ಸೆಂಟ್ರಲ್ ವಿಸ್ತಾದ ರಾಷ್ಟ್ರೀಯ ಲಾಂಛನ ಪ್ರಶ್ನಿಸಿದ್ದ ವಿಪಕ್ಷಗಳಿಗೆ ಹಿನ್ನಡೆ, ನಿಯಮ ಉಲ್ಲಂಘನೆ ಆಗಿಲ್ಲ: ಸುಪ್ರೀಂ

By Suvarna NewsFirst Published Sep 30, 2022, 2:35 PM IST
Highlights

ನೂತನ ಸಂಸತ್ ಭವನದ ಮೇಲೆ ಸ್ಥಾಪಿಸಲಾಗ ರಾಷ್ಟ್ರೀಯ ಲಾಂಛನ ಮೂಲ ಸ್ವರೂಪದಲ್ಲಿ ಇಲ್ಲ. ಮೋದಿ ಸರ್ಕಾರ ಸ್ವರೂಪ ಬದಲಿಸಿದೆ ಎಂಬ ವಿಪಕ್ಷಗಳ ವಾದಕ್ಕೆ ಹಿನ್ನಡೆಯಾಗಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿ ಮನವಿ ತರಿಸ್ಕರಿಸಿದೆ.

ನವದೆಹಲಿ(ಸೆ.30): ನೂತನ ಸಂಸತ್ ಭವನದ ಮೇಲೆ ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಲಾಂಛನ ಅನಾವರಗೊಳಿಸಿದ್ದರು. ಈ ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳು ಮುಖಗಳ ಮೂಲ ಸ್ವರೂಪ ಬದಲಿಸಲಾಗಿದೆ ಎಂದು ಕಾಂಗ್ರೆಸ್, ಟಿಎಂಸಿ ಸೇರಿ ವಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿತ್ತು. ಭಾರತದ ಲಾಂಛನಕ್ಕೆ ಬಿಜೆಪಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೂತನ ಸಂಸತ್ ಭವನದಲ್ಲಿನ ಲಾಂಛನದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.  ಸಾರನಾಥ ಸಂಗ್ರಹಾಲಯದಲ್ಲಿರುವ ಮೂಲ ಲಾಂಛನ ಹೋಲುವ ಪ್ರತಿಯನ್ನೇ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದಲ್ಲಿ ಸ್ಥಾಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರೊಂದಿಗೆ ಬಿಜೆಪಿ ಮೇಲೆ ವಿಪಕ್ಷಗಳು ಮಾಡಿದ್ದ ಆರೋಪ ಸುಳ್ಳು ಅನ್ನೋದು ಸಾಬೀತಾಗಿದೆ.

ಜುಲೈ 11 ರಂದು ಪ್ರಧಾನಿ ನರೇಂದ್ರ ಮೋದಿ(Narnedra Modi) ಸೆಂಟ್ರಲ್ ವಿಸ್ತಾದಲ್ಲಿ(Central vista) ರಾಷ್ಟ್ರೀಯ ಲಾಂಛನ(National Emblem) ಅನಾವರಣ ಮಾಡಿದ್ದರು. ಈ ಲಾಂಛನದಲ್ಲಿನ ಸಿಂಹಗಳ(Lion) ಸ್ವರೂಪ ಬದಲಿಸಲಾಗಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಮಾಡಿತ್ತು. ಇದರ ಬೆನ್ನಲ್ಲೇ ಲಾಂಛನ ವಿನ್ಯಾಸ 2005ರ ಭಾರತದ ರಾಜ್ಯ ಲಾಂಛನ ಅಸಮರ್ಪಕ ಬಳಕೆ ನಿಷೇಧ ಕಾಯ್ದಿಯೆ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ(Supreme Court) ಅರ್ಜಿ ಸಲ್ಲಿಕೆಯಾಗಿತ್ತು.  ವಕೀಲರಾದ ಅಲ್ದಾನಿಶ್ ರೈನ್ ಹಾಗೂ ರಮೇಶ್ ಕುಮಾರ್ ಮಿಶ್ರಾ ಲಾಂಛನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 

ರಾಷ್ಟ್ರ ಲಾಂಛನ ಅನಾವರಣ, ವಿಪಕ್ಷಗಳ ಆಕ್ರಂದನ!

ಟಿಎಂಸಿ ನಾಯಕ ಜವಾಹರ ಸರ್ಕಾರ್‌, ‘ಮೂಲ ಲಾಂಛನದಲ್ಲಿನ ಸಿಂಹಗಳು ವಿನಯಶೀಲವಾಗಿವೆ ಹಾಗೂ ರಾಜಗಾಂಭೀರ್ಯದ ವಿಶ್ವಾಸ ಪ್ರದರ್ಶಿಸುತ್ತಿವೆ. ಆದರೆ ಮೋದಿ ಅವರ ಕಲ್ಪನೆಯ ಸಿಂಹಗಳು ಆಕ್ರಮಣಶೀಲತೆ ಪ್ರದರ್ಶಿಸುತ್ತಿವೆ. ಇದನ್ನು ಕೂಡಲೇ ಬದಲಿಸಿ’ ಎಂದು ಆಗ್ರಹ ಮಾಡಿದ್ದರು. ಇನ್ನು ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿ ಪ್ರತಿಕ್ರಿಯಿಸಿ, ‘ಸಾರನಾಥದ ಸಿಂಹ ಲಾಂಛನ ಬದಲಿಸಲಾಗಿದೆ. ಅದರ ಬದಲು ಗುಜರಾತ್‌ನ ಗಿರ್‌ ಅರಣ್ಯದಿಂದ ಸಿಂಹಗಳನ್ನು ತಂದು ಕೂರಿಸಲಾಗಿದೆ. ಮೋದೀ ಜಿ.. ಇದನ್ನು ಗಮನಿಸಿ’ ಎಂದಿದ್ದಾರೆ. ಮತ್ತೊಂದೆಡೆ ಆರ್‌ಜೆಡಿ ನಾಯಕರು ‘ಹೊಸ ಲಾಂಛನದಲ್ಲಿನ ಸಿಂಹಗಳು ನರಭಕ್ಷಕನಂತೆ ಕಾಣುತ್ತಿವೆ. ಇದು ಮಾನವನ ಕಲ್ಪನೆಯ ನಿಜವಾದ ಪ್ರತೀಕ’ ಎಂದು ಪ್ರಧಾನಮಂತ್ರಿಗಳ ಕಾಲೆಳೆದಿದೆ. ಇತಿಹಾಸಕಾರ ಇರ್ಫಾನ್‌ ಹಬೀಬ್‌ ಮಾತನಾಡಿ, ‘ಈ ರೀತಿ ಲಾಂಛನದಲ್ಲಿನ ಸ್ವರೂಪ ಬದಲಾವಣೆ ತಪ್ಪಿಸಬಹುದಿತ್ತು. ಯಾಕೆ ಹೊಸ ಲಾಂಛನದಲ್ಲಿನ ಸಿಂಹಗಳು ಕ್ರೂರವಾಗಿ ಕಾಣುತ್ತಿವೆ?’ ಎಂದು ಪ್ರಶ್ನಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸುತ್ತಿದ್ದಂತೆ ಅಂದು ಪ್ರಶ್ನಿಸಿದವರೆಲ್ಲಾ ಮೌನಕ್ಕೆ ಜಾರಿದ್ದಾರೆ.

ಸಾರಾನಾಥದ ಸಿಂಹ vs ಸಂಸತ್‌ ಭವನದ ಸಿಂಹ: ವ್ಯತ್ಯಾಸಗಳನ್ನು ತಿಳಿಸಿದ ಕೇಂದ್ರ ಸಚಿವ!

ಸಂಸತ್‌ ಭವನದ ಛಾವಣಿಯ ಮೇಲೆ ಆಕಾಶದಿಂದಲೂ ಕಾಣಿಸುವಂತೆ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಲಾಂಛನವನ್ನು ತಯಾರಿಸಲು 9500 ಕೇಜಿ ಪರಿಶುದ್ಧ ಕಂಚು ಬಳಸಲಾಗಿದೆ. ಲಾಂಛನವು 6.5 ಮೀಟರ್‌ ಎತ್ತರವಿದೆ. ಸಂಸತ್‌ ಭವನದ ಕೇಂದ್ರ ದ್ವಾರದ ಮೇಲೆ ಇದನ್ನು ಸ್ಥಾಪಿಸಲಾಗಿದೆ. ಭಾರವಾದ ಈ ಲಾಂಛನಕ್ಕೆ ಬೆಂಬಲ ನೀಡಲು 6500 ಕೇಜಿ ತೂಕದ ಉಕ್ಕಿನ ಚೌಕಟ್ಟು ನಿರ್ಮಿಸಲಾಗಿದೆ. ಹೀಗಾಗಿ ಲಾಂಛನವು ಒಟ್ಟು 16,000 ಕೇಜಿ ಭಾರವಿದೆ. ದೇಶದಲ್ಲಿ ಇಂತಹ ಲಾಂಛನ ಇನ್ನೆಲ್ಲೂ ಇಲ್ಲ.

click me!