
ಚೆನ್ನೈ: ಮೇಕೆದಾಟು ಡ್ಯಾಂ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ರಚನೆ ಆಗಬೇಕು ಎಂಬ ತಮಿಳುನಾಡು ವಿಧಾನಸಭೆಯ ನಿರ್ಣಯಕ್ಕೆ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ತೀವ್ರ ವಿರೋಧ ವ್ಯಕ್ತತಪಡಿಸಿದ್ದಾರೆ. ಈ ರೀತಿಯ ನಿರ್ಧಾರ ರಾಜ್ಯದ ಕಾನೂನುಬದ್ಧ ಹಕ್ಕಿನ ಜತೆ ರಾಜಿ ಮಾಡಿಕೊಳ್ಳಲಿದೆ ಮತ್ತು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಿಕೊಡುವ ಮೊದಲು ಹೊಸ ನ್ಯಾಯಮಂಡಳಿ ರಚನೆಯ ಆಗ್ರಹದ ಸಾಲುಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರಿಗೆ ಆಗ್ರಹಿಸಿದ್ದಾರೆ.
ಕಾವೇರಿ ನದಿ ವ್ಯಾಪ್ತಿಯಲ್ಲಿ ಯಾವುದೇ ಹೊಸ ನಿರ್ಮಾಣ ಯೋಜನೆಗಳನ್ನು ಕೈಗೆತ್ತುಕೊಳ್ಳುವ ಮೊದಲು ಕಾವೇರಿ ಕಣಿವೆಯ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿ ಸ್ಪಷ್ಟವಾಗಿ ಹೇಳಿದೆ. ಇಷ್ಟಿದ್ದರೂ ತಮಿಳುನಾಡು ಹೊಸ ನ್ಯಾಯಮಂಡಳಿಗೆ ಬೇಡಿಕೆ ಇಡುವುದು ಅನಗತ್ಯ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಂತೆ ಎಂದಿದ್ದಾರೆ.
ತಮಿಳುನಾಡು ಶಾಸನ ಸಭೆಯ ಪ್ರಸ್ತಾಪವು ಅನಗತ್ಯ ಹಾಗೂ ವಿರೋಧಾತ್ಮಕ ಎಂದು ಕರೆದಿರುವ ಅನ್ಬುಮಣಿ ಅವರು, . ನ್ಯಾಯಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಹೊಸ ವಾದ ಮಾಡಲು ಅವಕಾಶ ಸಿಗುತ್ತದೆ ಹಾಗೂ ತೀರ್ಪು ನಮ್ಮ ವಿರುದ್ಧವೇ ಬರಬಹುದು. ಇದು ಒಂದು ರೀತಿಯಲ್ಲಿ ನಮ್ಮ ತಲೆಯನ್ನು ನಾವೇ ಮೊಸಳೆಯ ಬಾಯಿಗಿಟ್ಟಂತೆ ಎಂದು ಹೇಳಿದ್ದಾರೆ.
ಹೊಸ ನ್ಯಾಯಮಂಡಳಿ
ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ನಿರ್ಣಯವನ್ನು ಈಗಾಗಲೇ ರೈತರು ವಿರೋಧಿಸಿದ್ದಾರೆ ಎಂದಿರುವ ಅವರು, ಮೇಕೆದಾಟು ವಿಚಾರದಲ್ಲಿ ನ್ಯಾಯವು ಸ್ಪಷ್ಟವಾಗಿ ತಮಿಳುನಾಡು ಪರ ಇರುವಾಗ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಬದಲು ಹೊಸ ನ್ಯಾಯಮಂಡಳಿ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರುವುದು ನಮ್ಮ ರಾಜ್ಯದ ಹಿತಾಸಕ್ತಿ ಅಡವಿಟ್ಟಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇಕೆದಾಟುಗೆ ಸಂಬಂಧಿಸಿ ತಮಿಳುನಾಡಿನ ಹಕ್ಕುಗಳನ್ನು ನಿಯಮಿತ ಕಾನೂನು ಹೋರಾಟದಿಂದ ಮತ್ತು ರಾಜಕೀಯ ಒತ್ತಡದಿಂದ ಮಾತ್ರ ರಕ್ಷಿಸಲು ಸಾಧ್ಯ. ಪಿಎಂಕೆ ಸೇರಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮಿಳುನಾಡು ಸರ್ಕಾರದ ಪ್ರಯತ್ನದ ಬೆನ್ನಿಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Mekedatu ಯೋಜನೆಯಿಂದ ಒಂದು ಬಕೆಟ್ ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ