
ಲಖನೌ: ಐದಾರು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಮನೆಯೂಟ ಸವಿಯಲು ಸಾಧ್ಯವಾಗಿಲ್ಲ. ಬಾಹ್ಯಾಕಾಶ ಕೇಂದ್ರದಿಂದ ವಾಪಸಾದ ಕೂಡಲೇ ತಾಯಿ ಮಾಡಿದ ಅಡುಗೆ ಸವಿಯಲು ಕಾತರನಾಗಿರುವೆ ಎಂದು ಜು.14ರಂದು ಅಂತರಿಕ್ಷದಿಂದ ವಾಪಸಾಗುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಿಳಿಸಿದ್ದಾರೆ.
ನಾಸಾದ ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜೂ.25ರಂದು ತೆರಳಿರುವ ಶುಭಾಂಶು ಶುಕ್ಲಾ ಅವರು ಕುಟುಂಬ ಸದಸ್ಯರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ತಾವು ಮನೆಯೂಟ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಆತನ ತಾಯಿ ಆಶಾ ಶುಕ್ಲಾ ಮಾತನಾಡಿ, ಬಾಹ್ಯಾಕಾಶದ ಚಿತ್ರಣ ನೋಡಿ ಅಚ್ಚರಿಯಾಯಿತು. ಬಾಹ್ಯಾಕಾಶದಿಂದ ವಾಪಸಾದ ಬಳಿಕ ಆರು ವರ್ಷಗಳಿಂದ ಮಿಸ್ ಮಾಡಿಕೊಳ್ಳುತ್ತಿರುವ ತನ್ನ ಇಷ್ಟದ ಮನೆಯೂಟ, ತಿಂಡಿ-ತಿನಿಸು ಸವಿಯಬೇಕೆಂದು ಹೇಳಿದ್ದಾನೆ. ಆತನಿಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿ ಬಡಿಸಲು ನಾನು ಸಿದ್ಧ ಎಂದು ತಾಯಿ ಆಶಾ ಶುಕ್ಲಾ ತಿಳಿಸಿದ್ದಾರೆ.
ಆತ ವಿಡಿಯೋ ಕರೆ ಮಾಡಿ ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ಲಿ ಕೆಲಸ ಮಾಡುತ್ತಾನೆ, ಎಲ್ಲಿ ಮಲಗುತ್ತಾನೆ ಮತ್ತು ಆತನ ಲ್ಯಾಬ್, ಆತನ ನಿತ್ಯದ ಕೆಲಸ ಕಾರ್ಯಗಳ ಕುರಿತು ತೋರಿಸಿದ್ದಾನೆ. ಮಗನ ಜತೆ ಮಾತನಾಡಿ ಖುಷಿಯಾಯಿತು. ಆತ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ್ದಾನೆ. ಆತನ ವಾಪಸಾತಿಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ತಂದೆ ದಯಾಳ್ ಶುಕ್ಲಾ ಹೇಳಿದ್ದಾರೆ.
ಶುಭಾಂಶು ಶುಕ್ಲಾ ಮತ್ತು ಇತರೆ ಮೂವರು ಗಗನಯಾತ್ರಿಗಳು ಜು.14ರಂದು ಭೂಮಿಗೆ ವಾಪಸಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ