ಹೈದರಾಬಾದ್: ತೆಲಂಗಾಣದ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲು ಮುಂದಾದ ವೈಎಸ್ಆರ್ ಪಕ್ಷದ ಶರ್ಮಿಳಾ ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತೆಲಂಗಾಣದ ವೈಎಸ್ಆರ್ ಕಾಂಗ್ರೆಸ್ನ ಮುಖ್ಯಸ್ಥೆ ಹಾಗೂ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ವೈಎಸ್ ಶರ್ಮಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತೆಲಂಗಾಣ ಸರ್ಕಾರ ನಡೆಸುವ ಸರ್ಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶರ್ಮಿಳಾ ಎಸ್ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿ ಅಲ್ಲಿಗೆ ತೆರಳಿದ್ದಾರೆ. ಆದರೆ ಈ ವೇಳೆ ಅವರನ್ನು ಪೊಲೀಸರು ತಡೆದಿದ್ದು, ಪೊಲೀಸರಿಗೂ ಶರ್ಮಿಳಾ ಅವರಿಗೂ ಚಕಮಕಿ ನಡೆದಿದೆ.
ಸುದ್ದಿಸಂಸ್ಥೆ ಎಎನ್ಐ ಶೇರ್ ಮಾಡಿರುವ ವೀಡಿಯೋದಲ್ಲಿ ಪೊಲೀಸರು ಶರ್ಮಿಳಾ ಅವರ ಕಾರನ್ನು ತಡೆಯುತ್ತಿರುವುದನ್ನು ಕಾಣಬಹುದಾಗಿದೆ. ಆದರೂ ಅವರು ಪೊಲೀಸರನ್ನು ದೂರ ಸರಿಯುವಂತೆ ಹೇಳಿ ವಿಶೇಷ ತನಿಖಾ ಸಂಸ್ಥೆ ಕಚೇರಿ ಮುಂದೆ ಬಂದು ಧರಣಿ ಕುಳಿತಿದ್ದಾರೆ. ನಂತರ ಆಕೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಅಲ್ಲಿಂದ ಏಳಿಸಿ ಕಳುಹಿಸಲು ನೋಡುತ್ತಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಜೊತೆಯೂ ಶರ್ಮಿಳಾ ಕೊಸರಾಡಿಕೊಂಡು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಪುರುಷ ಪೊಲೀಸ್ ಅಧಿಕಾರಿಯ ಕೆನ್ನೆಗೆ ಶರ್ಮಿಳಾ ಬಾರಿಸುತ್ತಿರುವ ದೃಶ್ಯವಿದೆ. ಈ ವೇಳೆ ಮಹಿಳಾ ಪೊಲೀಸರು ಮ್ಯಾಡಮ್ ಮ್ಯಾಡಮ್ ಎಂದು ಕರೆದರು ಕೇಳದ ಶರ್ಮಿಳಾ ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಿದ್ದಾರೆ. ಅಲ್ಲದೇ ಮಹಿಳಾ ಸಿಬ್ಬಂದಿ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ.
ತೆಲಂಗಾಣ ಭಾರತದ ಅಫ್ಘಾನಿಸ್ತಾನ, ಕೆಸಿಆರ್ ತಾಲಿಬಾನ್: ವೈಎಸ್ಆರ್ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಕಿಡಿ
ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ ನಡೆಸುವ ಸರ್ಕಾರಿ ನೇಮಕಾತಿ ಪರೀಕ್ಷೆಗೆ (recruitment exams) ಸಂಬಂಧಿಸಿದಂತೆ ನಡೆದ ಅಕ್ರಮಕ್ಕೆ ಖಂಡಿಸಿ ತೆಲಂಗಾಣದಾದ್ಯಂತ ಭಾರಿ ಪ್ರತಿಭಟನೆ ನಡೆದಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆಗೆ ( leak of question papers) ಸಂಬಂಧಿಸಿದಂತೆ ಇದುವರೆಹೆ 11 ಜನರನ್ನು ಬಂಧಿಸಲಾಗಿದೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೂರು ಪರೀಕ್ಷೆಗಳನ್ನು ಸರ್ಕಾರ ರದ್ದುಪಡಿಸಿತ್ತು.
ಈ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೆ ಚಂದ್ರಶೇಖರ್ ರಾವ್ ( K Chandrashekar Rao), ನೇತೃತ್ವದ ಸರ್ಕಾರವನ್ನು ವಿರೋಧಪಕ್ಷಗಳು ಟಾರ್ಗೆಟ್ ಮಾಡಿವೆ. ಇತ್ತ ತೆಲಂಗಾಣದಲ್ಲಿ ರಾಜಕೀಯ ಅಸ್ತಿತ್ವವನ್ನು ಪಡೆದುಕೊಳ್ಳಲು ಹೋರಾಡುತ್ತಿರುವ ಜಗನ್ ಸಹೋದರಿ ಶರ್ಮಿಳಾ ರೆಡ್ಡಿ, ಈ ಪ್ರಕರಣವನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಕಳೆದ ತಿಂಗಳು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿತ್ತು. ಜಗನ್ ಮೋಹನ್ ರೆಡ್ಡಿ ((Jagan Mohan Reddy) ಸಹೋದರಿಯಾಗಿರುವ ಶರ್ಮಿಳಾ ಇತ್ತೀಚೆಗೆ ತೆಲಂಗಾಣದಾದ್ಯಂತ (Telangana) ದೊಡ್ಡ ಮೆರವಣಿಗೆ ನಡೆಸಿದರು. ಈ ವೇಳೆ ಅವರು ಆಂಧ್ರದಲ್ಲಿ ಅಧಿಕಾರದಲ್ಲಿರುವ ತನ್ನ ಸಹೋದರನ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೂ ತನ್ನ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಒತ್ತಿ ಹೇಳಿದ್ದರು.
ನಾಯಿಗೇಕೆ ಆಂಧ್ರ ಸಿಎಂ ಮೇಲೆ ಸಿಟ್ಟು: ಜಗನ್ ಪೋಸ್ಟರ್ ಹರಿದು ಹಾಕಿದ ನಾಯಿ ವಿರುದ್ಧ ಕೇಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ