
ಹೈದರಾಬಾದ್ (ಡಿಸೆಂಬರ್ 8, 2023): ರೇವಂತ್ ರೆಡ್ಡಿ ನೇತೃತ್ವದಲ್ಲಿ ಗುರುವಾರ ರಚನೆ ಆಗಿರುವ ತೆಲಂಗಾಣ ಸಚಿವ ಸಂಪುಟದಲ್ಲಿ ಈ ಬಾರಿ ಒಬ್ಬನೇ ಒಬ್ಬ ಮುಸ್ಲಿಂ ಸಚಿವ ಕೂಡ ಇಲ್ಲದಿರುವುದು ಗಮನಾರ್ಹವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೇವಂತ್ ರಡ್ಡಿ ಅವರ ಆಪ್ತ ಶಬ್ಬೀರ್ ಅಲಿ ಸೇರಿ ಎಲ್ಲ 3 ಮುಸ್ಲಿಂ ಅಭ್ಯರ್ಥಿಗಳು ಸೋತಿದ್ದರು. ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಆಪ್ತ ಪಕ್ಷ ಆಗಿರುವ ಕಾರಣ ಶಬ್ಬೀರ್ ಅಲಿಗೆ ಸಚಿವ ಸ್ಥಾನ ನೀಡಿ, ಮುಂದೆ ಅವರನ್ನು ವಿಧಾನಪರಿಷತ್ ಸದಸ್ಯ ಮಾಡಬಹುದು ಎಂಬ ಊಹಾಪೋಹ ಇದ್ದವು. ಅದು ಈಗ ಹುಸಿ ಆಗಿದ್ದು ಎಲ್ಲ 11 ಸಚಿವರು ಮುಸ್ಲಿಮೇತರರಾಗಿದ್ದಾರೆ.
ಇದನ್ನು ಓದಿ: ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ!
ವಿಪಕ್ಷ ಎಐಎಂಐಎಂ ಇದೇ ವಿಷಯ ಮುಂದಿಟ್ಟುಕೊಂಡು, ಕಾಂಗ್ರೆಸ್ ಅಲ್ಪಸಂಖ್ಯಾತ ವಿರೋಧಿ ಎಂದು ಪ್ರಚಾರ ಮಾಡುವ ಸಾಧ್ಯತೆ ಇದೆ.
ಬಂದೂಕು ಹಿಡಿದಿದ್ದ ನಕ್ಸಲ್ ಸೀತಕ್ಕ ಈಗ ತೆಲಂಗಾಣ ಸಚಿವೆ!
ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿ ಇದೀಗ ಸಚಿವೆಯೂ ಆಗಿ ಪ್ರಮಾಣವಚನ ಸ್ವೀಕರಿಸಿರುವ ಕಾಂಗ್ರೆಸ್ ನಾಯಕಿ ಸೀತಕ್ಕ (52) ಹಿಂದೊಮ್ಮೆ ಬಂದೂಕು ಹಿಡಿದು ನಿಂತಿದ್ದ ಮಾವೋವಾದಿ ನಾಯಕಿ. ಇವರ ಜೀವನದ ಹಾದಿಯೇ ವಿಶಿಷ್ಟವಾಗಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ರೇವಂತ್ ರೆಡ್ಡಿ!
ಕೋಯಾ ಬುಡಕಟ್ಟು ಜನಾಂಗಕ್ಕೆ ಸೇರಿದ ಸೀತಕ್ಕ ಚಿಕ್ಕ ವಯಸ್ಸಲ್ಲೇ ಮಾವೋವಾದಿ ಗುಂಪಿಗೆ ಸೇರಿ ಬಳಿಕ ಸ್ಥಳೀಯ ಮಾವೋವಾದಿ ನಾಯಕಿಯೂ ಆಗಿದ್ದರು. ಪೊಲೀಸರೊಂದಿಗೆ ಹಲವಾರು ಬಾರಿ ಗುಂಡಿನ ಕಾಳಗ ನಡೆಸಿದ್ದ ಸೀತಕ್ಕ ಎನ್ಕೌಂಟರ್ನಲ್ಲಿ ತನ್ನ ಪತಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದರು. ಕೊನೆಗೆ ನಕ್ಸಲ್ವಾದದಿಂದ ಆಚೆ ಬಂದ ಆಕೆ 1994ರಲ್ಲಿ ಕ್ಷಮಾದಾನ ಕೋರಿ ಪೊಲೀಸರಿಗೆ ಶರಣಾಗಿದ್ದರು.
ಇದಾದ ಬಳಿಕ ಶಿಕ್ಷಣ ಪೂರೈಸಿದ ಸೀತಕ್ಕ ಕಾನೂನು ಪದವಿ ಪಡೆದು, ವಕೀಲೆಯಾಗಿ ಸೇವೆ ಸಲ್ಲಿಸಿದರು. ಬಳಿಕ ತೆಲುಗು ದೇಶಂ ಪಕ್ಷ (ಟಿಡಿಪಿ) ಸೇರಿದ ಸೀತಕ್ಕ 2004ರ ಚುನಾವಣೆಯಲ್ಲಿ ಮುಳಗು ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಬಳಿಕ 2018ರಲ್ಲಿ ಬಿಆರ್ಎಸ್ನಿಂದ ಗೆದ್ದು, ಇದೀಗ ಕಾಂಗ್ರೆಸ್ ಸೇರಿ ಸಚಿವೆಯಾಗಿದ್ದಾರೆ. ಸದ್ಯ ರಾಜ್ಯಾದ್ಯಂತ ಸೀತಕ್ಕ ಭಾರೀ ಜನಪ್ರಿಯತೆ ಹೊಂದಿದ್ದಾರೆ.
ತೆಲಂಗಾಣದಲ್ಲಿ 15 ವೈದ್ಯರು ವಿಧಾನಸಭೆಗೆ ಪ್ರವೇಶ, ಕಾಂಗ್ರೆಸ್ನಲ್ಲೇ ಬಲಿಷ್ಠ!
ಗ್ಯಾರಂಟಿ ಜಾರಿಗೆ ಸಹಿ, ಇತರ ಕೆಲ ಭರವಸೆ ಈಡೇರಿಕೆ
ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಭರವಸೆ ನೀಡಿದಂತೆ, ಕಾಂಗ್ರೆಸ್ನ ಆರು ಖಾತರಿಗಳಿಗೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಮಾಡಿದರು ಮತ್ತು ನಂತರ ಅಂಗವಿಕಲ ಮಹಿಳೆ ಎಂ. ರಜಿನಿ ಎಂಬುವರಿಗೆ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸರ್ಕಾರಿ ನೌಕರಿಯ ನೇಮಕ ಪತ್ರ ನೀಡಿದರು.
ಇದಲ್ಲದೆ, ಜನರು ಹಾಗೂ ಮುಖ್ಯಮಂತ್ರಿಯ ನಡುವೆ ಅಂತರ ಇರಬಾರದು ಎಂಬ ತಮ್ಮ ಚುನಾವಣಾಪೂರ್ವ ಭರವಸೆಯನ್ನು ರೇವಂತ್ ಈಡೇರಿಸಿದ್ದು, ತಮ್ಮ ಸಿಎಂ ಅಧಿಕೃತ ನಿವಾಸದ ಮುಂದೆ ಹಾಕಲಾಗಿದ್ದ ಕಬ್ಬಿಣದ ಬ್ಯಾರಿಕೇಡ್ ತೆರವುಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ