21ನೇ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆ| ಸೇನಾಪಡೆ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ!| ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ
ನವದೆಹಲಿ(ಜು.27): 21ನೇ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಸೇನಾಪಡೆಯ ಆಸ್ಪತ್ರೆಗೆ 20 ಲಕ್ಷ ರು. ದೇಣಿಗೆ ನೀಡುವ ಮೂಲಕ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.
ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರು ಮತ್ತು ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗಾಗಿ ಬಳಸಿಕೊಳ್ಳಲು ರಾಷ್ಟ್ರಪತಿಯವರು ದೇಣಿಗೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
'ಯುದ್ಧ ಎಂದೆಂದೂ ನಡೆಯದಿರಲಿ, ಸೈನಿಕರ ಮನೆಯಲ್ಲಿ ಸಾವಿನ ರೋದನ ಕೇಳದಿರಲಿ'
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿ, ಆನಂತರ ಆರ್ಮಿ ಆಸ್ಪತ್ರೆಗೆ 20 ಲಕ್ಷ ರು. ಚೆಕ್ ನೀಡಿದರು
ದೇಶದ ತಂಟೆಗೆ ಬಂದರೆ ಕಾರ್ಗಿಲ್ ರೀತಿ ತಿರುಗೇಟು
ಭಾರತದ ಮೇಲೆ ಯಾರೇ ಶತ್ರು ದಾಳಿ ಮಾಡಿದರೆ ಕಾರ್ಗಿಲ್ನಲ್ಲಿ ನೀಡಿದಂತಹ ತಿರುಗೇಟು ಕೊಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ, ರಾಷ್ಟ್ರೀಯ ಐಕ್ಯತೆ ಹಾಗೂ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ದೊಡ್ಡ ಹೆಜ್ಜೆ ಇಡಲೂ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತ- ಚೀನಾ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವಾಗಲೇ ರಕ್ಷಣಾ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಶಾಲಾ ದಿನದಲ್ಲೇ ಸೇನೆಗೆ ಸೇರಲು ಉತ್ಸುಕನಾಗಿದ್ದ; ಕಾರ್ಗಿಲ್ ಹುತಾತ್ಮ ಯೋಧನ ಕುರಿತು ತಂದೆಯ ಮಾತು!
ಈ ನಡುವೆ, ಪಾಕಿಸ್ತಾನದ ವಿರುದ್ಧ 1999ರ ಜು.26ರಂದು ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಗೆಲುವು ಸಾಧಿಸಿದ 21ನೇ ವರ್ಷಾಚರಣೆಯನ್ನು ಭಾನುವಾರ ದೇಶದೆಲ್ಲೆಡೆ ಮಾಡಲಾಯಿತು. ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮಿಸುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮ ಯೋಧರನ್ನು ಸ್ಮರಿಸಿದರು. ಈ ವೇಳೆ ಸಶಸ್ತ್ರಪಡೆಗಳ ಮುಖಸ್ಥ ಬಿಪಿನ್ ರಾವತ್ ಹಾಗೂ ಮೂರೂ ಪಡೆಗಳ ಮುಖಸ್ಥರು ಹಾಜರಿದ್ದರು. ಇದೇ ವೇಳೆ ಶ್ರೀನಗರದ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸೇನಾ ಪಡೆಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು. ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಯೋಧರಿಗೆ ನಮನ ಸಲ್ಲಿಸಿದರು.