ಭೇಟಿ ಬಳಿ ಇಡಿ ದಾಳಿ ಕುರಿತು ಚರ್ಚಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ದೀದಿ ಸರ್ಕಾರದ ಸಚಿವ ಪಾರ್ಥ ಚಟರ್ಜಿ ಈಗಾಗಲೇ ಇಡಿ ವಶದಲ್ಲಿದ್ದಾರೆ.  ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಯಾಗಿರುವ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಕೋಲ್ಕತಾ ವಿಶೇಷ ನ್ಯಾಯಾಲಯ ಶುಕ್ರವಾರ 14 ದಿನದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಪಾರ್ಥ ಹಾಗೂ ಅರ್ಪಿತಾ ಇಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಆ.18ರಂದು ಇಬ್ಬರಿಗೂ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಆದೇಶಿಸಿದೆ. ಜು.23ರಿಂದ ಪಾರ್ಥ ಹಾಗೂ ಅರ್ಪಿತಾ ಇ.ಡಿ. ಬಂಧನದಲ್ಲಿದ್ದಾರೆ. ಅರ್ಪಿತಾ ಫ್ಲಾಟುಗಳಿಂದ 49.80 ಕೋಟಿಗೂ ಅಧಿಕ ನಗದು, ಚಿನ್ನಾಭರಣಗಳು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾಗಿ ಇ.ಡಿ. ತಿಳಿಸಿದೆ. ಈ ದಾಳಿ ಬಂಧನ ಬಳಿಕ ಮಮತಾ ಬ್ಯಾನರ್ಜಿ ಇದೇ ಮೊದಲ ಬಾರಿ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 

ದೀದಿ ವಿರುದ್ಧ ಬಿಜೆಪಿ ವಾಗ್ದಾಳಿ: ಇಷ್ಟು ಹಣ ಎಲ್ಲಿಂದ ಬಂತು ಎಂದು ಟಿಎಂಸಿ ಹೇಳಲಿ

click me!