
ಮುಂಬೈ (ಫೆ.26): ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ 'ಅನಾದಿ ಮಿ, ಅನಂತ ಮಿ' ಕವಿತೆಗೆ ಮೊದಲ ಆವೃತ್ತಿಯ ಛತ್ರಪತಿ ಸಂಭಾಜಿ ಮಹಾರಾಜ ರಾಜ್ಯ ಪ್ರೇರಣಾ ಗೀತ್ ಪ್ರಶಸ್ತಿ ದೊರೆಯಲಿದೆ ಎಂದು ಮಹಾರಾಷ್ಟ್ರದ ಸಾಂಸ್ಕೃತಿಕ ಸಚಿವ ಅಶೀಶ್ ಶೆಲಾರ್ ಮಂಗಳವಾರ ಘೋಷಿಸಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜರ ಪರಂಪರೆಯನ್ನು ಗೌರವಿಸಲು ಮಹಾರಾಷ್ಟ್ರ ಸರ್ಕಾರ ಈ ಪ್ರಶಸ್ತಿಯನ್ನು ಪರಿಚಯಿಸಿದೆ. ಅವರು ಕೇವಲ ಸ್ವಾತಂತ್ರ್ಯ ಸೇನಾನಿಯಲ್ಲ, ಸಂಸ್ಕೃತ ವಿದ್ವಾಂಸರು ಮತ್ತು ಬರಹಗಾರರೂ ಆಗಿದ್ದರು. ಸವಾಲಿನ ಸಂದರ್ಭಗಳಲ್ಲಿ ರಾಜ್ಯಕ್ಕೆ ಸ್ಫೂರ್ತಿ ನೀಡಿದ ಪ್ರಬಲ ಕವಿತೆಗೆ ಪ್ರಶಸ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಇದನ್ನು ಗೌರವಿಸುತ್ತದೆ ಎಂದಿದ್ದಾರೆ.
ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಶೆಲಾರ್ ಮಾಹಿತಿ ನೀಡಿದರು. ಸಾವರ್ಕರ್ ಅವರ ಕವಿತೆಗೆ ಗೌರವವನ್ನು ಘೋಷಿಸಿದ ಅವರು, ಬ್ರಿಟಿಷ್ ಪಡೆಗಳು ಸೆರೆಹಿಡಿದಾಗ ಮಾರ್ಸಿಲ್ಲೆಯಲ್ಲಿ ತಮ್ಮ ಧೈರ್ಯವನ್ನು ಬಲಪಡಿಸಲು ಸಾವರ್ಕರ್ 'ಅನಾದಿ ಮಿ, ಅನಂತ ಮಿ' ಕವಿತೆ ರಚಿಸಿದರು ಎಂದು ವಿವರಿಸಿದ್ದಾರೆ.
"ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷ್ ಸೆರೆಯಿಂದ ತಮ್ಮ ದೇಶವನ್ನು ಮುಕ್ತಗೊಳಿಸಲು ತಮ್ಮ ಹೋರಾಟವನ್ನು ಮುಂದುವರಿಸಲು ಸಮುದ್ರಕ್ಕೆ ಹಾರಿದರು. ಸಾವರ್ಕರ್ 60 ಗಜಗಳಷ್ಟು ದೂರ ಈಜಿ ಮಾರ್ಸಿಲ್ಲೆಸ್ ತೀರವನ್ನು ತಲುಪಿದರು. ಆದರೆ ದುರದೃಷ್ಟವಶಾತ್, ಅವರು ಮತ್ತೆ ಸೆರೆ ಸಿಕ್ಕರು. ಬ್ರಿಟಿಷರಿಂದ ಅಮಾನವೀಯ ಹಿಂಸೆಗೆ ಒಳಗಾಗುತ್ತಾರೆಂದು ಅವರಿಗೆ ಅದಾಗಲೇ ತಿಳಿದಿತ್ತು. ಆ ಸಮಯದಲ್ಲಿ, ದೇಶಕ್ಕಾಗಿ ಹೋರಾಡುವ ಶಕ್ತಿಯನ್ನು ಮರಳಿ ಪಡೆಯಲು ಅವರಿಗೆ ಸ್ಫೂರ್ತಿ ನೀಡಿದ ಕವಿತೆಯ ಸಾಲುಗಳು "ಅನಾದಿ ಮೆ... ಅನಂತ ಮೆ.. ಇದೇ ಹಾಡು," ಎಂದು ಶೆಲಾರ್ X ನಲ್ಲಿ ಬರೆದಿದ್ದಾರೆ.
ಅದರೊಂದಿಗೆ ಸಾವರ್ಕರ್ ಅವರ ಕವಿತೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದು, "ನಾಳೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ತ್ಯಾಗದ ದಿನ! 'ಅನಾದಿ ಮಿ ಅನಂತ ಮಿ ಅವಧ್ಯಾ ಮಿ ಭಲಾ, ಮರಿಲಾ ರಿಪು ಜಗತಿ ಆಸಾ ಕವನ ಜನ್ಮಲಾ' ಕವಿತೆಗೆ ರಾಜ್ಯ ಸರ್ಕಾರವು 'ಛತ್ರಪತಿ ಸಂಭಾಜಿ ಮಹಾರಾಜ ರಾಜ್ಯ ಪ್ರೇರಣಾ ಗೀತ್ ಪುರಸ್ಕಾರ-2025' ನೀಡಲು ನಿರ್ಧರಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಇದು ಪ್ರಶಸ್ತಿಯ ಮೊದಲ ವರ್ಷ ಮತ್ತು ಇದನ್ನು ವಾರ್ಷಿಕವಾಗಿ ನೀಡಲಾಗುವುದು. ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ವೀರ ಸಾವರ್ಕರ್ ಅವರಿಗೆ ಕೋಟಿ ಕೋಟಿ ನಮನಗಳು!" ಎಂದು ಬರೆದುಕೊಂಡಿದ್ದಾರೆ.
ಸಾವರ್ಕರ್ ಬ್ರಾಹ್ಮಣನಾಗಿದ್ದರೂ ಗೋಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆ: ಸಚಿವ ಗುಂಡೂರಾವ್ ವಿರುದ್ಧ ದೂರು ದಾಖಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ