ಮಕ್ಕಳ ರಕ್ಷಿಸಲು ಚಿಕ್ಕ ಮಕ್ಕಳಿರುವ ಪೋಷಕರಿಗೆ ಬೇಗ ಲಸಿಕೆ!

By Suvarna NewsFirst Published May 24, 2021, 11:38 AM IST
Highlights

* ಮಕ್ಕಳ ರಕ್ಷಿಸಲು ಚಿಕ್ಕ ಮಕ್ಕಳ ಹೊಂದಿರುವ ಪೋಷಕರಿಗೆ ಲಸಿಕೆ

* 10 ವರ್ಷಕ್ಕಿಂತ ಚಿಕ್ಕ ಮಕ್ಕಳು ಇರುವವರಿಗೆ ಆದ್ಯತೆಯಲ್ಲಿ ಲಸಿಕೆ

* ಇಂತಹ ಪೋಷಕರ ಗುರುತಿಸಲು ಮುಂದಾದ ಯೋಗಿ ಸರ್ಕಾರ

ಲಖನೌ(ಮೇ.24): ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂಬ ಮುನ್ಸೂಚನೆಗಳ ಬೆನ್ನಲ್ಲೇ, 10 ವರ್ಷದೊಳಗಿನ ಮಕ್ಕಳ ಪೋಷಕರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಹೀಗೆ ಮಾಡುವುದರಿಂದ ಪ್ರತಿ ಕುಟುಂಬಕ್ಕೂ ಕೋವಿಡ್‌ನಿಂದ ರಕ್ಷಣೆ ಸಿಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಿಳಿಸಿದ್ದಾರೆ.

ಮೂರನೇ ಅಲೆ ಬರಲಿದೆ ಎಂಬ ಕಾರಣಕ್ಕೆ ವಿವಿಧ ರಾಜ್ಯ ಸರ್ಕಾರಗಳು ಆಸ್ಪತ್ರೆಯಂತಹ ಮೂಲಸೌಕರ್ಯಗಳನ್ನು ಕಲ್ಪಿಸುವ ಸಿದ್ಧತೆಯಲ್ಲಿ ತೊಡಗಿದ್ದರೆ, ಮಕ್ಕಳ ಪೋಷಕರನ್ನು ಗುರುತಿಸಿ ಲಸಿಕೆ ನೀಡುವಂತಹ ವಿನೂತನ ಕಾರ್ಯಕ್ಕೆ ಮುಂದಾಗಿರುವ ಮೊದಲ ರಾಜ್ಯ ಉತ್ತರಪ್ರದೇಶ ಎಂಬುದು ಗಮನಾರ್ಹ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರ ಸ್ವಗ್ರಾಮ ಸೈಫೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಆದಿತ್ಯನಾಥ್‌ ಅವರು ಈ ಮಹತ್ವದ ಘೋಷಣೆ ಮಾಡಿದರು. ಮೂರನೇ ಅಲೆ ಹಿನ್ನೆಲೆಯಲ್ಲಿ ತಲಾ 100 ಹಾಸಿಗೆ ಸಾಮರ್ಥ್ಯದ ಮಕ್ಕಳ ಐಸಿಯು ಸ್ಥಾಪಿಸುವಂತೆ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ನ್ಯಾಯಾಂಗ ಅಧಿಕಾರಿಗಳು, ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಎಲ್ಲ ಜಿಲ್ಲೆಗಳಲ್ಲೂ ಇನ್ನು ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ವಿಶೇಷ ಶಿಬಿರ ಆಯೋಜಿಸಲಾಗುತ್ತದೆ ಎಂದರು. ಸದ್ಯ ಲಖನೌ ಹಾಗೂ ನೋಯ್ಡಾದಲ್ಲಿ ಮಾತ್ರ ಈ ವರ್ಗದವರಿಗೆ ಲಸಿಕೆ ನೀಡಲಾಗುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!