ದಿಲ್ಲಿ ಪ್ರತಿಭಟನೆ ವೇಳೆ ಉಗ್ರ ದಾಳಿಗೆ ಪಾಕಿಸ್ತಾನದ ಸಂಚು, ಅಗತ್ಯ ವಸ್ತು ಸಂಗ್ರಹಿಸಿ ದೆಹಲಿಗೆ ತೆರಳಿದ್ದ ತಂಡ!

Published : Aug 06, 2026, 09:09 AM IST
cjp protest

ಸಾರಾಂಶ

ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ದಾಳಿಗೆ ಸಂಚು ರೂಪಿಸಿದ್ದ ಪಾಕ್ ಬೆಂಬಲಿತ ಉಗ್ರ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಇತ್ತ, ಪ್ರಧಾನಿ ಮೋದಿಗೆ ನಿಂದಿಸಿದ್ದ ರುಚಿಕಾ ಸಿಂಗ್ ಯುವಜನರ ಪರ ನಿಲ್ಲುವುದಾಗಿ ಹೇಳಿದ್ದರೆ, ಜಾರ್ಖಂಡ್‌ನಲ್ಲಿ ವಿದ್ಯಾರ್ಥಿ ನಾಯಕ ಮಹತೋ ಉಪವಾಸ ಅಂತ್ಯಗೊಳಿಸಿದ್ದಾರೆ.

ಚಂಡೀಗಢ: ಮಂಗಳವಾರ ಪಂಜಾಬ್‌ ಪೊಲೀಸರಿಂದ ಬಂಧಿತರಾದ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಉಗ್ರಜಾಲವು ದೆಹಲಿ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ದಾಳಿ ನಡೆಸುವುದಕ್ಕೆ ಎಲ್ಲ ರೀತಿಯಲ್ಲಿಯೂ ಸಿದ್ಧತೆ ನಡೆಸಿತ್ತು ಎನ್ನುವ ಆಘಾತಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಪಂಜಾಬ್‌ ಪೊಲೀಸರು ಮಂಗಳವಾರ ನಾಲ್ವರು ಅಪ್ರಾಪ್ತರು ಸೇರಿ 9 ಮಂದಿಯನ್ನು ಬಂಧಿಸಿದ್ದರು. ಈ ವಿಚಾರಣೆ ವೇಳೆ 2 ಜಾಲದ ಪೈಕಿ ಒಂದು ಜಾಲ ಜಂತರ್‌ಮಂತರ್‌ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿತ್ತು. ಅವರಿಗೆ ಐಎಸ್‌ಐನಿಂದ ಎಲ್ಲ ರೀತಿಯಲ್ಲಿಯೂ ನೆರವು ದೊರಕಿತ್ತು. ಹೀಗಾಗಿ ಅಗತ್ಯ ಸೌಕರ್ಯಗಳು ಹಾಗೂ ಪೆಟ್ರೋಲ್‌ ಬಾಂಬ್‌ ತಯಾರಿಕೆಗೆ ಬೇಕಾದ ಸಾಮಾಗ್ರಿಗಳೊಂದಿಗೆ ಜಂತರ್‌ಮಂತರ್‌ಗೆ ಗುಂಪಿನ ಸದಸ್ಯರು ತೆರಳಿದ್ದರು. ಆದರೆ ಅವರು ಅಲ್ಲಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ ಎನ್ನುವ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮುಂದೆ ಯುವಕರ ಪರ ನಿಲ್ಲುವೆ: ಮೋದಿಗೆ ಬೈದ ರುಚಿಕಾ ಜಿರಳೆಗೆ ಅಭಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಬಗ್ಗೆ ಕೀಳು ಪದ ಬಳಸಿ ಬೈದು, ಬಳಿಕ ಬಹಿರಂಗವಾಗಿ ಎರಡು ಬಾರಿ ಕ್ಷಮೆಯಾಚಿಸಿದ್ದ ರುಚಿಕಾ ಸಿಂಗ್‌, ಭವಿಷ್ಯದಲ್ಲಿ ಯುವಜನರ ಪರವಾಗಿ ನಿಲ್ಲಲು ದೃಢಸಂಕಲ್ಪ ಮಾಡಿದ್ದಾಳೆ ಎಂದು ಸಿಜೆಪಿ ವಕ್ತಾರೆ ರತ್ನಾ ಸಿಂಗ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರತ್ನಾ, ‘ರುಚಿಕಾಳ ಜತೆ ಮಾತಾಡಿದೆ. ಅವಳು ಅತ್ಯಂತ ಧೈರ್ಯಶಾಲಿ. ಈ ಪರಿಸ್ಥಿತಿ ಎದುರಿಸುವಷ್ಟು ಬಲಶಾಲಿಯಾಗಿದ್ದೇನೆ, ನನಗೆ ಸಮಾಲೋಚನೆ ಅಗತ್ಯವಿಲ್ಲ. ಭವಿಷ್ಯದಲ್ಲೂ ಯುವಜನರ ಪರವಾಗಿ ನಿಲ್ಲುವ ದೃಢ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾಳೆ. ಆಕೆ ಮನೆಗೆ ಮರಳಿದ ನಂತರ ನಾವು ಶೀಘ್ರದಲ್ಲೇ ಆಕೆಯನ್ನು ಭೇಟಿಯಾಗುತ್ತೇವೆ’ ಎಂದಿದ್ದಾರೆ.

ಸೋನಂ ಮನವಿ ಮೇರೆಗೆ ವಿದ್ಯಾರ್ಥಿ ನಾಯಕ ಮಹತೋ ಉಪವಾಸ ಅಂತ್ಯ

ಛತ್ರಪತಿ ಸಂಭಾಜಿನಗರ: ಜಾರ್ಖಂಡ್‌ನಲ್ಲಾಗುತ್ತಿರುವ ಸರ್ಕಾರಿ ನೌಕರಿಗಳ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮದ ವಿರುದ್ಧ 4 ದಿನದಿಂದ ಉಪವಾಸ ಕೈಗೊಂಡಿದ್ದ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್‌ ಮಹತೋ ಅವರು ಬುಧವಾರ ನಿರ್ಜಲ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಅವರೊಂದಿಗೆ ಉಪವಾಸ ಕುಳಿತಿರುವ ಇಬ್ಬರು ಮಹಿಳೆಯರು ಸೇರಿ ಇನ್ನೂ 5 ಮಂದಿ ಉಪವಾಸ ಕೈಬಿಟ್ಟ ಬಗ್ಗೆ ಮಾಹಿತಿಯಿಲ್ಲ. ನೀಟ್‌ ವಿರುದ್ಧದ ಸಿಜೆಪಿ ಹೋರಾಟದ ಭಾಗವಾಗಿ ಅನ್ನಾಹಾರ ತ್ಯಜಿಸಿದ್ದ ಸೋನಂ ವಾಂಗ್ಚುಕ್‌ ಅವರ ಒತ್ತಾಯದ ಮೇರೆಗೆ ನೀರು ಸೇವಿಸಿದ್ದಾರೆ. ಆದರೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವ ವರೆಗೆ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅತ್ತ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಹೋರಾಟದ ಮುಂದಾಳತ್ವ ವಹಿಸಿದ್ದ ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಅವರು ಜಾರ್ಖಂಡ್‌ನ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಸಾಂಸ್ಥಿಕ ಹೊಣೆಗಾರಿಕೆಯನ್ನು ಆಗ್ರಹಿಸಲು ಯುವ ಚಳುವಳಿಯು ‘ಒತ್ತಡದ ಗುಂಪು’ (ಪ್ರೆಶರ್‌ ಗ್ರೂಪ್) ಆಗಲಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2028ರಿಂದ ವೆಹಿಕಲ್‌ ಟು ವೆಹಿಕಲ್‌ ಸಂವಹನ ವ್ಯವಸ್ಥೆ ಕಡ್ಡಾಯ ಜಾರಿ, ಏನಿದು ವಾಹನಗಳ ಸಂಭಾಷಣೆ?
India Latest News: ದಿಲ್ಲಿ ಪ್ರತಿಭಟನೆ ವೇಳೆ ಉಗ್ರ ದಾಳಿಗೆ ಪಾಕಿಸ್ತಾನದ ಸಂಚು, ಅಗತ್ಯ ವಸ್ತು ಸಂಗ್ರಹಿಸಿ ದೆಹಲಿಗೆ ತೆರಳಿದ್ದ ತಂಡ!