ವೀರ್‌ ಸಾವರ್ಕರ್‌ಗೆ ಭಾರತ ರತ್ನ, ಯಾರೂ ಶಿಫಾರಸು ಮಾಡುವ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ

By Santosh NaikFirst Published Aug 1, 2023, 5:04 PM IST
Highlights

ಕ್ರಾಂತಿಕಾರಿ ವಿಡಿ ಸಾವರ್ಕರ್‌ಗೆ ಭಾರತ ರತ್ನ ನೀಡುವಂತೆ ಹಲವು ಪಕ್ಷಗಳಿಂದ ಶಿಫಾರಸುಗಳು ಬಂದಿದೆ. ಆದರೆ, ಭಾರತ ರತ್ನ ಪ್ರಶಸ್ತಿಗೆ ಯಾವುದೇ ಶಿಫಾರಸು ಅಗತ್ಯವಿಲ್ಲ. ಅದನ್ನು ಕೇಂದ್ರ ಸರ್ಕಾರವೇ ನಿರ್ಧಾರ ಮಾಡುತ್ತದೆ ಎಂದು ಲೋಕಸಭೆಗೆ ಹೇಳಿದೆ.
 

ನವದೆಹಲಿ (ಆ.1): ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ವಿವಿಧ ಪಕ್ಷಗಳಿಂದ ವಿವಿಧ ನಾಯಕರುಗಳಿಂದ ಸಲಹೆಗಳು ಬರುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಆದರೆ, ಭಾರತ ರತ್ನ ಪ್ರಶಸ್ತಿಗೆ ಯಾವುದೇ ಔಪಚಾರಿಕ ಸಲಹೆ ಅಗತ್ಯವಿಲ್ಲ. ಭಾರತ ರತ್ನ ಯಾರಿಗೆ ನೀಡಬೇಕೆಂಬುದರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವತ್ತ ಸರ್ಕಾರ ಏನಾದರೂ ಹೆಜ್ಜೆ ಇಟ್ಟಿದೆಯೇ? ಈ ಬಗ್ಗೆ ಯಾವುದೇ ಜನಪ್ರತಿನಿಧಿಯಿಂದ ಸರಕಾರಕ್ಕೆ ಶಿಫಾರಸ್ಸು ಬಂದಿದೆಯೇ? ಎಂದು ಲೋಕಸಭೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವಾಲಯ ಈ ಮಾಹಿತಿಯನ್ನು ಸಂಸತ್ತಿಗೆ ನೀಡಿದೆ. ಬಿಜೆಪಿ, ಶಿವಸೇನೆಯಂತಹ ಪಕ್ಷಗಳಲ್ಲದೆ, ಹಿಂದೂ ಸಂಘಟನೆಗಳು ವೀರ್ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೆಂದು ಹಲವು ಬಾರಿ ಒತ್ತಾಯಿಸಿವೆ. ಅದೇ ಸಮಯದಲ್ಲಿ, ಸಾವರ್ಕರ್ ಬ್ರಿಟಿಷರ ಕ್ಷಮೆ ಕೇಳಿದ್ದರು ಮತ್ತು ಅವರು ಬ್ರಿಟಿಷರಿಂದ ಪ್ರತಿ ತಿಂಗಳು 60 ರೂಪಾಯಿ ಪಿಂಚಣಿ ಪಡೆಯುತ್ತಿದ್ದರು ಎಂದು ಕಾಂಗ್ರೆಸ್ ಹೇಳುತ್ತದೆ. ಗಾಂಧಿ ಹತ್ಯೆಯಲ್ಲಿ ಅವರ ಹೆಸರಿದೆ, ಅಂತಹ ವ್ಯಕ್ತಿಗೆ ಭಾರತ ರತ್ನ ನೀಡಬಾರದು ಎಂದು ಹೇಳುತ್ತಿದೆ.

ಇನ್ನೊಂದೆಡೆ 2020ರಲ್ಲಿ ಸಂಸ್ಕೃತಿ ಸಚಿವಾಲಯ ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ  ಅಂಡಮಾನ್ ಮತ್ತು ನಿಕೋಬಾರ್ ಆಡಳಿತದಲ್ಲಿ ವೀರ್‌ ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮೆ ಯಾಚಿಸಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.

ಸೆಪ್ಟೆಂಬರ್ 2019 ರಲ್ಲಿ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಉದ್ಧವ್ ಠಾಕ್ರೆ ಒತ್ತಾಯಿಸಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಸಾವರ್ಕರ್ ದೇಶದ ಮೊದಲ ಪ್ರಧಾನಿ ಆಗಿದ್ದರೆ, ಪಾಕಿಸ್ತಾನ ಎಂದಿಗೂ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದಿದ್ದರು. ಗಾಂಧಿ ಮತ್ತು ನೆಹರೂ ಅವರ ಕಾರ್ಯಗಳನ್ನು ನಾವು ನಿರಾಕರಿಸುವುದಿಲ್ಲ. ಮಹಾತ್ಮ ಗಾಂಧೀಜಿ ಮತ್ತು ಜವಾಹರಲಾಲ್ ನೆಹರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಹಾಗಂತ ರಾಷ್ಟ್ರದ ಅಭಿವೃದ್ಧಿಗೆ ಬೇರೆ ಯಾರೂ ಕೊಡುಗೆ ನೀಡಿಲ್ಲ ಎನ್ನುವುದೂ ಅರ್ಥವಲ್ಲ ಎಂದಿದ್ದಾರೆ.

ವರ್ಸೋವಾ - ಬಾಂದ್ರಾ ಸೀ ಲಿಂಕ್‌ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ: ಮಹಾರಾಷ್ಟ್ರ ಕ್ಯಾಬಿನೆಟ್‌ ನಿರ್ಧಾರ

2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸಾವರ್ಕರ್‌ಗೆ ಭಾರತ ರತ್ನ ನೀಡುವ ಭರವಸೆ ಕೊಟ್ಟಿತ್ತು. ಈ ಕುರಿತು ಮಾತನಾಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಸಾವರ್ಕರ್ ಅವರ ಜೀವನದಲ್ಲಿ ಎರಡು ಅಂಶಗಳಿದ್ದವು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಇದ್ದಿದ್ದು ನಿಜ. ಕಾಲಾಪಾನಿ ಶಿಕ್ಷೆಗೆ ಕ್ಷಮೆ ಕೇಳಿದ ಬಳಿಕ, ಅವರ ಹೆಸರು ಮಹಾತ್ಮಾ ಗಾಂಧಿ ಅವರ ಹತ್ಯೆಯಲ್ಲಿ ಕೇಳಿ ಬಂದಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಖುಲಾಸೆ ಮಾಡಲಾಗಿತ್ತು ಎಂದಿದ್ದರು.

ವೀರ್‌ ಸಾವರ್ಕರ್‌ ಕ್ಷಮಾಪಣಾ ಪತ್ರದ ಸತ್ಯ ಬಹಿರಂಗಪಡಿಸಿದ ಸಾಹಿತಿ ಎಸ್.ಎಲ್. ಭೈರಪ್ಪ

ಇನ್ನು ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಅವರು ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಫೆಬ್ರವರಿ 2023 ರಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ವೀರ್ ಸಾವರ್ಕರ್ ಅವರು ಮಹಾರಾಷ್ಟ್ರದ ಶ್ರೇಷ್ಠ ವ್ಯಕ್ತಿ. ಅವರು ಮಹಾರಾಷ್ಟ್ರದ ವೀರ ಪುತ್ರ. ಈ ಬಗ್ಗೆ ಕೇಂದ್ರ ಸರಕಾರ ಯೋಚಿಸಬೇಕು ಎಂದಿದ್ದರು.

click me!