ಮೋದಿ, ಬಿಜೆಪಿ ಪಾಲಿಗೆ ಮಣಿಪುರ ಭಾರತದ ಭಾಗವಲ್ಲ: ರಾಹುಲ್ ಗಾಂಧಿ

By Kannadaprabha NewsFirst Published Jan 15, 2024, 7:16 AM IST
Highlights

ಲೋಕಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಹೊಸ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್‌  ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ 67 ದಿನಗಳ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಭಾನುವಾರದ ಮಣಿಪುರದ ಥೌಬಾಲ್‌ನಲ್ಲಿ ಚಾಲನೆ ಸಿಕ್ಕಿದೆ.

ಥೌಬಾಲ್: ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಹೊಸ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್‌  ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ 67 ದಿನಗಳ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಭಾನುವಾರದ ಮಣಿಪುರದ ಥೌಬಾಲ್‌ನಲ್ಲಿ ಚಾಲನೆ ಸಿಕ್ಕಿದೆ. ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಈ ಹೈಬ್ರಿಡ್‌ ಮಾದರಿಯ ಪಾದಯಾತ್ರೆ ಮಣಿಪುರದ ಇಂಫಾಲದಲ್ಲಿ ಆರಂಭವಾಗಿ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಪಾದಯಾತ್ರೆ ಹಾಗೂ ಬಸ್ ಯಾತ್ರೆಯ ಮಿಶ್ರಣವಾಗಿರುವ ಈ ಯಾತ್ರೆಗೆ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಔಪಚಾರಿಕ ಚಾಲನೆ ನೀಡಿ, ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ರಾಜಧಾನಿ ಇಂಫಾಲ್ ಸಮೀಪದ ಥೌಬಾಲ್‌ನಲ್ಲಿ ಯಾತ್ರೆ ಆರಂಭಿಸಿ ಮಾತನಾಡಿದ ರಾಹುಲ್ ಗಾಂಧಿ, 'ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ನಡೆದ ಹಿಂಸಾಚಾರದ ಪರಿಣಾಮ ಲಕ್ಷಾಂತರ ಜನರು ಭಾರೀ ನಷ್ಟ ಅನುಭವಿಸಿದ್ದಾರೆ. ಆದರೆ ನಿಮ್ಮ ಕಣ್ಣೀರು ಒರೆಸಲು, ನಿಮ್ಮ ಕೈಹಿಡಿದು ಸಂತೈಸಲು ಮತ್ತು ನಿಮ್ಮನ್ನು ಆಲಿಗಿಸಿ ಧೈರ್ಯ ಹೇಳಲು ಪ್ರಧಾನಿ ಇಲ್ಲಿಗೆ ಬಂದಿಲ್ಲ, ಬಹುಶಃ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾಲಿಗೆ ಮಣಿಪುರ ಭಾರತದ ಭಾಗ ಅಲ್ಲದೇ ಇರಬಹುದು, ನಿಮ್ಮ ನೋವು ಅವರ ನೋವು ಆಗಿಲ್ಲ ಎಂದು ಟೀಕಿಸಿದರು.

ದೇಶಕ್ಕೆ ಶಕ್ತಿ ಮೂಡಿಸಲು ರಾಹುಲ್ ಗಾಂಧಿಯಿಂದ ದೊಡ್ಡ ಪ್ರಯತ್ನ: ಡಿ.ಕೆ.ಶಿವಕುಮಾರ್‌

ಮೋದಿ ದೃಷ್ಟಿಯಲ್ಲಿ ಮಣಿಪುರ ಭಾರತದ್ದಲ್ಲ
ಮಣಿಪುರ ಹಿಂಸಾಚಾರದಿಂದ ಲಕ್ಷಾಂತರ ಜನರು ನಷ್ಟ ಅನುಭವಿಸಿದ್ದಾರೆ. ಅವರ ಕಣ್ಣೀರು ಒರೆಸಲು ಕೈ ಹಿಡಿದು ಸಂತೈಸಲು, ಅಲಿಂಗಿಸಿ ಧೈರ್ಯ ಹೇಳಲು ಪ್ರಧಾನಿ ಇಲ್ಲಿಗೆ ಬಂದಿಲ್ಲ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರೆಸ್ಸೆಸ್ ಪಾಲಿಗೆ ಮಣಿಪುರ ಭಾರತದ ಭಾಗ ಅಲ್ಲದೇ ಇರಬಹುದು ಎಂದು ರಾಹುಲ್ ಹೇಳಿದ್ದಾರೆ. ಜೊತೆಗೆ, 'ಯಾವಶಾಂತಿ, ಸೌಹಾರ್ದತೆ ಮತ್ತು ಪ್ರೀತಿಗಾಗಿ ಈ ರಾಜ್ಯವನ್ನು ಗುರುತಿಸಲಾಗುತ್ತಿತ್ತೋ ಅದನ್ನು ನಾವು ಈ ರಾಜ್ಯಕ್ಕೆ ಮರಳಿಸುತ್ತೇವೆ' ಎಂದು ನೆರೆದ ಮಣಿಪುರ ಜನತೆಗೆ ಇದೇ ವೇಳೆ ರಾಹುಲ್ ಭರವಸೆ ನೀಡಿದರು.

ಖರ್ಗೆ ಕಿಡಿ: ಇದಕ್ಕೂ ಮೊದಲು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಪ್ರಧಾನಿಗಳು ಇಲ್ಲಿಗೆ ಕೇವಲ ಮತ ಕೇಳಲು ಮಾತ್ರ ಬರುತ್ತಾರೆಯೇ ಹೊರತು ಇಲ್ಲಿಯ ಜನರ ನೋವು ಆಲಿಸಲು ಅಲ್ಲ. ಮೋದಿಗೆ ಸಮುದ್ರದಲ್ಲಿ ಸಂಚರಿಸಲು, ಸಮುದ್ರದಲ್ಲಿ ಮುಳುಗು ಹಾಕಲು ಸಮಯವಿದೆ. ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ' ಎಂದು ಕಿಡಿಕಾರಿದರು. ಜೊತೆಗೆ, 'ಸಮುದ್ರದ ದಂಡೆಯಲ್ಲಿ ಕುಳಿತು ಅವರು (ಮೋದಿ) ರಾಮ್ ರಾಮ್ ಎಂದು ಜಪ ಮಾಡುತ್ತಲೇ ಇರುತ್ತಾರೆ. ಆದರೆ ಜನರ ಬೆನ್ನಿಗೆ ಚೂರಿ ಹಾಕುತ್ತಾರೆ. 'ಮೂಹ್ ಮೇ ರಾಮ್. ಬಗಲ್ ಮೇ ಚೂರಿ' ಎಂದು ಹರಿಹಾಯ್ದರು. ರಾಮಸ್ಮರಣೆ ಯನ್ನು ಮತ ಕೇಳವುದಕ್ಕೋಸ್ಕರ ಮಾಡಬಾರದು. ಬಿಜೆಪಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತದೆ' ಎಂದು ಕಿಡಿಕಾರಿದರು.

ಡಿಸಿಎಂ ಕುರಿತು ಚರ್ಚೆ ಇಲ್ಲಿಗೆ ನಿಲ್ಲಿಸಿದ್ರೆ ಸರಿ; ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ವಾರ್ನಿಂಗ್!

ಅಲ್ಲದೆ, 'ಕಾಂಗ್ರೆಸ್ ಎಂದೆಂದಿಗೂ ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಸಮಾನತೆ ಪರವಾಗಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ಹಾಗೂ ಬಲಪಂಥೀಯ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ನಡೆಸಲಾಗುತ್ತಿದೆ' ಎಂದು ಹೇಳಿದರು. ಈ ವೇಳೆ ದೇಶದ ಪ್ರಮುಖ ಕಾಂಗ್ರೆಸ್ ನಾಯಕರು ಹಾಜರಿದ್ದರು.

ಯಾತ್ರೆ ವಿಳಂಬ:
ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವು ವಿಳಂಬವಾಗಿ ಆರಂಭವಾಯಿತು. ದಿಲ್ಲಿಯ ವಿಷಮ ಹವಾಮಾನ ಕಾರಣ ದಿಲ್ಲಿಯಿಂದ ರಾಹುಲ್, ಖರ್ಗೆ ಹಾಗೂ ಕಾಂಗ್ರೆಸ್ ನಾಯಕರ ವಿಮಾನ ವಿಳಂಬವಾಗಿ ಹಾರಿತು. ಹೀಗಾಗಿ ಯಾತ್ರಾರಂಭ ತಡವಾಯಿತು.

ಹೀಗಿರಲಿದೆ ಯಾತ್ರೆ:
ಈ ಹಿಂದೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಶ್ರೀನಗರದವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದ ರಾಹುಲ್ ಈಗ ದೇಶದ ಪೂರ್ವ ಭಾಗದಿಂದ ಪಶ್ಚಿಮದ ಕಡೆಗೆ ಹೊರಟಿದ್ದಾರೆ. ಆದರೆ ದುರ್ಗಮ ಪ್ರದೇಶಗಳು ಇರುವ ಕಾರಣ ಇದು ಪಾದಯಾತ್ರೆ ಮತ್ತು ಬಸ್ ಯಾತ್ರೆ ಎರಡನ್ನೂ ಒಳಗೊಂಡಿರಲಿದೆ. 67 ದಿನದಲ್ಲಿ 110 ಜಿಲ್ಲೆಗಳ, 337 ವಿಧಾನಸಭಾ ಕ್ಷೇತ್ರ, 100 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 6713 ಕಿ.ಮೀ ಕ್ರಮಿಸಿ ಮಾ.20ಕ್ಕೆ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಇದು ಹೆಚ್ಚಾಗಿ ಬಸ್‌ನಲ್ಲಿ ಸಾಗಲಿದ್ದು, ಮಧ್ಯೆ ಮಧ್ಯೆ ಕಾಲ್ನಡಿಗೆಯಲ್ಲಿ ಕ್ರಮಿಸುತ್ತದೆ. ಈ ಯಾತ್ರೆಯು ಅತಿ ಹೆಚ್ಚು ಎಂದರೆ, ಉತ್ತರ ಪ್ರದೇಶದಲ್ಲಿ 11 ದಿನಗಳಲ್ಲಿ 1,074 ಕಿ.ಮೀ. ಕ್ರಮಿಸಲಿದೆ. ಇದು ಅಮೇಠಿ, ಗಾಂಧಿ ಕುಟುಂಬದ ಭದ್ರಕೋಟೆ ರಾಯ್ ಬರೇಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಾಣಸಿ ಮೂಲಕ ಹಾದುಹೋಗುತ್ತದೆ.

ರಾಹುಲ್ ಯಾತ್ರೆಗೆ ಜನ ಸೇರುತ್ತಾರೆ, ಮತ ಹಾಕಲ್ಲ; ಕಾರಣ ಬಿಚ್ಚಿಟ್ಟ AIUDF ಮುಖ್ಯಸ್ಥ ಬದ್ರುದ್ದೀನ್!
 

ಡರೋ ಮತ್‌ ಸಹೋ ಮತ್‌:

ಕಳೆದ 10 ವರ್ಷಗಳ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ‘ಸಹೋ ಮತ್, ಡರೋ ಮತ್’ (ಅನ್ಯಾಯ ಸಹಿಸಬೇಡಿ, ಭಯಪಡಬೇಡಿ) ಎಂಬ ಅಡಿಬರಹದೊಂದಿಗೆ ‘ನ್ಯಾಯ ಗೀತೆ’ ಬಿಡುಗಡೆ ಮಾಡಿದೆ.

ಈ ಹಿಂದೆ 2022ರಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಜಿಲ್ಲೆಗಳು ಮತ್ತು 76 ಲೋಕಸಭಾ ಕ್ಷೇತ್ರಗಳನ್ನು ಕ್ರಮಿಸಿತ್ತು. ಮಣಿಪುರವು ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. ಇದು 180 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ರಾಹುಲ್ ಮತ್ತೊಬ್ಬ ಆಪ್ತ ದೇವೋರಾ ಕಾಂಗ್ರೆಸ್‌ಗೆ ಗುಡ್‌ಬೈ: ಶಿಂಧೆ ಪಕ್ಷಕ್ಕೆ

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಮಿಲಿಂದ್ ದೇವ್ರಾ ಭಾನುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ರಾಹುಲ್ ಆಪ್ತ ಬಳಗದ ಮತ್ತೊಬ್ಬ ನಾಯಕ ಕಾಂಗ್ರೆಸ್ ತೊರೆದಂತಾಗಿದೆ.

ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ನೀಡಿ ಮತ್ತೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶವನ್ನು ಯಾತ್ರೆ ಹೊಂದಿದೆ. ಜೊತೆಗೆ ವೇಳೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಬಗ್ಗೆ ಗಮನ ಸೆಳೆಯಲಿದೆ. ಇದೇ ಕಾರಣಕ್ಕಾಗಿಯೇ ಹಿಂಸಾಚಾರ ಪೀಡಿತ ಮಣಿಪುರವನ್ನು ಯಾತ್ರೆಯ ಆರಂಭದ ಸ್ಥಳವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

click me!