
ವಯನಾಡ: ಕೇರಳದ ವಯನಾಡ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಿದ್ದಾರೆ. ವಯನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ, ತಮ್ಮ ಮದರ್ ತೆರೇಸಾ ಬಂದಿದ್ದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ತಂದೆ ರಾಜೀವ್ ಗಾಂಧಿ ನಿಧನದ ಕೆಲ ತಿಂಗಳ ನಂತರ ಚುನಾವಣೆಯೊಂದರ ಬೈಠಕ್ಗಾಗಿ ಮದರ್ ತೆರೇಸಾ ನಮ್ಮ ಮನೆಗೆ ಬಂದಿದ್ದರು. ಅಂದು ನನಗೆ ನಿರ್ಗತಿಕರ ಪರವಾಗಿ ಕೆಲಸ ಮಾಡುವಂತೆ ಹೇಳಿದ್ದರು ಎಂದು ತಿಳಿಸಿದರು.
ಇಲ್ಲಿಯ ಜನತೆ ನೀಡಿದ ಪ್ರೀತಿಯಿಂದ ನನ್ನಲ್ಲಿಯ ಉತ್ಸಾಹವನ್ನು ಹೆಚ್ಚಿಸಿದೆ. ಕೆಲ ದಿನಗಳ ಹಿಂದೆ ನಾಮಪತ್ರ ಸಲ್ಲಿಕೆ ಮಾಡಲು ಇಲ್ಲಿಗೆ ಬಂದಾಗ ಮಾರ್ಗಮಧ್ಯೆ ಜನರೊಂದಿಗೆ ಮಾತನಾಡಿದೆ. ಅದರಲ್ಲೊಬ್ಬರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಾಯಿಗೆ ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂಬ ಆಸೆ ಇದೆ. ಆದ್ರೆ ವಯಸ್ಸು ಆಗಿರುವ ಕಾರಣ ಅವರಿಗೆ ನಡೆಯಲು ಸಾಧ್ಯವಿಲ್ಲ ಎಂದರು. ಹಾಗಾಗಿ ನಾನೇ ಅವರ ತಾಯಿ ಭೇಟಿಗೆ ತೆರಳಿದೆ. ಅವರು ನನ್ನನ್ನು ಪುಟ್ಟ ಮಗುವಿನಂತೆ ತಬ್ಬಿಕೊಂಡರು. ಅಂದು ನನ್ನ ತಾಯಿ ಮತ್ತು ಅವರ ಅಪ್ಪುಗೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಆಗ ವಯನಾಡಿನಲ್ಲಿ ನನ್ನೊಂದಿಗೆ ಅಮ್ಮ ಇದ್ದಾರೆ ಎಂದು ಅನ್ನಿಸಿತು ಎಂದು ಭಾವುಕ ಮಾತುಗಳನ್ನಾಡಿದರು.
ನನ್ನ ತಂದೆ ರಾಜೀವ್ ಗಾಂಧಿ ನಿಧನದ ನಂತರ ಆರೇಳು ತಿಂಗಳ ನಂತರ ಮದರ್ ತೆರೇಸಾ ನಮ್ಮ ಮನೆಗೆ ಬಂದಿದ್ದರು. ಅಂದು ನನಗೆ ಜ್ವರ ಇದ್ದಿದ್ರಿಂದ ಕೋಣೆಯಿಂದ ನಾನು ಹೊರಗೆ ಹೋಗಿರಲಿಲ್ಲ. ಆದ್ರೆ ಮದರ್ ತೆರೇಸಾ ಅವರೇ ಕೋಣೆಗೆ ಬಂದು ನನ್ನ ತಲೆ ಮೇಲೆ ಕೈ ಇರಿಸಿದರು. ನಂತರ ನನ್ನ ಕೈ ಹಿಡಿದು, ಗುಲಾಬಿ ಹೂ ನೀಡಿದರು. ಆ ಬಳಿಕ ನನ್ನೊಂದಿಗೆ ಕೆಲಸ ಮಾಡುವೆಯಾ ಎಂದು ಕೇಳಿದರು. ಇದಾದ 5-6 ವರ್ಷದ ನಂತರ ನನ್ನ ಸಂಬಂಧಿ ಸೋದರಿಯರೊಂದಿಗೆ ಕೆಲಸ ಮಾಡಲು ತೆರಳಿದೆ. ಮಕ್ಕಳಿಗೆ ಓದಿಸೋದು, ಶೌಚಾಲಯಗಳನ್ನು ಸ್ವಚ್ಛಗೊಳಿಸೋದು ಮತ್ತು ಅಡುಗೆ ತಯಾರಿಸೋದು ನನ್ನ ಕೆಲಸವಾಗಿತ್ತು. ಈ ಕೆಲಸದಿಂದ ನಾನು ಜನರ ಕಷ್ಟಗಳನ್ನು ತಿಳಿದುಕೊಂಡು, ಸೇವೆಯ ನಿಜವಾದ ಅರ್ಥ ಏನು ಎಂಬುದನ್ನು ತಿಳಿದುಕೊಂಡೆ ಎಂದು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಯನಾಡಿನ ಜನತೆಯೊಂದಿಗೆ ಹಂಚಿಕೊಂಡರು.
ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ಎಂಟ್ರಿ; ವಯನಾಡಿನಿಂದ ನಾಮಪತ್ರ ಸಲ್ಲಿಕೆ
ವಯನಾಡಿನಲ್ಲಿ ಭೂಕುಸಿತದ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳು ಹೇಗೆ ಪರಸ್ಪರ ಸಹಾಯ ಮಾಡಿವೆ ಎಂಬುದನ್ನು ಗಮನಿಸಿದ್ದೇನೆ. ನೀವೆಲ್ಲರೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೀರಿ. ಧೈರ್ಯಶಾಲಿಗಳಾಗಿರುವ ನಿಮ್ಮನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ನನ್ನ ತಂದೆ ರಾಜೀವ್ ಗಾಂಧಿ ನಿಧನದ ಬಳಿಕ ಸೋದರಿಯೇ ಅಮ್ಮನನ್ನು ನೋಡಿಕೊಂಡಿದ್ದಳು. ತಂದೆ ತೀರಿಕೊಂಡಿದ್ದ ಸಂದರ್ಭದಲ್ಲಿ ಪ್ರಿಯಾಂಕಾಗೆ ಕೇವಲ 17 ವರ್ಷ. ಅಂದು ತಾಯಿ ಎಲ್ಲವನ್ನು ಕಳೆದುಕೊಂಡು ದುಃಖದಲ್ಲಿದ್ದರು. ಪ್ರಿಯಾಂಕಾ ತಾಯಿಯಾಗಿ ನಮ್ಮನ್ನು ನೋಡಿಕೊಂಡಿದ್ದಳು ಎಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಹೇಳಿದ್ದರು.
ಇದನ್ನೂ ಓದಿ: ಶ್ರೀಮಂತ ಕುಟುಂಬದ ಪ್ರಿಯಾಂಕಾ ಗಾಂಧಿ ಆಸ್ತಿ ಎಷ್ಟಿದೆ? ಚಿನ್ನ-ಬೆಳ್ಳಿ ಲೆಕ್ಕಕ್ಕೆ ಅಚ್ಚರಿ ಖಚಿತ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ