
ಸದಾ ಒಂದಲ್ಲೊಂದು ಕಾಂಟವರ್ಸಿ ಮಾತನಾಡುವ ಮೂಲಕ ಸದ್ದು ಮಾಡುವ ನಟಿ, ಸಂಸದೆ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸದನದ ಕಲಾಪದ ಸಂದರ್ಭದಲ್ಲಿ ಅಸಂಬದ್ಧ ಹೇಳಿಕೆ ನೀಡುತ್ತಾರೆ ಎಂದು ಇದಾಗಲೇ ಸಾಕಷ್ಟು ನಾಯಕರಿಂದ ರಾಹುಲ್ ಗಾಂಧಿ ಛೀಮಾರಿ ಹಾಕಿಸಿಕೊಂಡಿರುವುದು ಇದೆ. ನಡೆಯುತ್ತಿರುವ ಚರ್ಚೆ ಏನು ಎಂದು ತಿಳಿಯದೇ ಒಟ್ಟಿನಲ್ಲಿ ತಮ್ಮದೂ ಒಂದು ಇರಲಿ ಎಂದು ಏನೋ ಮಾತನಾಡಿ ಸಾಕಷ್ಟು ಟ್ರೋಲ್ ಆಗುವುದೂ ಇದೆ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಕಂಗನಾ ರಣಾವತ್ ಮಾತನಾಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.
ಮಹಿಳೆಯರ ವಿಷಯದಲ್ಲಿ ರಾಹುಲ್ ಗಾಂಧಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಇರುಸುಮುರುಸಾಗುತ್ತದೆ. ಅವರೊಬ್ಬ ಟಪೋರಿ ಇದ್ದಂತೆ ಎಂದಿದ್ದಾರೆ. ಸಾಮಾನ್ಯವಾಗಿ ಈ ಶಬ್ದವನ್ನು ಬೀದಿ ಪುಂಡರು ಸೇರಿದಂತೆ ಇತರ ಕೆಟ್ಟ ಬೈಗುಳವಾಗಿ ಬಳಸುವುದು ಇದೆ. ಅದೇ ಪದಪ್ರಯೋಗವನ್ನು ಕಂಗನಾ ಮಾಡಿದ್ದಾರೆ. ಯಾರದ್ದೇ ಸಂದರ್ಶನ ನಡೆಯುತ್ತಿದ್ದರೂ, ಮಧ್ಯೆ ಬಂದು ಬಾಯಿ ಹಾಕುತ್ತಾರೆ. ಅನವಶ್ಯಕವಾಗಿ ಏನನ್ನೋ ಮಾತನಾಡುತ್ತಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿರುವ ಕಂಗನಾ, ರಾಹುಲ್ ಗಾಂಧಿಯವರು, ಅತ್ಯಂತ ಸೌಮ್ಯದಿಂದ ನಡೆದುಕೊಳ್ಳುವ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯಿಂದ ನೋಡಿ ತಿಳಿದುಕೊಳ್ಳಬೇಕಿದೆ. ಅವರಿಂದ ಕಲಿಯಬೇಕಿದೆ ಎಂದು ಹೇಳುವ ಮೂಲಕ ವಿಪಕ್ಷಗಳೂ ಮರು ಮಾತನಾಡದಂತೆ ಹೇಳಿದ್ದಾರೆ!
ಅಷ್ಟಕ್ಕೂ ಕಂಗನಾ ಈ ಮಾತು ಹೇಳುವುದಕ್ಕೂ ಕಾರಣವಿದೆ. ಅದೇನೆಂದರೆ, ಇದೇ 12ರಂದು, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ವರ್ತನೆಯ ನಂತರ ಕಂಗನಾ ಈ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಸಂಸತ್ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಚಹಾ ಮತ್ತು ಬಿಸ್ಕತ್ತು ತಿನ್ನುತ್ತಿದ್ದರು. ಇದರ ಕುರಿತು 84 ಮಾಜಿ ಅಧಿಕಾರಿಗಳು, 116 ಮಾಜಿ ಸೈನಿಕರು ಮತ್ತು 4 ವಕೀಲರು ರಾಹುಲ್ ಗಾಂಧಿಯವರ ಕ್ಷಮೆಯಾಚನೆಗೆ ಒತ್ತಾಯಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸಂಸದೆ ಈ ವಿಷಯ ಪ್ರಸ್ತಾಪಿಸಿದ್ದಾರೆ.
ರಾಹುಲ್ ಗಾಂಧಿಯವರ ಸುತ್ತಲೂ ಮಹಿಳೆಯರು ಅನನುಕೂಲತೆಯನ್ನು ಅನುಭವಿಸುತ್ತಾರೆ. ಅವರು ವಿದೂಷಕನಂತೆ ಬಂದು ಬಾಯಿ ಹಾಕಿ, ತಮ್ಮ ಸಾಮಾನ್ಯ ಭಾಷೆಯನ್ನು ಬಳಸುತ್ತಾರೆ ಮತ್ತು ಇತರರಿಗೆ ಕಿರುಕುಳ ನೀಡುತ್ತಾರೆ ಎಂದಿರುವ ಕಂಗನಾ ಪ್ರಿಯಾಂಕಾ ಅವರಾದರೂ ಸಹೋದರನಿಗೆ ಬುದ್ಧಿ ಹೇಳಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ