
ಅಮರಾವತಿ(ಏ.24): ಆಂಧ್ರ ಪ್ರದೇಶದಲ್ಲಿ ರಾಜಕೀಯ ಮೇಲಾಟ, ಪ್ರತಿಭಟನೆ ಜೋರಾಗುತ್ತಿದೆ. ಇದರ ಪರಿಣಾಮ ಐಎಎಸ್ ಅಧಿಕಾರಿಗಳು, ಪೊಲೀಸರು ಸಾರ್ವಜನಿಕವಾಗಿ ನೋವು ಅನುಭವಿಸುವಂತಾಗಿದೆ. ಇಂದು ಪೇಪರ್ ಲೀಕ್ ಪ್ರಕರಣ ಕುರಿತು ಪ್ರತಿಭಟನೆ ನಡೆಸಲು ಮುಂದಾದ ವೈಎಸ್ಆರ್ ಪಕ್ಷದ ನಾಯಕಿ, ಸಿಎಂ ಜಗನ್ಮೋಹನ್ ರೆಡ್ಡಿ ಸಹದೋರಿ ವೈಎಸ್ ಶರ್ಮಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಬೆನ್ನಲ್ಲೇ ಸಿಎಂ ಜಗನ್ ತಾಯಿ ವೈಎಸ್ ವಿಜಯಮ್ಮ, ಮಹಿಳಾ ಪೊಲೀಸ್ ಕಪಾಳಕ್ಕೆ ಭಾರಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ದರ್ಪ ತೋರಿದ ವೈಎಸ್ ವಿಜಯಮ್ಮ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ತೆಲಂಗಾಣ ಸರ್ಕಾರದ ಸರ್ಕಾರಿ ನೇಮಕಾತಿ ಪರೀಕ್ಷಾ ಪತ್ರಿಕೆ ಸೋರಿಕೆಯಾಗಿದೆ. ಈ ಕುರಿತು ವಿಶೇಷ ತನಿಖಾ ದಳ ತನಿಖೆ ನಡೆಸುತ್ತಿದೆ. ಇದನ್ನು ವಿರೋಧಿಸಿರುವ ವೈಎಸ್ಆರ್ ಮುಖಂಡರು ಹಾಗೂ ವೈಎಸ್ಆರ್ ಕುಟುಂಬ ಪ್ರತಿಭಟನೆಗೆ ನಡೆಸುತ್ತಿದೆ. ಇಂದು ಬೆಳಗ್ಗೆ ವೈಎಸ್ ಶರ್ಮಿಳಾ ವಿಶೇಷ ತನಿಖಾ ದಳದ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಪ್ರತಿಭಟನೆಗೆ ನಿರತ ಶರ್ಮಿಳಾ ಅವರನ್ನು ಮಹಿಳಾ ಪೊಲೀಸರು ಹೊರಕ್ಕೆ ಎಬ್ಬಿಸಿ ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಕೆನ್ನೆಗೆ ಭಾರಿಸಿದ್ದಾರೆ. ಇತ್ತ ಮಹಿಳಾ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಈ ಘಟನೆಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇಷ್ಟೇ ಅಲ್ಲ ಶರ್ಮಿಳಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು.
ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಹೊಡೆದ ಜಗನ್ ಸಹೋದರಿ: ವಿಡಿಯೋ ವೈರಲ್
ವೈಎಸ್ ಶರ್ಮಿಳಾ ಪೊಲೀಸರ ಬಂಧನದಲ್ಲಿರುವುದು ಅರಿತ ತಾಯಿ ವೈಎಸ್ ವಿಜಯಮ್ಮ ನೇರವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾ ನಿರತರಿಗೆ ಉತ್ಸಾಹ ತುಂಬಿ, ಪುತ್ರಿ ಶರ್ಮಿಳಾ ಭೇಟಿಯಾಗಲು ಆಗಮಿಸಿದ ವಿಜಯಮ್ಮಗೆ ಹಿನ್ನಡೆಯಾಗಿದೆ. ಪೊಲೀಸರು ಪ್ರತಿಭಟನೆಗೆ ಹಾಗೂ ಪುತ್ರಿಯನ್ನು ಭೇಟಿಯಾಗಲು ಅವಕಾಶ ನೀಡಿಲ್ಲ. ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯಮ್ಮಗೆ ಪೊಲೀಸ್ ಠಾಣೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ವಿಜಯಮ್ಮ ಮಹಿಳಾ ಪೊಲೀಸ್ ಅಧಿಕಾರಿಯ ಕಪಾಳಕ್ಕೆ ಭಾರಿಸಿದ್ದಾರೆ. ಈ ವಿಡಿಯೋ ಬಹಿರಂಗವಾಗಿದೆ.
ಅನುಮತಿ ನಿರಾಕರಿಸಿದ ಪೊಲೀಸರು ವಿಜಯಮ್ಮ ಅವರನ್ನು ಮತ್ತೆ ಕಾರಿನಲ್ಲಿ ಕೂರಿಸಿ ವಾಪಸ್ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ವಿಜಯಮ್ಮ ಮಹಿಳಾ ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇತ್ತ ಪೊಲೀಸರು ವಿಜಯಮ್ಮ ಅವರನ್ನು ಮತ್ತೆ ಕಾರಿನಲ್ಲಿ ಕೂರಿಸಿ ಮನೆಗೆ ಕಳುಹಿಸಿದ್ದಾರೆ. ಪುತ್ರಿ ಹಾಗೂ ತಾಯಿ ಇಬ್ಬರು ಪೊಲೀಸರಿಗೆ ಕಪಾಳ ಮೋಕ್ಷ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಾಜಿ ಸಂಸದನ ಕೊಲೆ ಪ್ರಕರಣ: ಸಿಬಿಐನಿಂದ ಆಂಧ್ರ ಸಿಎಂ ಜಗನ್ ಚಿಕ್ಕಪ್ಪನ ಬಂಧನ
ಸಾರ್ವಜನಿಕೆ ಸೇವಾ ಆಯೋಗದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದರ ಹಿಂದೆ ಸರ್ಕಾರದ ಕೈವಾಡವಿದೆ ಅನ್ನೋ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಮಾಯಕರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆದಿದೆ. ಇದರ ಬೆನ್ನಲ್ಲೇ ವಿಶೇಷ ತನಿಖಾ ದಳ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವುದು ವೈಎಸ್ಆರ್ ಕುಟುಂಬ ಹಾಗೂ ಪಕ್ಷದ ತಲೆನೋವು ಹೆಚ್ಚಿಸಿದೆ. ಈ ತನಿಖೆ ವಿರುದ್ಧ ವೈಎಸ್ಆರ್ ಕುಟುಂಬ ಹಾಗೂ ಪಕ್ಷ ಪ್ರತಿಭಟನೆ ನಡೆಸಲು ಬೀದಿಗಿಳಿದಿದೆ.
ವಿಶೇಷ ತನಿಖಾ ದಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಿರಲಿಲ್ಲ. ಆದರೆ ಇಲ್ಲೇ ಪ್ರತಿಭಟನೆ ಮಾಡುತ್ತೇವೆ ಎಂದು ಶರ್ಮಿಳಾ ಪಟ್ಟು ಹಿಡಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇತ್ತ ಮಗಳನ್ನು ನೋಡುವ ಮೂಲಕ ಪ್ರತಿಭಟನೆಗೆ ಚುರುಕು ನೀಡಲು ಆಗಮಿಸಿದ ತಾಯಿ ವಿಜಯಮ್ಮ ಕೂಡ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ