ದುರಂತದ ನಡುವೆ ಕುದುರಿದ ಲಕ್‌, ಪುಟ್ಟ ಗ್ರಾಮ ಬಹನಗಾ ಅಭಿವೃದ್ಧಿಗೆ 2 ಕೋಟಿ ಪ್ಯಾಕೇಜ್‌!

By Santosh NaikFirst Published Jun 21, 2023, 12:59 PM IST
Highlights

ಈ ತಿಂಗಳ ಆರಂಭದಲ್ಲಿ ಶತಮಾನದ ಘೋರ ರೈಲು ದುರಂತಕ್ಕೆ ಸಾಕ್ಷಿಯಾದ ಒಡಿಶಾದ ಬಹನಗಾ ಜಿಲ್ಲೆಯ ಪಾಲಿಗೆ ಇದೇ ದುರಂತ ಅದೃಷ್ಟವನ್ನೂ ತಂದುಕೊಟ್ಟಿದೆ. ರೈಲು ದುರಂತ ನಡೆದ ಬಳಿಕ ಸ್ಥಳೀಯರು ತೋರಿದ ಸಮಯಪ್ರಜ್ಞೆ ಹಾಗೂ ಪರಿಹಾರ ಕಾರ್ಯದ ನೆರವುಗಳನ್ನೆಲ್ಲಾ ಪರಿಗಣಿಸಿಸ ದೊಡ್ಡ ಪ್ಯಾಕೇಜ್‌ ಈ ಗ್ರಾಮಕ್ಕೆ ಘೋಷಣೆಯಾಗಿದೆ.

ಭುವನೇಶ್ವರ (ಜೂ.21): ಒಡಿಶಾ ರಾಜ್ಯದ ಪುಟ್ಟ ಗ್ರಾಮ ಬಹನಗಾ  ಈ ತಿಂಗಳ ಆರಂಭದಲ್ಲಿ ವಿಶ್ವವ್ಯಾಪಿ ಸುದ್ದಿಯಾಯಿತು. ಅದಕ್ಕೆ ಕಾರಣ ಕೋರಮಂಡಲ್‌ ಎಕ್ಸ್‌ಪ್ರೆಸ್ ಒಳಗೊಂಡ ತ್ರಿವಳಿ ರೈಲು ದುರಂತ. ಇದರಲ್ಲಿ ಈವರೆಗೂ 292 ಮಂದಿ ಸಾವು ಕಂಡಿದ್ದು, 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರಿಗೆ ಪರಿಹಾರ ಹಣ ತಲುಪಿಸುವ ಕಾರ್ಯಗಳೂ ನಡೆಯುತ್ತಿದೆ. ಈ ನಡುವೆ ರೈಲು ದುರಂತ ಪುಟ್ಟ ಗ್ರಾಮ ಬಹನಗಾದ ಅದೃಷ್ಟವನ್ನೇ ಬದಲಾಯಿಸಿದೆ. ಮೂರು ದಿನಗಳ ಒಡಿಶಾ ಭೇಟಿ ಕೈಗೊಂಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮಂಗಳವಾರ ಬಹನಗಾ ಗ್ರಾಮಕ್ಕೂ ಭೇಟಿ ನೀಡಿದ್ದರು. ಈ ವೇಳೆ ಇಡೀ ಬಾಲಸೋರ್‌ ಜಿಲ್ಲೆಯ ಈ ಗ್ರಾಮದ ಅಭಿವೃದ್ಧಿಗೆ 2 ಕೋಟಿ ರೂಪಾಯಿ ಪ್ಯಾಕೇಜ್‌ಅನ್ನು ಗೋಷಣೆ ಮಾಡಿದ್ದಾರೆ. ಅದರೊಂದಿಗೆ ಜೂನ್‌ 2 ರಂದು ದುರಂತ ನಡೆದ ಸಂದರಭದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕೈಜೋಡಿಸಿದ್ದ ಗ್ರಾಮಸ್ಥರನ್ನೂ ಭೇಟಿಯಾದರು. ರೈಲಿನ ಅವಶೇಷಗಳ ಅಡಿ ಸಿಕ್ಕ ಜನರನ್ನು ಹೊರತೆಗೆದ, ಶವಗಳನ್ನು ಗುರುತಿಸಿದ ಕೆಲ ಸ್ಥಳೀಯ ಜನರನ್ನೂ ಅವರು ಈ ವೇಳೆ ಸನ್ಮಾನಿಸಿದರು.

ರಾಜ್ಯ ಹಾಗೂ ಕೇಂದ್ರ ಎನ್‌ಡಿಆರ್‌ಎಫ್‌ ಪಡೆಗಳು ಬಹನಗಾ ತಲುಪುವ ಮುನ್ನವೇ ತಮ್ಮ ಕೈಲಾದಷ್ಟು ರಕ್ಷಣಾ ಕಾರ್ಯಗಳನ್ನು ಈ ಊರಿನ ಜನತೆ ಮಾಡಿದ್ದರು. ಅದಕ್ಕಾಗಿ ಇಡೀ ಗ್ರಾಮಕ್ಕೆ ಉಡುಗೊರೆಯ ರೀತಿಯಲ್ಲಿ ಪ್ಯಾಕೇಜ್‌ಅನ್ನು ಸಚಿವರು ಘೋಷಣೆ ಮಾಡಿದ್ದಾರೆ. 1 ಕೋಟಿ ರೂಪಾಯಿಯನ್ನು ಸಂಸದರ ನಿಧಿಯಿಂದ ಗ್ರಾಮಕ್ಕೆ ನೀಡಲಾಗುತ್ತದೆ. ಇದನ್ನು ಗ್ರಾಮದ ರಸ್ತೆ, ಒಳಚರಂಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಅದರೊಂದಿಗೆ ಇನ್ನೂ 1 ಕೋಟಿ ರೂಪಾಯಿಯನ್ನು ರೈಲ್ವೇಸ್‌ನ ನಿಧಿಯಿಂದ ನೀಡಲಾಗುತ್ತದೆ. ಈ ಹಣವನ್ನು ಗ್ರಾಮದಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು ಬಳಸಿಕೊಳ್ಳಬೇಕು ಎನ್ನಲಾಗಿದೆ.

ರೈಲು ಅಪಘಾತದ ನಂತರ ಬಹನಗಾದ ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದ ರೀತಿ ನಿಜವಾಗಿಯೂ ಶ್ಲಾಘನೀಯವಾಗಿದೆ, ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.  ಅದರೊಂದಿಗೆ ಗ್ರಾಮದ ಮನೆಮನೆಗೊ ಹೊಕ್ಕಿ, ಅಲ್ಲಿನ ಜಗಲಿಯ ಮೇಲೆ ಕುಳಿತು ಜನರಿಗೆ ಧನ್ಯವಾದ ಹೇಳಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ಪುರಿಗೆ ಭೇಟಿ ನೀಡಿದ ಅವರು, ಪುರಿ ರೈಲ್ವೆ ನಿಲ್ದಾಣವನ್ನು ಪರಿಶೀಲಿಸುವಾಗ ರಥಯಾತ್ರೆಯ ಅವಧಿಯಲ್ಲಿ ಪ್ರಯಾಣಿಕರ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಸುಧಾರಿಸುವ ಮಹತ್ವವನ್ನು ಒತ್ತಿ ಹೇಳಿದರು.

ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ

ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ವೈಷ್ಣವ್ ಅವರು ಯಾತ್ರಿಕರು ಮತ್ತು ಭಕ್ತರ ಅನುಕೂಲಕ್ಕಾಗಿ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು. ಜೂನ್ 2 ರಂದು ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಹೌರಾಕ್ಕೆ ಹೋಗುವ ಎಸ್‌ಎಂವಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತವಾಗಿತ್ತು. ಇದು ದೇಶದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ರೈಲು ಅಪಘಾತ ಎನಿಸಿದೆ.

ಕೋರಮಂಡಲ್‌ ಎಕ್ಸ್‌ಪ್ರೆಸ್‌ ದುರಂತದ ಶವಗಳನ್ನು ಇಟ್ಟ ಶಾಲೆಯನ್ನು ಧ್ವಂಸ ಮಾಡಿದ ಸರ್ಕಾರ!

click me!