ಕುಲಶೇಖರಪಟ್ಟಿಣಂನಲ್ಲಿ ಇಂದು ಇಸ್ರೋದ 2ನೇ ಉಡ್ಡಯನ ಕೇಂದ್ರಕ್ಕೆ ಪ್ರಧಾನಿ ಶಂಕುಸ್ಥಾಪನೆ

By Kannadaprabha NewsFirst Published Feb 28, 2024, 8:40 AM IST
Highlights

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿರುವ ಇಸ್ರೋದ 2ನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಚೆನ್ನೈ: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿರುವ ಇಸ್ರೋದ 2ನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಲಘು ಉಪಗ್ರಹಗಳ ಉಡಾವಣೆಗೆ ಈ ಕೇಂದ್ರವನ್ನು ಬಳಕೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ಪ್ರಸ್ತುತ ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರ ಕಾರ್ಯಾಚರಣೆ ನಡೆಸುತ್ತಿದೆ. 

ಇಂಧನ ಉಳಿತಾಯ: ತಮಿಳುನಾಡಿನಲ್ಲಿ ಉಪಗ್ರಹ ಉಡಾವಣಾ ಕೇಂದ್ರ ನಿರ್ಮಾಣ ಮಾಡುವುದರಿಂದ ಇಸ್ರೋಗೆ ಸಾಕಷ್ಟು ಪ್ರಮಾಣದಲ್ಲಿ ಇಂಧನ ಉಳಿತಾಯವಾಗಲಿದೆ. ಈ ಮೊದಲು ಶ್ರೀಹರಿಕೋಟಾದಿಂದ ಉಡಾವಣೆ ಮಾಡುವ ಸಮಯದಲ್ಲಿ ಶ್ರೀಲಂಕಾದ ಮೇಲೆ ಹಾದು ಹೋಗಬಾರದು ಎಂಬ ಕಾರಣಕ್ಕೆ ರಾಕೆಟನ್ನು ಅಗ್ನಿಯ ದಿಕ್ಕಿನತ್ತ ಹಾರಿಸಿ, ಬಳಿಕ ದಕ್ಷಿಣಕ್ಕೆ ತಿರುಗಿಸಲಾಗುತ್ತಿತ್ತು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರ್ಚಾಗುತ್ತಿತ್ತು. ಆದರೆ ತಮಿಳುನಾಡಿನಿಂದ ನೇರವಾಗಿ ದಕ್ಷಿಣಕ್ಕೆ ಹಾರಿಸುವ ಅವಕಾಶ ಇರುವುದರಿಂದ ಇಂಧನ ಉಳಿತಾಯವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಮಾನವಸಹಿತ ಗಗನಯಾತ್ರೆ: ಮಹಿಳೆಯರಿಗೆ ಏಕಿಲ್ಲ ಉಡ್ಡಯನ ಅವಕಾಶ?

ಇಸ್ರೋದ 3 ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ತಿರುವನಂತರಪುರ: ವಿವಿಧ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುವ ಇಸ್ರೋದ 3 ಬಾಹ್ಯಾಕಾಶ ಮೂಲ ಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ  ಚಾಲನೆ ನೀಡಿದರು. ಕೇರಳದ ತಿರುವನಂತಪುರಂನ ಇಸ್ರೋದ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್‌ಗೆ (ವಿಎಸ್‌ಎಸ್‌ಸಿ) ಭೇಟಿ ನೀಡಿದ್ದ ಪ್ರಧಾನಿ ಮೋದಿ ಈ ವೇಳೆ, ವಿಎಸ್ಎಸ್‌ಸಿಯಲ್ಲಿನ 'ಟ್ರೈ ಸೋನಿಕ್ ವಿಂಡ್ ಟನಲ್', ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಸನ್ ಕಾಂಪ್ಲೆಕ್ಸ್ ನಲ್ಲಿ ನಿರ್ಮಿತ 'ಸೆಮಿ ಕ್ರಯೋಜೆನಿಕ್ ಇಂಟಿಗ್ರೇಟೆಡ್ ಎಂಜಿನ್ ಮತ್ತು ಸ್ಟೇಜ್ ಸೆಟ್ ಫೆಸಿಲಿಟಿ' ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಲ್ಲಿ ಪಿಎಸ್‌ಎಲ್‌ಜಿ ಜೋಡಣಾ ಘಟಕವನ್ನು ಉದ್ಘಾಟಿಸಿದರು. 1800 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮೂರೂ ಘಟಕಗಳು ಬಾಹ್ಯಾಕಾಶ ವಲಯ ಸಂಬಂಧ ಜಾಗತಿಕ ಗುಣಮಟ್ಟದ ತಾಂತ್ರಿಕತೆಯನ್ನು ಒದಗಿಸಲಿದೆ. ಇದೇ ವೇಳೆ ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಯ ಬೆಳವಣಿಗೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು.

ಗಗನಯಾನಿ ನಾಯ‌ರ್ ಮದುವೆ ಆಗಿದ್ದೇನೆ: ನಟಿ ಲೀನಾ

ತಿರುವನಂತಪುರ: ಮಲಯಾಳಂ ನಟಿ ಲೀನಾ ಅವರು ಗಗನಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್‌ ಅವರನ್ನು ವಿವಾಹವಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ. ಮದುವೆ ವಿಷಯವನ್ನು ಅವರು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ. ನಾವು ಜನವರಿ 17, 2024ರಂದು ವಿವಾಹವಾಗಿದ್ದೆವು. ಆದರೆ ಇದರ ಘೋಷಣೆಗೆ ಉತ್ತಮ ದಿನಕ್ಕೆ ಕಾಯುತ್ತಿದ್ದೆವು. ಈಗ ಆ ದಿನ ಒದಗಿ ಬಂದಿದೆ ಎಂದು ಅವರು ಹೇಳಿದ್ದಾರೆ. ನಾಯರ್ ವಾಯುಪಡೆಯಲ್ಲಿ ಟೆಸ್ಟ್ ಪೈಲಟ್ ಆಗಿದ್ದಾರೆ.

ಭಾರತದ ಮಾನವಸಹಿತ ಗಗನಯಾತ್ರೆಗೆ ನಾಲ್ವರ ಆಯ್ಕೆ ಆಗಿದ್ದು ಹೇಗೆ? ತರಬೇತಿ ಎಲ್ಲಿ?

click me!