
ಬೆಂಗಳೂರು (ಜೂ.14): ಭಾರತದಲ್ಲಿ ನಕ್ಸಲ್ ಚಟುವಟಿಕೆ ನಡೆಸಲು ವಿದೇಶದಿಂದ 92 ಕೋಟಿ ರು. ದೇಣಿಗೆ ನೀಡಿರುವ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಮೆರಿಕ ಮೂಲದ ದಿ ತಿಮೋತಿ ಇನಿಶಿಯೇಟಿವ್ (ಟಿಟಿಐ) ಎಂಬ ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಜೋನಾಥನ್ ಎಸ್.ರಾಜನ್, ಮಿಕಾ ಮಾರ್ಕ್, ಅಜಿತ್ ವರ್ಗೀಸ್ ಮಥಾಯಿ, ಮೈಸೂರಿನ ಸುಪ್ರೀಂ ಜಾಯ್, ಛತ್ತೀಸ್ಗಢದ ವರ್ಗೀಸ್ ಚಾಕೊ, ಅಸ್ಸಾಂನ ಬಬ್ಲು ಕುರ್ಮಿ ಹಾಗೂ ಟಿಟಿಐ ಸಂಸ್ಥೆ ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುಎಪಿಎ ಹಾಗೂ ಬಿಎನ್ಎಸ್ ಕಾಯ್ದೆಯಡಿ ಒಳಸಂಚು, ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಇ.ಡಿ. ಅಧಿಕಾರಿಗಳು ನಡೆಸಿದ ದಾಳಿ ವೇಳೆ 95 ಕೋಟಿ ರು.ಗೂ ಅಧಿಕ ಅಕ್ರಮ ವಿದೇಶಿ ಹಣ ಬಳಕೆಯಾಗಿರುವುದು ಬೆಳಕಿಗೆ ಬಂದಿತ್ತು. ಸಂತೋಷ್ ಕುಮಾರ್ ಎಂಬ ವ್ಯಕ್ತಿ ಹೆಸರಿನಲ್ಲಿ ಯುಎಸ್ಎ ಟ್ರೂಯಿಸ್ಟ್ ಬ್ಯಾಂಕ್ನ ಸಾವಿರಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್ಗಳನ್ನು ಭಾರತದಲ್ಲಿ ಅಕ್ರಮವಾಗಿ ವಿತರಿಸಿ ಕರ್ನಾಟಕ, ಛತ್ತೀಸ್ಗಢ, ಅಸ್ಸಾಂ ಸೇರಿ ವಿವಿಧ ರಾಜ್ಯಗಳಲ್ಲಿ ಈ ಕಾರ್ಡ್ಗಳನ್ನು ಬಳಸಿಕೊಂಡು ಸುಮಾರು 44 ಕೋಟಿ ರು. ಪಡೆದಿರುವುದು ಇ.ಡಿ. ತನಿಖೆಯಲ್ಲಿ ಪತ್ತೆಯಾಗಿತ್ತು.
ಆರೋಪಿಗಳ ಪೈಕಿ ಮಿಕಾ ಮಾರ್ಕ್ ಬಳಿ 24 ವಿದೇಶಿ ಡೆಬಿಟ್ ಕಾರ್ಡ್ಗಳು ಪತ್ತೆಯಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳು ಸೇರಿ ಛತ್ತೀಸ್ಗಢದಲ್ಲಿ ಈ ಕಾರ್ಡ್ಗಳ ಮೂಲಕ ಶಂಕಾಸ್ಪ ಚಟುವಟಿಕೆಗಳಿಗೆ ಅವುಗಳನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಮತ್ತೊಬ್ಬ ಆರೋಪಿ ಅಜಿತ್ ವರ್ಗೀಸ್ ವಿಚಾರಣೆ ವೇಳೆ ಬೆಂಗಳೂರಿನ ಶೆಲ್ ಕಂಪನಿಗಳ ವಹಿವಾಟು ಬೆಳಕಿಗೆ ಬಂದಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ ಹಣ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಗ್ರವಾದದ ತರಬೇತಿಗೆ ಹಣ ಬಳಕೆ:
ಎಟಿಎಂ ಮೂಲಕ ಪಡೆದ ಅಕ್ರಮ ಹಣವನ್ನು ಭಾರತದಾದ್ಯಂತ ಟಿಐಐ ಚಟುವಟಿಕೆಗಳಾದ ಧರ್ಮೋಪದೇಶ ಹಾಗೂ ಎಡಪಂಥೀಯ ಉಗ್ರವಾದದ ತರಬೇತಿಗೆ ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಎಸಿಪಿ ನೇತೃತ್ವದ ಪೊಲೀಸ್ ತಂಡ ತನಿಖೆ ಕೈಗೊಂಡಿದ್ದು, ನಂತರ ಇ.ಡಿ.ಗೆ ವರದಿ ಸಲ್ಲಿಸಲಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಕಳೆದ ಏ.18 ಮಿಕಾ ಮಾರ್ಕ್ ಎಂಬಾತನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಾಗ ಆತನ ಬಳಿ ಟ್ರೂಯಿಸ್ಟ್ ಬ್ಯಾಂಕಿನ 24 ವಿದೇಶಿ ಡೆಬಿಟ್ ಕಾರ್ಡ್ಗಳು ಇರುವುದು ಕಂಡು ಬಂದಿತ್ತು. ಆರೋಪಿ ಭಾರತಕ್ಕೆ ಹಲವು ಬಾರಿ ಬಂದಿದ್ದು, ಬರುವಾಗ ವಿದೇಶಿ ಡೆಬಿಟ್ ಕಾರ್ಡ್ಗಳನ್ನು ತೆಗೆದುಕೊಂಡು ಬಂದಿರುವುದು ಪತ್ತೆಯಾಗಿತ್ತು. ಈತ ಭಾರತದಲ್ಲಿ ದಿ ತಿಮೋತಿ ಇನಿಶಿಯೇಟಿವ್ ಸಂಸ್ಥೆಯ ಹಣಕಾಸಿನ ಪ್ರಮುಖ ಕಾರ್ಯಾಚರಣೆ ನಡೆಸುವ ವ್ಯಕ್ತಿಯಾಗಿದ್ದಾನೆ. ಈತನ ಕಾರ್ಡ್ಗಳ ಮೇಲೆ ಸಂತೋಷ್ ಕುಮಾರ್ (ಅನಾಮಧೇಯ) ಎಂದು ನಮೂದಾಗಿತ್ತು. ಆರೋಪಿ ಅಜಿತ್ ವರ್ಗೀಸ್ ನಿರ್ದೇಶನದಂತೆ ಈತ ಮೂಲ ದಾಖಲೆಗಳನ್ನು ಮರೆ ಮಾಚುತ್ತಿದ್ದ. ಭಾರತದಲ್ಲಿ ಸುಮಾರು 1000ಕ್ಕೂ ಹೆಚ್ಚು ನಕಲಿ ಡೆಬಿಟ್ಗಳನ್ನು ಆತ ವಿತರಿಸಿದ್ದಾನೆ.
ಕ್ಲೌಡ್ ಆ್ಯಪ್ನಲ್ಲಿದ್ದ ಡೇಟಾಗಳನ್ನು ಯುಎಸ್ಎ, ಟಿಟಿಐ ನಿರ್ವಹಿಸುವ ಸರ್ವರ್ಗಳಿಗೆ ರಿಮೋಟ್ ಆಗಿ ಪ್ರವೇಶಿಸಿ ಅಳಿಸಿ ಹಾಕಿದ್ದಾನೆ. ಜತೆಗೆ ಬ್ಯಾಂಕ್ ಖಾತೆಯನ್ನು ಅಳಿಸಿ ಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾನೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ನಗದು ವಹಿವಾಟು ಮಾಡಿದ್ದಾನೆ. ಇದರಲ್ಲಿ 6.34 ಕೋಟಿ ರು. ಹಿಂಪಡೆಯಲಾಗಿದೆ. ಆರೋಪಿಗಳು 95 ಕೋಟಿ ರೂ.ಗೂ ಹೆಚ್ಚು ಅಕ್ರಮ ಹಣ ಬಳಕೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ