ಭುಗಿಲೆದ್ದ ಹಿಂಸಾಚಾರಕ್ಕೆ ಸಿಎಂ ಕಾರ್ಯಕ್ರಮದ ಸ್ಥಳ ಸುಟ್ಟು ಭಸ್ಮ, ಮಣಿಪುರದಲ್ಲಿ 144 ಸೆಕ್ಷನ್ ಜಾರಿ!

By Suvarna NewsFirst Published Apr 28, 2023, 10:32 AM IST
Highlights

ದಿಢೀರ್ ಭುಗಿಲೆದ್ದ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದ ವೇದಿಕೆ ಸುಟ್ಟು ಭಸ್ಮಮಾಡಲಾಗಿದೆ. ಗಲಭೆ ನಿಯಂತ್ರಣಕ್ಕೆ  ಸೆಕ್ಷನ್ 144 ಜಾರಿ ಮಾಡಲಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಮಣಿಪುರದಲ್ಲಿ ಪರಿಸ್ಥಿತಿ ಪ್ರಕ್ಷಬ್ಧಗೊಂಡಿದ್ದು, ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮಣಿಪುರ(ಏ.28): ಅರಣ್ಯ ಪ್ರದೇಶ ಒತ್ತುವರಿ, ಅಕ್ರಮ ಕಟ್ಟಡಗಳ ತೆರವು ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಬುಡಕಟ್ಟು ಸಮುದಾಯದ ನಾಯಕರ ಸಂಘ ಪ್ರತಿಭಟನೆಗೆ ಕರೆ ನೀಡಿದ್ದು, ಭಾರಿ ಹಿಂಸಾಚಾರ ನಡೆದಿದೆ. ಚುರಾಚಂದಪುರ ಜಿಲ್ಲೆಯಲ್ಲಿ ಕ್ರೀಡಾ ಕಾಂಪ್ಲೆಕ್ಸ್ ಹಾಗೂ ಜಿಮ್ ಕೇಂದ್ರ ಉದ್ಘಾಟನೆಗೆ ಮಣಿಪುರ ಸಿಎಂ ಬೀರೆನ್ ಸಿಂಗ್ ಇಂದು ಆಗಮಿಸಬೇಕಿತ್ತು. ಆದರೆ ನಿನ್ನೆ(ಏ.27) ನಡೆದ ಹಿಂಸಾಚಾರದಿಂದ ಕ್ರೀಡಾ ಕಾಂಪ್ಲೆಕ್ಸ್, ಜಿಮ್ ಕೇಂದ್ರವನ್ನು ಕಿಡಿಗೇಡಿಗಳು ಸುಟ್ಟು ಭಸ್ಮ ಮಾಡಿದ್ದಾರೆ. ಚುರಾಚಂದಪುರದಲ್ಲಿ ಭುಗಿಲೆದ್ದ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಇನ್ನು ಮಣಿಪುರದ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನಾಕಾರರು ಕ್ರೀಡಾ ಕಾಂಪ್ಲೆಕ್ಸ್‌ಗೆ ನುಗ್ಗಿ ಸಿಎಂ ಕಾರ್ಯಕ್ರಮಕ್ಕಾಗಿ ಆಯೋಜಿಸಿದ್ದ ವೇದಿಕೆ ಧ್ವಂಸಗೊಳಿಸಿದ್ದಾರೆ. ಕುರ್ಚಿಗಳನ್ನು ಮುರಿದಿದ್ದಾರೆ. ಬಳಿಕ ಜಿಮ್ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸಂಪೂರ್ಣ ಜಿಮ್ ಹೊತ್ತಿ ಉರಿದಿದೆ. ಕಾರ್ಯಕ್ರಮ ಆಯೋಜಿಸಿದ್ದ ವೇದಿಕೆಯೂ ಸುಟ್ಟು ಭಸ್ಮವಾಗಿದೆ. ಹಿಂಸಾಚಾರ ತೀವ್ರಗೊಂಡ ಕಾರಣ ಪೊಲೀಸರು ಗಲಭೆ ನಿಯಂತ್ರಿಸಲು ಹರಸಾಹಸಪಡುಂತಾಗಿದೆ.

Latest Videos

ಇನ್ನೆಂದೂ ಸೂಡಾನ್‌ಗೆ ಹೋಗಲ್ಲ: ಭಾರತದಲ್ಲೇ ಬದುಕುವೆ ಎಂದ ತವರಿಗೆ ಮರಳಿದ ವ್ಯಕ್ತಿ

ಚುರಾಚಂದಪುರ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ಸರ್ಕಾರ ಇತ್ತೀಚೆಗೆ ಅರಣ್ಯ ಒತ್ತುವರಿ ಹಾಗೂ ಒತ್ತುವರಿ ಭಾಗದಲ್ಲಿನ ಅಕ್ರಮ ಕಟ್ಟಡ ತೆರವು ಮಾಡಲು ಮುಂದಾಗಿತ್ತು. ಇದು ಮಣಿಪುರ ಬುಡಕಟ್ಟು ಸಮುದಾಯವನ್ನು ಕೆರಳಿಸಿದೆ. ಒತ್ತುವರಿ ಹಾಗೂ ಅಕ್ರಮ ಕಟ್ಟಡಗಳ ತೆರವಿನ ವೇಳೆ ಒತ್ತುವರಿ ಅರಣ್ಯಭಾಗದಲ್ಲಿ ತಲೆ ಎತ್ತಿದ್ದ ಚರ್ಚ್‌ಗಳನ್ನು ಕೆಡವಲಾಗಿದೆ. ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಮಣಿಪುರ ಬುಡಕಟ್ಟು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಪರಿಣಾಮ ಬಿಜೆಪಿ ಸರ್ಕಾರದ ವಿರುದ್ದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಬುಡಕಟ್ಟು ನಾಯಕರ ವೇದಿಕೆ ಕರೆ ನೀಡಿದ್ದ ಪ್ರತಿಭಟನೆಗೆ ಕುಕಿ ವಿದ್ಯಾರ್ಥಿ ಸಂಘಟನೆ ಬೆಂಬಲ ನೀಡಿದೆ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರುು ಚುರಾಚಂದಪುರ ಜಿಲ್ಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರಗೆ ಸಂಪೂರ್ಣ ಬಂದ್  ಘೋಷಿಸಿದ್ದಾರೆ. ಸರ್ಕಾರದ ವಿರುದ್ದ ಪ್ರತಿಭಟನಾಕಾರರನ್ನು ಪ್ರಚೋದಿಸುವ ವಿಡಿಯೋಗಳು, ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನಿಲ್ಲಿಸಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ನಾನು ಸಿಎಂ ಆದರೂ ಬದಲಾಗಲಿಲ್ಲ ಜನ ಸಾಮಾನ್ಯನಾಗೇ ಉಳಿದೆ: ಪ್ರಧಾನಿ ಮೋದಿ

ಮಣಿಪುರ ಸರ್ಕಾರದ ವಿರುದ್ಧ ಇತರ ಜಿಲ್ಲೆಯ ಬುಡುಕಟ್ಟು ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದೆ. ಅರಣ್ಯ ಒತ್ತುವರಿ ಹೆಸರಲ್ಲಿ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಎಂದು ಆರೋಪಿಸಿದೆ. ಇದೀಗ ಮಣಿಪುರದಲ್ಲಿ ಹಲವು ಜಿಲ್ಲೆಗಳಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಈ ಕುರಿತು ತುರ್ತು ಸಭೆ ಕರೆದಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್, ಅಧಿಕಾರಿಗಳಿಂದ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ.

click me!