
ಕ್ವಿಂಗ್ಡಾವೊ, ಚೀನಾ (ಜೂ.27): ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಸಚಿವ ಡಾಂಗ್ ಜುನ್ ಅವರೊಂದಿಗೆ ಭೇಟಿಯಾಗಿ, ಗಡಿಯಲ್ಲಿ ಶಾಂತಿ ಕಾಪಾಡುವುದು ಮತ್ತು ಹೊಸ ಉದ್ವಿಗ್ನತೆ ತಪ್ಪಿಸುವುದು ಅಗತ್ಯ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
ಈ ಭೇಟಿಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವ ಬಗ್ಗೆಯೂ ಚರ್ಚೆ ನಡೆದಿದ್ದು, ಕೋವಿಡ್-19 ಮತ್ತು ಗಾಲ್ವಾನ್ ಕಣಿವೆಯ ಘರ್ಷಣೆಯಿಂದಾಗಿ 2020ರಿಂದ ಸ್ಥಗಿತಗೊಂಡಿದ್ದ ಈ ಯಾತ್ರೆ ಶೀಘ್ರದಲ್ಲೇ ಮತ್ತೆ ಆರಂಭವಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಮಧುಬನಿ ಕಲಾಕೃತಿಯ ಉಡುಗೊರೆ
ರಾಜನಾಥ್ ಸಿಂಗ್ ಚೀನಾದ ಸಚಿವರಿಗೆ ಬಿಹಾರದ ಸಾಂಪ್ರದಾಯಿಕ ಮಧುಬನಿ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ಕಲಾಕೃತಿಯು ತನ್ನ ವಿಶಿಷ್ಟ ವಿನ್ಯಾಸ, ಪ್ರಕಾಶಮಾನ ಬಣ್ಣಗಳು ಮತ್ತು ಮಿಥಿಲಾ ಸಂಸ್ಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
SCO ಘೋಷಣೆಗೆ ಸಹಿ ನಿರಾಕರಣೆ
ರಾಜನಾಥ್ ಸಿಂಗ್ SCO ಘೋಷಣೆಗೆ ಸಹಿ ಹಾಕಲು ನಿರಾಕರಿಸಿದರು. ಭಯೋತ್ಪಾದನೆಯಂತಹ ಗಂಭೀರ ವಿಷಯವನ್ನು ದಾಖಲೆಯಲ್ಲಿ ದುರ್ಬಲವಾಗಿ ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆ ಪೋಷಿಸುವವರು ಪರಿಣಾಮ ಎದುರಿಸಬೇಕು:
ಭಯೋತ್ಪಾದನೆಯನ್ನು ಪೋಷಿಸುವ ಮತ್ತು ದುರಾಸೆಗಾಗಿ ಬಳಸುವ ದೇಶಗಳು ಅದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿಯಾಗಿ ಬಳಸುವ ದ್ವಿಮುಖ ನೀತಿಗಳು ಇನ್ನು ಮುಂದುವರಿಯಲು ಸಾಧ್ಯವಿಲ್ಲ ಎಂದು ಚೀನಾ-ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ