
ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹಠಾತ್ ಏರಿಕೆಯಾಗಿರುವುದು ಗೊತ್ತೆ ಇದೆ. ನಿಂತಲ್ಲಿ ಕುಳಿತಲ್ಲೇ ಜನರು ಪ್ರಾಣ ಬಿಡುತ್ತಿದ್ದಾರೆ. ಮಾತನಾಡುತ್ತಾ ಆಡವಾಡುತ್ತಾ, ಡಾನ್ಸ್ ಮಾಡುತ್ತಲೇ ಸಣ್ಣ ಪ್ರಾಯದ ಯುವಕ ಯುವತಿಯರು ಬಾಲಕ ಬಾಲಕಿಯರ ಸಾವು ಪೋಷಕರಿಗೆ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಈಗ ಇದೇ ರೀತಿ ಮತ್ತೊಂದು ಸಾವು ಸಂಭವಿಸಿದ್ದು, ಮಹಿಳೆಯೊಬ್ಬರು ಮಾತನಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಆತ್ಮೀಯರ ಜೊತೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಮಾತು ಮುಗಿಯುವ ಮೊದಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ತೆಲಂಗಾಣದ ಖಮ್ಮಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಆ ಮಹಿಳೆಯ ಕೊನೆಯ ಕೆಲ ನಿಮಿಷಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಜನ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲವ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಗೃಹ ಪ್ರವೇಶ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು 40 ವರ್ಷದ ಸುಷ್ಮಿತಾ ಎಂದು ಗುರುತಿಸಲಾಗಿದೆ. ಹೊಸದಾಗಿ ಮನೆ ಕಟ್ಟಿಸಿ ಆ ಸಂಭ್ರಮದಲ್ಲಿದ್ದ ತಮ್ಮ ಆತ್ಮೀಯ ಸ್ನೇಹಿತೆ ಹಾಗೂ ಅವರ ಪತಿಗೆ ಶುಭ ಹಾರೈಸುವುದಕ್ಕಾಗಿ ಮಹಿಳೆ ಸಮಾರಂಭಕ್ಕೆ ಹೋಗಿದ್ದರು. ಅಲ್ಲಿಗೆ ಹೋದ ನಂತರ ತಮ್ಮ ಪರಿಚಿತರಿಗೆ ಶುಭ ಹಾರೈಸಿ ನಗುತ್ತಾ ಮಾತನಾಡುತ್ತಾ ಫೋಟೋಗೆ ಪೋಸ್ ಕೊಡ್ತಿದ್ದಾಗಲೇ ಸುಷ್ಮಿತಾ ಅವರ ಪ್ರಾಣ ಹೋಗಿದೆ. ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಪಕ್ಕದಲ್ಲಿದ್ದ ಮಹಿಳೆ ಅವರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಸುಷ್ಮಿತಾ ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದವು ಎಂದು ವರದಿಯಾಗಿದೆ.
ಕೊನೆ ಕ್ಷಣದ ವೀಡಿಯೋ ವೈರಲ್:
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಆಘಾತಕಾರಿ ದೃಶ್ಯ ನೋಡಿ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಂತರ ಇಂತಹ ಸಾವುಗಳು ಅನೇಕ ಸಂಭವಿಸಿದವು. ಏನೋ ಒಂದು ಕಣ್ಣಿಗೆ ಕಾಣದ್ದು ನಡೆಯುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರೋ ಕರೆಗಂಟೆ ಬಾರಿಸಿ ಕರೆದಂತಿದೆ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರು ಇದ್ದಾನೆ. ಸುಶ್ಮಿತಾ ನಗುನಗುತ್ತಾ ತನ್ನ ಜೀವವನ್ನು ಹಠಾತ್ ಬಿಟ್ಟು ಹೋಗಿದ್ದು ಒಂದು ರೀತಿಯ ದುರಂತ. ಆದರೆ ಈ ರೀತಿಯ ಸಾವು ಆಶೀರ್ವಾದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿ ತುಂಬಾ ಬೇಸರವಾಗುತ್ತಿದೆ. ಹೇಗೆ ಸುಷ್ಮಿತಾ ಅವರ ಕುಟುಂಬ ಇದನ್ನು ಸ್ವೀಕರಿಸುತ್ತದೆ ಎಂದು ಊಹಿಸಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜೀವನ ಅನಿರೀಕ್ಷಿತ ಸಾವು ಯಾವಾಗ ಬೇಕಾದರೂ ಬರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲೆ ಹಲ್ಲೆ ಆರೋಪಿಸಿ RSS ಹಾಗೂ RAW ನಿಷೇಧಕ್ಕೆ ಶಿಫಾರಸು ಮಾಡಿದ ಅಮೆರಿಕಾ ಆಯೋಗಕ್ಕೆ ಭಾರತ ತಿರುಗೇಟು
ಒಟ್ಟಿನಲ್ಲಿ ಈ ಹಠಾತ್ ಹೃದಯಾಘಾತಕ್ಕೆ ಎಳೆಯ ಪ್ರಾಯದವರು ದೊಡ್ಡವರು ಮಕ್ಕಳೆನ್ನದೇ ಅನೇಕರು ಸಾಯುತ್ತಿರುವುದು ನೋಡಿದರೆ, ಸಾವು ಯಾವಾಗ ಬೇಕಾದರೂ ಬರಬಹುದು, ಇರುವಷ್ಟು ದಿನ ಖುಷಿ ಖುಷಿಯಾಗಿದ್ದು, ಕಾಲನ ಕರೆ ಬಂದಾಗ ಹೊರಟು ಹೋಗಬೇಕಷ್ಟೇ.. ಈ ಕ್ಷಣ ಮಾತ್ರ ನಮ್ಮದು.
ಇದನ್ನೂ ಓದಿ: ಚಾಮರಾಜನಗರ: ಕೇರಳಿಗ ಅಳವಡಿಸಿದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ 2 ವರ್ಷದ ಹುಲಿ ಮರಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ