
ನವದೆಹಲಿ: ಚುನಾವಣಾ ಬಾಂಡ್ ರದ್ದತಿ, ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದತಿ ಎತ್ತಿ ಹಿಡಿದಂತಹ ಪ್ರಮುಖ ವಿಷಯಗಳ ತೀರ್ಪು ಪ್ರಕಟಿಸಿದ್ದ ನ್ಯಾ| ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ದೌಪದಿ ಮುರ್ಮು ಅವರು ಬೆಳಗ್ಗೆ 10 ಗಂಟೆಗೆ ನಡೆಯುವ ಶಪಥ ಸಮಾರಂಭದಲ್ಲಿ ನೂತನ ಮುಖ್ಯ ನ್ಯಾಯ ಮೂರ್ತಿಗಳಾದ ಸಂಜೀವ್ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ನಿರ್ಗಮಿತ ನ್ಯಾಯಮೂರ್ತಿಡಿ.ವೈ ಚಂದ್ರಚೂಡ್ ಅವರಿಂದ ತೆರವಾದ ಸ್ಥಾನಕ್ಕೆ ಈಗ ಸಂಜೀವ್ ಖನ್ನಾ ಏರುತ್ತಿದ್ದು, ಮೇ. 13, 2025 ರವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ನ್ಯಾ. ಖನ್ನಾ ಅವರ ತಂದೆ ದೇವ್ರಾಜ್ ಖನ್ನಾ ಕೂಡ ದೆಹಲಿ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದರು. ಅವರ ಚಿಕ್ಕಪ್ಪ ಎಚ್.ಆರ್.ಖನ್ನಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಯೋಧ ಹುತಾತ್ಮ
ಜಮ್ಮು: ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಭಾನುವಾರ ನಡೆದ ಗುಂಡಿನ ಚಕಮಕಿ ವೇಳೆ ಜೂನಿಯರ್ ಕಮೀಷನ್ಸ್ ಆಫೀಸರ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರೆ ಮೂವರು ಯೋಧರು ಗಾಯ ಗೊಂಡಿದ್ದಾರೆ. ಇತ್ತೀಚೆಗೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಹತ್ಯೆಗೈದ ಉಗ್ರರು ಇಲ್ಲಿನ ಅರಣ್ಯದಲ್ಲಿ ಅಡಗಿರುವ ಮಾಹಿತಿ ಅನ್ವಯ ಸೇನೆ ಕಾರ್ಯಾಚರಣೆ ನಡೆಸಿದ ವೇಳೆ, ಎರಡೂ ಬಣಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಸುಬೇದಾರ್ ರಾಕೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಸ್ಥಳದಲ್ಲಿ 3- 4 ಉಗ್ರರು ಸಿಕ್ಕಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ