ಇನ್ನೆಂದೂ ಸೂಡಾನ್‌ಗೆ ಹೋಗಲ್ಲ: ಭಾರತದಲ್ಲೇ ಬದುಕುವೆ ಎಂದ ತವರಿಗೆ ಮರಳಿದ ವ್ಯಕ್ತಿ

Published : Apr 28, 2023, 09:59 AM IST
ಇನ್ನೆಂದೂ ಸೂಡಾನ್‌ಗೆ ಹೋಗಲ್ಲ: ಭಾರತದಲ್ಲೇ ಬದುಕುವೆ ಎಂದ ತವರಿಗೆ ಮರಳಿದ ವ್ಯಕ್ತಿ

ಸಾರಾಂಶ

ಆಂತರಿಕ ಯುದ್ಧಪೀಡಿತ ಸೂಡಾನ್‌ನಿಂದ ಗುರುವಾರ ಭಾರತಕ್ಕೆ ಮರಳಿದ ತಂಡದಲ್ಲಿದ್ದ ವ್ಯಕ್ತಿಯೋರ್ವರು, ಇನ್ನೆಂದಿಗೂ ಸೂಡಾನ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಸೂಡಾನ್‌ನಲ್ಲಿ ಫ್ಯಾಕ್ಟರಿ ಕೆಲಸದಲ್ಲಿದ್ದ ಅವರು, ಭಾರತದಲ್ಲಿ ಏನು ಬೇಕಾದರೂ ಮಾಡಿ ಜೀವಿಸುತ್ತೇನೆ. ಆದರೆ ಸೂಡಾನ್‌ಗೆ ತೆರಳುವುದಿಲ್ಲ ಎಂದಿದ್ದಾರೆ.

ಮುಂಬೈ: ಆಂತರಿಕ ಯುದ್ಧಪೀಡಿತ ಸೂಡಾನ್‌ನಿಂದ ಗುರುವಾರ ಭಾರತಕ್ಕೆ ಮರಳಿದ ತಂಡದಲ್ಲಿದ್ದ ವ್ಯಕ್ತಿಯೋರ್ವರು, ಇನ್ನೆಂದಿಗೂ ಸೂಡಾನ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಸೂಡಾನ್‌ನಲ್ಲಿ ಫ್ಯಾಕ್ಟರಿ ಕೆಲಸದಲ್ಲಿದ್ದ ಅವರು, ಭಾರತದಲ್ಲಿ ಏನು ಬೇಕಾದರೂ ಮಾಡಿ ಜೀವಿಸುತ್ತೇನೆ. ಆದರೆ ಸೂಡಾನ್‌ಗೆ ತೆರಳುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಇಂಜಿನಿಯರ್‌ ಆಗಿರುವ ಸುಖ್‌ವಿಂದರ್‌ ಸಿಂಗ್‌ ಎಂಬವರು, ಈಗಲೂ ನಮ್ಮಲ್ಲಿ ಭಯ ಹೋಗಿಲ್ಲ. ಸುಮಾರು 200 ಮಂದಿಯನ್ನು ಒಂದೇ ಬಸ್‌ನಲ್ಲಿ ಪೋರ್ಟ್ ಸೂಡಾನ್‌ಗೆ ಕರೆತಂದರು. ನಾವು ಇಲ್ಲಿಗೆ ಹೇಗೆ ಮರಳಿದೆವು ಎಂಬುದು ದೇವರಿಗೆ ಮಾತ್ರ ಗೊತ್ತು. ಭಾರತೀಯರು ಎಂದರೆ ಮಾತ್ರ ನಮ್ಮನ್ನು ಬಿಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

ತಸ್ಮೇರ್‌ ಸಿಂಗ್‌ ಎಂಬವರು ಸೂಡಾನ್‌ನ ಭೀಕರ ಪರಿಸ್ಥಿತಿಯನ್ನು ಬಿಚ್ಟಿಟ್ಟಿದ್ದು, ಸಣ್ಣ ಮನೆಯೊಂದರಲ್ಲಿ ನೀರು, ವಿದ್ಯುತ್‌ ಇಲ್ಲದೇ ಶವದಂತಾಗಿದ್ದೆವು. ಇಂತಹ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಜವಾನರು ನಮ್ಮ ಪಾಲಿನ ನಿಜವಾದ ಹೀರೋಗಳು. ಯಾವುದೇ ಕಷ್ಟಎದುರಾಗದಂತೆ ನೋಡಿಕೊಂಡರು. ಭಾರತ ಹಾಗೂ ಪ್ರಧಾನಿಗೆ ನಾವೆಂದೂ ಚಿರ ಋುಣಿ ಎಂದು ತಂಡದಲ್ಲಿದ್ದ ವ್ಯಕ್ತಿಯೋರ್ವರು ಸಂತಸ ವ್ಯಕ್ತಪಡಿಸಿದ್ದಾರೆ.

ಮರಳಿದ್ದೇ ಪವಾಡ

ಸೂಡಾನ್‌ನಿಂದ ಮರಳಿ ಬಂದಿದ್ದು ಪವಾಡ. 18 ವರ್ಷದಿಂದ ಸೂಡಾನ್‌ನಲ್ಲಿದ್ದರೂ ಎಂದಿಗೂ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ. ಅಲ್ಲಿಂದ ಜೀವಂತ ಮರಳುವ ಭರವಸೆಯೇ ಇರಲಿಲ್ಲ ಎಂದು ಕೇರಳದ ಥಾಮಸ್‌ ವರ್ಗೀಸ್‌ (Thomas Varghese) ಎಂಬವರು ಭಾವುಕರಾದರು. ಸುಮಾರು 6ರಿಂದ 7 ಸಾವಿರ ಭಾರತೀಯರು ಸುಡಾನ್‌ನಲ್ಲಿದ್ದಾರೆ. ಬಹುತೇಕ ಮಂದಿ ಬಸ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಪ್ರತಿದಿನ 500-600 ಮಂದಿಯನ್ನು ಭಾರತಕ್ಕೆ ಕರೆತಂದರೆ 10 ದಿನದಲ್ಲಿ ಕಾರಾರ‍ಯಚರಣೆ ಮುಗಿಯಬಹುದು ಎಂದು ಕೇರಳದ ಬಿಜಿ ಎಂಬವರು ತಿಳಿಸಿದ್ದಾರೆ.

ಸೂಡಾನ್‌ನಿಂದ ಮುಂಬೈಗೆ 246 ಭಾರತೀಯರ 2ನೇ ತಂಡ ಆಗಮನ

ಆಂತರಿಕ ಯುದ್ಧಪೀಡಿತ ಸೂಡಾನ್‌ನಿಂದ 246 ಭಾರತೀಯರನ್ನು ಹೊತ್ತ ವಿಮಾನ ಗುರುವಾರ ಮುಂಬೈಗೆ ಸುರಕ್ಷಿತವಾಗಿ ಬಂದಿಳಿಯಿತು. ಇದು ರಕ್ಷಣೆಗೆ ಒಳಗಾದ ಎರಡನೇ ಭಾರತೀಯರ ತಂಡವಾಗಿದೆ. ಬುಧವಾರ ಸೂಡಾನ್‌ನಿಂದ ದೆಹಲಿಗೆ ಕರೆತರಲಾಗಿದ್ದ 360 ಭಾರತೀಯರ ಮೊದಲ ತಂಡ ಬಂದಿತ್ತು. ಇದರೊಂದಿಗೆ ಒಟ್ಟು 606 ಭಾರತೀಯರು ಸ್ವದೇಶಕ್ಕೆ ಬಂದಿಳಿದಂತಾಗಿದೆ.

ರಾಜಕೀಯ ಮಾಡಬೇಡಿ, ಸುಡಾನ್ ಕನ್ನಡಿಗರ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿದ ಸಿದ್ದುಗೆ ಜೈಶಂಕ್ ತಿರುಗೇಟು!

ಆಪರೇಶನ್‌ ಕಾವೇರಿ ಹೆಸರಿನ ರಕ್ಷಣಾ ಕಾರ್ಯಾಚರಣೆ ಅಂಗವಾಗಿ ಸೂಡಾನ್‌ನಿಂದ ಸೌದಿಯ ಜೆಡ್ಡಾಗೆ ಹಡಗಿನಲ್ಲಿ ಬಂದಿದ್ದ ಈ ತಂಡವನ್ನು ವಾಯುಪಡೆ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ಅಧಿಕಾರಕ್ಕಾಗಿ ಸೂಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾಪಡೆಗಳ ಮಧ್ಯೆ ತೀವ್ರ ಕಾಳಗ ಏರ್ಪಟ್ಟಿದೆ.

ಸೂಡಾನಲ್ಲಿ 2000 ಭಾರತೀಯರು ಸುರಕ್ಷಿತ ಸ್ಥಳಕ್ಕೆ

ಆಂತರಿಕ ಯುದ್ಧಪೀಡಿತ ಸೂಡಾನ್‌ನಲ್ಲಿ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದು ಅನಿರೀಕ್ಷಿತವಾಗಿದೆ. ಅದಾಗ್ಯೂ ಪ್ರತಿಯೊಬ್ಬ ಭಾರತೀಯರನ್ನು ರಕ್ಷಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಆಪರೇಷನ್‌ ಕಾವೇರಿ ರಕ್ಷಣಾ ಕಾರ್ಯಾಚರಣೆಯಡಿಯಲ್ಲಿ ಈಗಾಗಲೇ ಭಾರತಕ್ಕೆ ಆಗಮಿಸಿರುವ 606 ಮಂದಿ ಸೇರಿದಂತೆ ಒಟ್ಟು 1,700 ರಿಂದ 2,000 ಭಾರತೀಯರನ್ನು ಯುದ್ಧಪೀಡಿತ ಪ್ರದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ವಾತ್ರಾ, ಯುದ್ಧದಲ್ಲಿ ತೊಡಗಿರುವ ಸೂಡಾನ್‌ನ (sudan) ಸೇನಾ ಹಾಗೂ ಅರೆಸೇನಾಪಡೆಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಹಾಗೂ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದೇವೆ. ಈ ಹಿನ್ನೆಲೆ ಪ್ರತಿಯೊಬ್ಬ ಭಾರತೀಯ ಸಂತ್ರಸ್ತರನ್ನು ರಕ್ಷಿಸುವಲ್ಲಿ ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಐಎನ್‌ಎಸ್‌ ತರ್ಕಶ್‌ ಎಂಬ 3ನ ಯುದ್ಧನೌಕೆಯನ್ನೂ ರಕ್ಷಣೆಗೆ ನಿಯೋಜಿಸಲಾಗಿದೆ ಎಂದರು.

ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

ಸೂಡಾನ್‌ ಭಾರತೀಯ ರಾಯಭಾರ ಕಚೇರಿಯಲ್ಲಿ ಸುಮಾರು 3,100 ಜನರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನು ಹೆಚ್ಚುವರಿ 300 ಜನರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು. ಸೂಡಾನ್‌ನಿಂದ ಸೌದಿಯ ಜೆಡ್ಡಾಗೆ (Zedda) ಹಡಗಿನಲ್ಲಿ ಭಾರತೀಯರನ್ನು ಕರೆತರಲಾಗುತ್ತಿದ್ದು ಅಲ್ಲಿಂದ ವಾಯುಪಡೆ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಈ ಪೈಕಿ ಒಟ್ಟು 606 ಜನರು ಭಾರತಕ್ಕೆ ಆಗಮಿಸಿದ್ದು, ಇನ್ನು 495 ಜನರು ಜೆಡ್ಡಾದಲ್ಲಿ ಹಾಗೂ 320 ಜನ ಸೂಡಾನ್‌ನ ನೌಕಾನೆಲೆಯಲ್ಲಿದ್ದಾರೆ ಎಂದು ಕ್ವಾತ್ರಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!