6ನೇ ದಿನದ ಸಂಸತ್‌ ಕಲಾಪವೂ ಗಲಾಟೆಗೆ ಬಲಿ

By Kannadaprabha NewsFirst Published Mar 21, 2023, 10:18 AM IST
Highlights

ಭಾರತದ ಜನತಂತ್ರ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಸೋಮವಾರವೂ ಪಟ್ಟು ಹಿಡಿಯಿತು.

ನವದೆಹಲಿ: ಭಾರತದ ಜನತಂತ್ರ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಸೋಮವಾರವೂ ಪಟ್ಟು ಹಿಡಿಯಿತು. ಇನ್ನೊಂದೆಡೆ ಉದ್ಯಮಿ ಗೌತಮ್‌ ಅದಾನಿ ಅವರ ಕಂಪನಿ ಮಾಡಿದೆ ಎನ್ನಲಾದ ಅಕ್ರಮಗಳ ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ವಿಪಕ್ಷಗಳು ಕೋಲಾಹಲ ಸೃಷ್ಟಿಸಿದವು. ಇದರ ಪರಿಣಾಮ ಸತತ 6ನೇ ದಿನವೂ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳಿಗೆ ಅಡ್ಡಿ ಆಗಿದ್ದು, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಈ ನಡುವೆ ಭಾರತದ ಪ್ರಜಾಪ್ರಭುತ್ವ (democratic system) ವ್ಯವಸ್ಥೆ ದಾಳಿಗೆ ತುತ್ತಾಗುತ್ತಿದೆ, ಈ ವಿಷಯದಲ್ಲಿ ವಿದೇಶಗಳು ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದ್ದಾಗಿ ತಮ್ಮ ಮೇಲೆ ಮಾಡಲಾದ ಆರೋಪಗಳ ಕುರಿತು ಸ್ಪಷ್ಟನೆ ನೀಡಲು, ಮಂಗಳವಾರ ತಮಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಿ ಎಂದು ರಾಹುಲ್‌ ಗಾಂಧಿ ಲೋಕಸಭೆಯ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಹಲವು ನಾಯಕರ ಜೊತೆಗೂಡಿ ಸೋಮವಾರ ಸ್ಪೀಕರ್‌ ಓಂ ಬಿರ್ಲಾ (Speaker Om Birla) ಅವರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ. 

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ

ಇದಲ್ಲದೆ ರಾಹುಲ್‌ ಕೂಡ ಸ್ಪೀಕರ್‌ಗೆ ಪತ್ರ ಬರೆದು ಮಾತನಾಡಲು ಅವಕಾಶ ಕೋರಿದ್ದಾರೆ. ಆದರೆ ಹೇಳಿಕೆ ಕುರಿತು ರಾಹುಲ್‌ ಕ್ಷಮೆ ಕೇಳುವವರೆಗೂ ಅವರಿಗೆ ಮಾತನಾಡಲು ಬಿಡುವುದಿಲ್ಲ ಎಂದು ಬಿಜೆಪಿ ಪಟ್ಟು ಹಿಡಿದಿರುವ ಕಾರಣ, ಸ್ಪೀಕರ್‌ ಸಮಯ ನೀಡಿದರೂ ರಾಹುಲ್‌ ಮಾತನಾಡುವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Watch: 'ದುರಾದೃಷ್ಟಕ್ಕೆ ನಾನು ಸಂಸದ..' ಎಂದ ರಾಹುಲ್‌ ಗಾಂಧಿ, ಸುದ್ದಿಗೋಷ್ಠಿಯ ಮಧ್ಯೆಯೇ ತಿದ್ದಿದ ಜೈರಾಮ್‌ ರಮೇಶ್‌!

click me!