ನವದೆಹಲಿ(ನ.15): ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಬಿಜೆಪಿ(Bjp) ಸರ್ಕಾರ ಈಗಾಗಲೇ ಜನರ ಅನುಕೂಲಕ್ಕೆ ತಕ್ಕಂತೆ ಹಲವು ನಿಯಮದಲ್ಲಿ ಬದಲಾವಣೆ ಮಾಡಿದೆ. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ಪ್ರಕ್ರಿಯೆಗಳಿಂದ ವಿಳಂಬವಾಗುತ್ತಿದ್ದ ಮರಣೋತ್ತರ ಪರೀಕ್ಷೆ(Post-Mortem ) ಪ್ರೋಟೋಕಾಲ್ ಬದಲಿಸಲಾಗಿದೆ. ಇಷ್ಟು ದಿನ ಸೂರ್ಯನ ಬೆಳಕಿನ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಬೇಕು ಅನ್ನೋ ಸರ್ಕಾರಿ ನಿಯಮನ್ನು ಇದೀಗ ಬದಲಿಸಲಾಗಿದೆ. ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಆರೋಗ್ಯ ಇಲಾಖೆ ಸ್ವೀಕರಿಸಿದ ಹಲವು ಸಲಹೆ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಇದೀಗ ಪೋಸ್ಟ್ ಮಾರ್ಟಮ್ (Post-Mortem procedure) ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಸೂರ್ಯಾಸ್ತಮಾನದ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಲು ಅನುವು ಮಾಡಿಕೊಡಲಾಗಿದೆ. ಆದರೆ ಸರಿಯಾದ ಸಲಕರಣೆ, ಸೌಲಭ್ಯ ಇರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ನೂತನ ನಿಯಮದಲ್ಲಿ ಹೇಳಿದೆ. ಇದರಿಂದ ದುಃಖಪ್ತ ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಮೃತದೇಹ ಸ್ವೀಕರಿಸಲು ಸಾಧ್ಯವಾಗಲಿದೆ. ಇದರ ಜೊತೆಗೆ ಅಂಗಾಂಗ ದಾನ ಹಾಗೂ ಕಸಿ ಚಿಕಿತ್ಸೆಗೂ ಇದು ನೆರವಾಗಲಿದೆ. ಇಂದಿನಿಂದಲೇ ನೂತನ ನಿಯಮ ಜಾರಿಯಾಗುತ್ತಿದೆ.
ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್ ಮಾರ್ಟಂ ಯಾಕಾಗಿಲ್ಲ?: ಇಂದ್ರಜಿತ್ ಹೇಳಿಕೆ, ಗಣ್ಯರಲ್ಲಿ ನಡುಕ!
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(Union Health Ministry), ಆರೋಗ್ಯ ಸೇವೆ ಮಹಾನಿರ್ದೇಶನಾಲಯ, ತಾಂತ್ರಿಕ ಸಮಿತಿ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿ, ಸುಧಾರಣೆಯಿಂದ ಇದೀಗ ರಾತ್ರಿಯಲ್ಲೂ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿದೆ. ಹಲವು ಸಂಸ್ಥೆಗಳು ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ಮಾಡಲು ಸಾಧ್ಯವಿದೆ. ಇದರ ಜೊತೆಗೆ ಮೃತದೇಹ ಸ್ವೀಕರಿಸುವು ಕುಟುಂಬಕ್ಕೆ ಶೀಘ್ರದಲ್ಲೇ ಮೃತದೇಹ ಸಿಗಲಿದೆ. ಇತ್ತ ಅಂಗಾಂಗ ದಾನವೂ ತಕ್ಕ ಸಮಯದಲ್ಲಿ ನಡೆಯಲಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಅಂಗಾಂಗ ದಾನಕ್ಕಾಗಿ ಮರಣೋತ್ತರ ಪರೀಕ್ಷೆಯನ್ನು ಆದ್ಯತೆ ಮೇಲೆ ಮಾಡಬೇಕು. ಅಂಗಾಂಗ ದಾನದ ಮರಣೋತ್ತರ ಪರೀಕ್ಷೆ ನಡೆಸಲು ಮೂಲ ಸೌಕರ್ಯ ಹೊಂದಿದಿರುವ ಆಸ್ಪತ್ರೆಗಳಲ್ಲಿ ಮಾಡಬೇಕು. ಇದು ರಾತ್ರಿವೇಳೆಯೂ ನಡೆಯಬೇಕು ಎಂದು ಆರೋಗ್ಯ ಇಲಾಖೆ ಹೊಸ ನಿಯಮದಲ್ಲಿ ಹೇಳಿದೆ,
ಸುಶಾಂತ್ ಸಿಂಗ್ ಸಾವಿನ ಸಂದೇಹಕ್ಕೆ ತೆರೆ ಎಳೆದ ಪೋಸ್ಟ್ ಮಾರ್ಟಂ ರಿಪೋರ್ಟ್
ಸರ್ಕಾರಿ ಆಸ್ಪತ್ರೆಯ ಮರೋಣತ್ತರ ಕೇಂದ್ರಗಳಲ್ಲಿನ ಮೂಲ ಸೌಕರ್ಯ ಮೇಲ್ನೋಟವನ್ನು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಪ್ರಭಾರಿ ನೋಡಿಕೊಳ್ಳಲಿದ್ದಾರೆ. ರಾತ್ರಿ ವೇಳೆ ನಡೆಸುವ ಮರಣತ್ತೋರ ಪರೀಕ್ಷೆಯ ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಭವಿಷ್ಯದ ದಾಖಲೆಗಳಿಗಾಗಿ ಇದು ಅತ್ಯವಶ್ಯಕ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಆದರೆ ಕೊಲೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ದೇಹ, ಅನುಮಾನಾಸ್ಪದ ಸಾವು ಪ್ರಕರಣಗಳ ಮರಣೋತ್ತರ ಪರೀಕ್ಷೆಯನ್ನು ರಾತ್ರಿ ವೇಳೆ ನಡೆಸಬಾರದು ಎಂದು ಸೂಚಿಸಲಾಗಿದೆ.
ಹಳೇ ನಿಯಮದ ಕುರಿತು ಹಲವು ದೂರುಗಳು ಕೇಳಿಬಂದಿತ್ತು. ಸಂಬಂಧಿಕರು ಮರಣೋತ್ತರ ಪರೀಕ್ಷೆಗಾಗಿ ಕಾಯುವ ಪರಿಸ್ಥಿತಿ, ಜಠಿಲ ನಿಯಮದಿಂದ ಹಲವು ಪ್ರಕರಣಗಳಲ್ಲಿ ಅಂಗಾಂಗ ದಾನವೂ ಅಸಾಧ್ಯವಾಗಿತ್ತು. ಹೀಗಾಗಿ ಈ ಎಲ್ಲಾ ದೂರು ಹಾಗೂ ಸಲಹೆಗಳನ್ನು ಆಧರಿಸಿ ಹೊಸ ನಿಯಮ ಘೋಷಿಸಿದೆ. ಈ ಕುರಿತು ಸಂಬಂಧಿತ ಸಚಿವಾಲಯಗಳು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರೋಟೋಕಾಲ್ ಬದಲಾವಣೆಯ ಕುರಿತು ಸೂಚನೆ ನೀಡಲಾಗಿದೆ.