'ಹಿಂದೂ ಹುಡುಗಿ ಮುಸ್ಲಿಂ ಯುವಕನ ಮದುವೆ ಆದ್ರೆ ದೇಶದ ಏಕತೆ ಹಾಳಾಗುತ್ತಾ?' ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌!

Published : Feb 25, 2026, 09:23 PM IST
Supreme Court

ಸಾರಾಂಶ

SC Refuses to Ban 'Yadav Ji Ki Love Story': Key Remarks "ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾದವ ಸಮುದಾಯದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮಕಥೆಯು ರಾಷ್ಟ್ರದ ಏಕತೆಗೆ ಧಕ್ಕೆ ತರುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ನವದೆಹಲಿ (ಫೆ.25): ವಿಭಿನ್ನ ಧರ್ಮಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ "ಯಾದವ್ ಜಿ ಕಿ ಲವ್ ಸ್ಟೋರಿ" (Yadav Ji ki love story) ಚಿತ್ರಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ವೇಳೆ ನ್ಯಾಯಾಲಯವು, "ಯಾದವ ಸಮುದಾಯದ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದು ರಾಷ್ಟ್ರದ ಏಕತೆಯನ್ನು ನಾಶಪಡಿಸುತ್ತದೆಯೇ?" ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. 'ವಿಶ್ವ ಯಾದವ ಪರಿಷತ್' ಮುಖ್ಯಸ್ಥರು ಸಲ್ಲಿಸಿದ್ದ ಈ ಅರ್ಜಿಯಲ್ಲಿ, ಚಿತ್ರದ ಶೀರ್ಷಿಕೆಯು ಯಾದವ ಸಮುದಾಯದ ಬಗ್ಗೆ ಆಕ್ಷೇಪಾರ್ಹ ವಿಷಯ (Stereotype) ಸೃಷ್ಟಿಸುತ್ತದೆ ಎಂದು ಆರೋಪಿಸಲಾಗಿತ್ತು. ಚಿತ್ರದಲ್ಲಿ ಯಾದವ ಸಮುದಾಯದ ಹಿಂದೂ ಯುವತಿಯು ಮುಸ್ಲಿಂ ಯುವಕನೊಂದಿಗೆ ಪ್ರೇಮದಲ್ಲಿ ಬೀಳುವ ಕಥೆಯಿದ್ದು, ಇದು ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ನ್ಯಾಯಾಲಯದ ಪ್ರತಿಕ್ರಿಯೆ

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸುವಾಗ ಕೆಲವು ಮಹತ್ವದ ಅಂಶಗಳನ್ನು ಹೇಳಿದೆ. "ಚಿತ್ರದ ಶೀರ್ಷಿಕೆಯಲ್ಲಿ ಯಾದವ ಸಮುದಾಯವನ್ನು ಅವಮಾನಿಸುವಂತಹ ಯಾವುದೇ ವಿಶೇಷಣ ಅಥವಾ ಪದಗಳಿಲ್ಲ. ಕೇವಲ ಶೀರ್ಷಿಕೆಯಿಂದ ಸಮುದಾಯಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನಿಮ್ಮ ಆತಂಕಗಳು ಆಧಾರರಹಿತವಾಗಿವೆ," ಎಂದು ಪೀಠ ಹೇಳಿದೆ.

ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ, ಪೀಠವು ಮಾರ್ಮಿಕವಾಗಿ ಉತ್ತರಿಸಿತು. "ಸ್ವಲ್ಪ ಸಹನೆ ಬೆಳೆಸಿಕೊಳ್ಳಿ. ಇದು ಕೇವಲ ಕಾಲ್ಪನಿಕ ಕಥೆ. ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ ಎಲ್ಲವೂ ಮುಗಿದುಹೋಗುತ್ತದೆ. ಈಗ ಯಾರು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ? ಎಲ್ಲರೂ ಫೋನ್‌ನಲ್ಲೇ ನೋಡುತ್ತಿದ್ದಾರೆ," ಎಂದು ನ್ಯಾಯಮೂರ್ತಿಗಳು ಲಘು ದಾಟಿಯಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಏಕತೆಯ ಪ್ರಶ್ನೆ

ವಿಚಾರಣೆಯ ಸಂದರ್ಭದಲ್ಲಿ, ಅಂತರ್ಧರ್ಮೀಯ ವಿವಾಹದ ಕುರಿತು ಅರ್ಜಿದಾರರ ಆಕ್ಷೇಪಕ್ಕೆ ನ್ಯಾಯಾಲಯವು ನೇರವಾಗಿಯೇ ಪ್ರತಿಕ್ರಿಯಿಸಿತು. "ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ರಾಷ್ಟ್ರದ ಏಕತೆ (National Fabric) ಹಾಳಾಗುತ್ತದೆಯೇ?" ಎಂಬ ಪ್ರಶ್ನೆಯ ಮೂಲಕ ಚಿತ್ರದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನ್ಯಾಯಾಲಯ ಎತ್ತಿಹಿಡಿಯಿತು. ಚಿತ್ರವು ಇನ್ನೂ ಬಿಡುಗಡೆಯಾಗಿಲ್ಲದ ಕಾರಣ, ಈಗಲೇ ನಿಷೇಧ ಹೇರುವುದು ಸರಿಯಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dina Semte: ಇಸ್ರೇಲ್‌ನಲ್ಲಿ ಮೋದಿ ಸ್ವಾಗತಕ್ಕೆ ಹಾಡಿದ ಮಣಿಪುರದ ಅಂಧ ಗಾಯಕಿ! ಸ್ಪೂರ್ತಿದಾಯಕ ಕಥೆ ಇಲ್ಲಿದೆ
ಕೊನೆಗೂ ಬೀದಿಗೆ ಬಿದ್ದ ಅಂಬಾನಿ, 3800 ಕೋಟಿ ರೂಪಾಯಿ ಮೌಲ್ಯದ Abode ಮನೆ ಸೀಜ್‌ ಮಾಡಿದ ED!