
ಪ್ರತಿಯೊಂದು ವೈಫಲ್ಯವೂ ನಿರಾಶೆಯಲ್ಲಿ ಕೊನೆಗೊಳ್ಳುವುದಿಲ್ಲ. ಕೆಲವೊಮ್ಮೆ, ಅದು ಯಾರೂ ನಿರೀಕ್ಷಿಸದ ರೀತಿಯಲ್ಲಿ ಭವಿಷ್ಯವನ್ನು ಸದ್ದಿಲ್ಲದೆ ಬದಲಾಯಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಅನುಭವಿಸುವ ಹಿನ್ನಡೆಗಳು ಹೇಗೆ ಮುಂದಿನ ಪೀಳಿಗೆಗೆ ಅನಿರೀಕ್ಷಿತ ಗೆಲುವಾಗಿ ಮಾರ್ಪಡಬಹುದು ಎಂಬುದಕ್ಕೆ ನ್ಯೂಯಾರ್ಕ್ ಮೂಲದ ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಹಂಚಿಕೊಂಡಿರುವ ಈ ಕಥೆಯೇ ಸಾಕ್ಷಿ.
ಐಐಟಿ ಬಿಎಚ್ಯು ಪದವೀಧರ ಹಾಗೂ ಪ್ರಸ್ತುತ ನ್ಯೂಯಾರ್ಕ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಆಕಾಶ್ ಸಂಪೂರ್ಣಾನಂದ ಪಾಂಡೆ ಅವರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ತಂದೆಯ ಕಥೆಯನ್ನು ಹಂಚಿಕೊಂಡಿದ್ದಾರೆ. "ನನಗೆ ಸಂಭವಿಸಿದ ಅತ್ಯುತ್ತಮ ವಿಷಯವೆಂದರೆ ನನ್ನ ತಂದೆ ಐಐಟಿ ಜೆಇಇ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು" ಎಂದು ಬರೆಯುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ.
1980ರ ಬೇಸಿಗೆಯ ದಿನಗಳಲ್ಲಿ, ಸಣ್ಣ ಹಳ್ಳಿಯೊಂದರ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆಕಾಶ್ ಅವರ ತಂದೆಗೆ ಪರೀಕ್ಷೆಗೆ ಕೇವಲ ಆರು ತಿಂಗಳ ಮುಂಚೆಯಷ್ಟೇ ಐಐಟಿ ಜೆಇಇ ಬಗ್ಗೆ ತಿಳಿದುಬಂದಿತ್ತು. ಪರೀಕ್ಷಾ ಕೇಂದ್ರ ತಲುಪಲು ಜೇಬಿನಲ್ಲಿ ಕೇವಲ ₹10 ಇಟ್ಟುಕೊಂಡು, ಸುಮಾರು 200 ಕಿಲೋಮೀಟರ್ ದೂರ ಲಿಫ್ಟ್ ಕೇಳುತ್ತಾ ಪ್ರಯಾಣಿಸಿದ್ದರು. ಆದರೆ, ಸೂಕ್ತ ಮಾರ್ಗದರ್ಶನವಿಲ್ಲದೆ ಪರೀಕ್ಷೆಗೆ ಕುಳಿತ ಅವರಿಗೆ ನಿರಾಸೆಯಾಯಿತು. "ವಿಫಲವಾಯಿತು, ಅದ್ಭುತ! ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ" ಎಂದು ಆಕಾಶ್ ಅವರ ತಂದೆ ತಮಾಷೆಯಾಗಿ ಹೇಳಿಕೊಳ್ಳುತ್ತಿದ್ದರು.
ಪರೀಕ್ಷೆಯಲ್ಲಿ ಸೋತರೂ ಆಕಾಶ್ ಅವರ ತಂದೆ ಎಂದಿಗೂ ಕಹಿ ಭಾವನೆ ಹೊಂದಿರಲಿಲ್ಲ. ಬದಲಾಗಿ, ತಮ್ಮ ಬಾಲ್ಯದುದ್ದಕ್ಕೂ ಐಐಟಿ ಪದವೀಧರರನ್ನು ಮಹಾನ್ ಸೆಲೆಬ್ರಿಟಿಗಳಂತೆ ಬಣ್ಣಿಸುತ್ತಿದ್ದರು. ಅತಿ ಮುಖ್ಯವಾಗಿ, ತಂದೆ ಐಐಟಿ ಓದದೇ ಇದ್ದುದರಿಂದ ಆಕಾಶ್ ಮೇಲೆ 'ಅಪ್ಪನ ಹಾದಿಯಲ್ಲೇ ನಡೆಯಬೇಕು' ಎಂಬ ಯಾವುದೇ ಕುಟುಂಬದ ಒತ್ತಡವಿರಲಿಲ್ಲ.
ತಂದೆಯ ಜೆಇಇ ವೈಫಲ್ಯ ನನಗೆ ಒಂದು ವಿಚಿತ್ರ ಉಡುಗೊರೆಯನ್ನು ನೀಡಿತು. ಅದುವೇ 'ಶೂನ್ಯ ಒತ್ತಡ'. ನಾನು ಪರೀಕ್ಷೆಯಲ್ಲಿ ಫೇಲ್ ಆದರೂ ಅಪ್ಪನಂತೆಯೇ ಇರುತ್ತೇನೆ, ಸಾಧಿಸಿದರೆ ಇಡೀ ವಂಶದಲ್ಲೇ ಮೊದಲ ಐಐಟಿಯನ್ ಎನಿಸಿಕೊಳ್ಳುತ್ತೇನೆ ಎಂಬ ಸ್ಪಷ್ಟತೆ ನನಗಿತ್ತು" ಎಂದು ಆಕಾಶ್ ಬರೆದುಕೊಂಡಿದ್ದಾರೆ. ಯಾವುದೇ ಮಾನಸಿಕ ಒತ್ತಡವಿಲ್ಲದೆ, ವೈಫಲ್ಯದ ಭಯವಿಲ್ಲದೆ ಪರೀಕ್ಷೆಗೆ ತಯಾರಾಗಲು ಈ ಪರಿಸ್ಥಿತಿ ಅವರಿಗೆ 'ಐತಿಹಾಸಿಕ ಲಾಭ' ತಂದುಕೊಟ್ಟಿತು. ಸ್ವತಃ ತಾನು ಅನುತ್ತೀರ್ಣರಾದ ಪರೀಕ್ಷೆಯನ್ನು ಪಾಸ್ ಮಾಡಲು ಮಗನಿಗೆ ಎಂದಿಗೂ ಒತ್ತಡ ಹೇರಲಿಲ್ಲ.
ತಂದೆಯ ಜೀರೋ ಪ್ರೆಷರ್ ಬೆಂಬಲದಿಂದಾಗಿ ಆಕಾಶ್, 2012ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಐಐಟಿ ಜೆಇಇ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದರು. ಮಗ ಐಐಟಿಯನ್ ಆದಾಗ ಅವರ ತಂದೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ, ಆ ಸಂಭ್ರಮವನ್ನು ಅವರು ಅತ್ಯಂತ ಹುಚ್ಚಿನಿಂದ ಆಚರಿಸಿದ್ದರು.
ಆಕಾಶ್ ಅವರ ಈ ಭಾವನಾತ್ಮಕ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ನೆಟ್ಟಿಗರು ತಮ್ಮ ತಂದೆ-ತಾಯಂದಿರ ಹಳೆಯ ದಿನಗಳ ಕಷ್ಟದ ಕಥೆಗಳನ್ನು ಹಾಗೂ ವೈಫಲ್ಯವನ್ನು ಮೆಟ್ಟಿ ನಿಂತು ಸಾಧಿಸಿದ ಹಾದಿಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಅಪೂರ್ಣ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು, ಬದಲಾಗಿ ಅವರಿಗೆ ಮುಕ್ತ ವಾತಾವರಣ ನಿರ್ಮಿಸಿಕೊಡಬೇಕು ಎಂಬುದಕ್ಕೆ ಈ ಕಥೆ ಅತ್ಯುತ್ತಮ ಉದಾಹರಣೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ