
ಇತ್ತೀಚೆಗೆ ಮಾಹಾರಾಷ್ಟ್ರ ಕೊಲ್ಹಾಪುರದಲ್ಲಿನ ಜೈನ ಮಠವೊಂದರ ಆನೆ ಮಾಧುರಿಯನ್ನು ಅಂನತ್ ಅಂಬಾನಿ ಮಾಲೀಕತ್ವದ ವನ್ಯಜೀವಿಗಳ ಚಿಕಿತ್ಸಾ ಹಾಗೂ ಮೂಲಸೌಕರ್ಯ ಕೇಂದ್ರವಾಗಿರುವ ವನತಾರಗೆ (ವಂತಾರಾ) ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೋಲ್ಹಾಪುರದವ ಪಾಲಿಗೆ ಅತ್ಯಂತ ಪ್ರೀತಿಯ ಆನೆ ಎನಿಸಿದ್ದ ಈ ಆನೆಯನ್ನು ವನತಾರಕ್ಕೆ(ವಂತಾರಾ) ಸ್ಥಳಾಂತರಿಸುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ವಿರೋಧದ ಭಾಗವಾಗಿ ಅಂಬಾನಿ ಮಾಲೀಕತ್ವದ ಜಿಯೋ ಸಿಮ್ ಅನ್ನು ಕೂಡ ಜನ ಬಹಿಷ್ಕರಿಸಿದ್ದರು. ಆದರೆ ಈಗ ವನತಾರಾ ಆನೆ ಮಧುರಿಯನ್ನು ಬಹಳ ಪ್ರೀತಿಸುವ ಕೊಲ್ಹಾಪುರದ ಜನರಿಗೆ ಪ್ರೀತಿಯ ಸಂದೇಶವೊಂದನ್ನು ಕಳುಹಿಸಿದೆ. ವನತಾರದ(ವಂತಾರಾ) ವೀಡಿಯೋ ಸಂದೇಶ ಹಾಗೂ ಪ್ರಕಟಣೆ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಅದರಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಇದೆ.
ವೀಡಿಯೋದಲ್ಲಿ ಆನೆ ಮಾಧುರಿಗೆ ಏರ್ಪಡಿಸಿದ ವಿಶೇಷ ಕಾಳಜಿಯ ಬಗ್ಗೆ ವಿವರ ನೀಡಲಾಗಿದೆ. ಮಾಧುರಿಗಾಗಿ ಮಾಡಲಾಗುತ್ತಿರುವ ವಿಶೇಷ ವ್ಯವಸ್ಥೆಗಳು ಮತ್ತು ವನತಾರಾ ಈ ಬೃಹತ್ ಪ್ರಾಣಿಗೆ ಹೇಗೆ ಸಮಾಧಾನ ಹೇಳುವ ಮನೆಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ವೀಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ. ವಂತಾರಾದ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಕೊಲ್ಹಾಪುರದ ಜನರಿಗೆ ಹೃದಯ ತುಂಬಿದ ಸಂದೇಶ, ನಿಮ್ಮ ಪ್ರೀತಿ ಮಾಧುರಿಯನ್ನು ಸುತ್ತುವರೆದಿದೆ ಹಾಗೂ ಅದು ಕಾಣಿಸುತ್ತಿದೆ. ವಂತಾರಾದಲ್ಲಿ ಆಕೆ ಪ್ರತಿದಿನವೂ ವಂತಾರದಲ್ಲಿ(Vantara) ಆಕೆ ಪ್ರತಿದಿನವೂ ಸೌಜನ್ಯದಿಂದ ಮುನ್ನಡೆಯುತ್ತಿದ್ದಾಳೆ.
ಆಕೆ ಸೌಮ್ಯ ಚಲನೆ, ಪೌಷ್ಟಿಕ ಆಹಾರ, ತಜ್ಞರ ಆರೈಕೆ ಮತ್ತು ನಿರಂತರ ಚಿಕಿತ್ಸಕ ಬೆಂಬಲದಿಂದ ಮಾಧುರಿ ಮಾರ್ಗದರ್ಶನ ಪಡೆಯುತ್ತಿದ್ದಾಳೆ. ಅವರು ಪರಸ್ಪರರ ಸಹವಾಸದಲ್ಲಿ ತಮ್ಮ ನಿಜವಾದ ಆತ್ಮವನ್ನು ಕಂಡುಕೊಳ್ಳುತ್ತಾರೆ. ಎಂದು ಬರೆಯಲಾಗಿದ್ದು, ವೀಡಿಯೋದಲ್ಲಿ ಮರಾಠಿ ಭಾಷೆಯಲ್ಲಿ ಮಾಧುರಿಗೆ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬುದನ್ನು ಅಲ್ಲಿನ ನೌಕರರು ವಿವರಿಸುತ್ತಿದ್ದಾರೆ. ವೀಡಿಯೋದಲ್ಲಿ ಮಾಧುರಿ ವನತಾರಾದ(Vantara) ಕಾಡಿನಲ್ಲಿ ಓಡಾಡುತ್ತ ಮೇವು ತಿನ್ನುವುದನ್ನು ಕಾಣಬಹುದಾಗಿದೆ.
ಜೊತೆಗೆ ಆಕೆಗೆ ಯಾವುದೆಲ್ಲಾ ಆಹಾರಗಳನ್ನು ನೀಡಲಾಗುತ್ತಿದೆ ಎಂತಹ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ವೀಡಿಯೋದಲ್ಲಿ ವನತಾರಾದ ತಜ್ಞರು ವಿವರಿಸಿದ್ದಾರೆ. ಮಾಧುರಿ ವನತಾರಕ್ಕೆ(Vantara) ಬಂದಾಗ ನಾವು ಆಕೆಗೆ ಬೇಕಾದ ಸಮಯ ಹಾಗೂ ಸ್ಥಳವನ್ನು ನೀಡಿದೆವು. ನಾವು ಆಕೆಗೆ ವೈದ್ಯಕೀಯ ತಪಾಸಣೆಯನ್ನು ನಡೆಸಿದೆವು. ಅದರ ಆಧಾರದ ಮೇಲೆ ದೀರ್ಘಾಕಾಲದ ಚಿಕಿತ್ಸೆಗೆ ಯೋಜನೆ ರೂಪಿಸಿದ್ದೇವೆ. ಜೊತೆಗೆ ಅದಕ್ಕೆ ವೈದ್ಯಕೀಯ ಚಿಕಿತ್ಸೆ ಮುಂದುವರೆದಿದೆ. ಆಕೆಯ ಕಾಲಿನಲ್ಲಿ ಆಗಿರುವ ಗಾಯಕ್ಕೆ ನಾವು ಔಷಧಿ ಹಚ್ಚಿದ್ದೇವೆ. ಇದರ ಜೊತೆಗೆ ನಾವು ಹೈಡ್ರೋಥೆರಪಿಯನ್ನು ಅನುಸರಿಸಿದ್ದೇವೆ. ಅದರ ಪ್ರಕಾರ ವಂತಾರದಲ್ಲಿರುವ ದೊಡ್ಡದಾದ ಕೆರೆಯಲ್ಲಿ ಆಕೆ ವಿರಮಿಸುತ್ತಾಳೆ, ಓಡಾಡುತ್ತಾಳೆ ಇದು ಆಕೆಗೆ ಅರ್ಥರೈಟಿಸ್ನ ನೋವನ್ನು ಕಡಿಮೆ ಮಾಡುತ್ತದೆ.
ಹಾಗೆಯೇ ಆಕೆಗೆ ಬೇಕಾದ ಪೌಷ್ಠಿಕ ಆಹಾರದ ಬಗ್ಗೆಯೂ ನಾವು ಗಮನ ಹರಿಸಿದ್ದು, ವಿಶೇಷವಾದ ವೈಯಕ್ತಿಕ ಆಹಾರ ಯೋಜನೆಯನ್ನು ರೂಪಿಸಿದ್ದೇವೆ. ಇದರ ಜೊತೆ ವಂತಾರದಲ್ಲಿರುವ ಇತರ ಆನೆಗಳಿಗೆ ಆಕೆಯನ್ನು ಪರಿಚಯ ಮಾಡಿಕೊಟ್ಟಿದ್ದೇವೆ. ಅವುಗಳು ಕೂಡ ಆಕೆಯಷ್ಟೇ ಶಾಂತವಾಗಿರುವ ಆನೆಗಳಾಗಿವೆ. ಹಾಗೆಯೇ ಆಕೆ ನಿಧಾನವಾಗಿ ಅವರೊಂದಿಗೆ ಸ್ನೇಹವನ್ನು ಆರಂಭಿಸಿದ್ದಾಳೆ. ಆನೆಯ ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ನಾವು ಇದು ಆದಷ್ಟು ಬೇಗ ಆಗಬೇಕು ಎಂದು ಬಯಸಿದ್ದೇವೆ. ಆಕೆ ಇಲ್ಲಿ ಕುಟುಂಬದಂತಹ ಬಾಂಧವ್ಯವನ್ನು ಸೃಷ್ಟಿಸಿಕೊಳ್ಳುತ್ತಾಳೆ ಎಂಬ ಭರವಸೆ ನಮಗಿದೆ ಎಂದು ವಂತಾರಾದ ತಜ್ಞರು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಮತ್ತೆ ಕೆಲವರು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 36 ವರ್ಷದ ಈ ಆನೆ ಕರ್ನಾಟಕದಲ್ಲಿ ಜನಿಸಿತ್ತು ಮಹಾದೇವಿ ಅಲಿಯಾಸ್ ಮಾಧುರಿ ಎಂಬ ಆನೆ 30 ವರ್ಷಗಳಿಂದ ಕೊಲ್ಹಾಪುರದ ನಾಂದಣಿಯ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಜೈನಮಠದಲ್ಲಿತ್ತು.
ಆದರೆ ಈ ಆನೆಯ ಆರೋಗ್ಯ ಹದಗೆಟ್ಟಿದ್ದು, ಅದರ ಮಾನಸಿಕ ಸ್ಥಿಮಿತ ತಪ್ಪಿದೆ, ಹಾಗಾಗಿ ಅದನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರಾಣಿದಯಾ ಸಂಸ್ಥೆಯೊಂದು ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ಜು.16ರಂದು ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್, ಗುಜರಾತ್ನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಆನೆಗೆ ಪುನರ್ವಸತಿ ನೀಡುವಂತೆ ಆದೇಶಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಸಹ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿದಿತ್ತು. ಅದರಂತೆ ಆನೆಯನ್ನು ವನತಾರಕ್ಕೆ ಕಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ