
ನವದೆಹಲಿ (ಡಿ.28): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರ ಶನಿವಾರ ಅಯೋಧ್ಯೆಯಲ್ಲಿ 11,100 ಕೋಟಿ ರೂಪಾಯಿಗೂ ಹೆಚ್ಚು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಸಮಯದಲ್ಲಿ, ಪ್ರಧಾನಿ ಮೋದಿ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೇ 2 ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು 6 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ಶ್ರೀರಾಮ ಮಂದಿರಕ್ಕೆ ಜನರ ಪ್ರವೇಶವನ್ನು ಹೆಚ್ಚಿಸಲು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ವಿಶಾಲ ಮತ್ತು ಸುಂದರವಾದ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೇ ಅಯೋಧ್ಯೆಯಲ್ಲಿ 2180 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಗ್ರೀನ್ಫೀಲ್ಡ್ ಟೌನ್ಶಿಪ್ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೇ ಉತ್ತರ ಪ್ರದೇಶದಲ್ಲಿ 4600 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಮಹತ್ವದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಪ್ರಧಾನಿ ಮೋದಿ ಡಿಸೆಂಬರ್ 30ರ ಬೆಳಿಗ್ಗೆ 11:15 ರ ಸುಮಾರಿಗೆ ಅಯೋಧ್ಯಾ ಧಾಮ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ 2 ಹೊಸ ಅಮೃತ್ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದರೆ. ಇದರೊಂದಿಗೆ ಇನ್ನೂ ಹಲವು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಮಧ್ಯಾಹ್ನ 12:15ರ ಸುಮಾರಿಗೆ ನೂತನವಾಗಿ ನಿರ್ಮಿಸಲಾಗಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಉತ್ತರ ಪ್ರದೇಶದಲ್ಲಿ 15,700 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗಾಗಿ ಸುಮಾರು 11,100 ಕೋಟಿ ರೂಪಾಯಿಗಳ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4,600 ಕೋಟಿ ರೂಪಾಯಿಗಳ ಯೋಜನೆಗಳು ಸೇರಿವೆ.
1450 ಕೋಟಿ ವೆಚ್ಚದಲ್ಲಿ ಅಯೋಧ್ಯೆ ವಿಮಾನ ನಿಲ್ದಾಣದ ಹಂತ-1 ಪೂರ್ಣ: ಅಯೋಧ್ಯೆಯ ಆಧುನಿಕ ವಿಮಾನ ನಿಲ್ದಾಣದ ಹಂತ-1 ಅನ್ನು 1450 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿಸ್ತೀರ್ಣ 6500 ಚದರ ಮೀಟರ್, ಇದು ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಕಾಗುತ್ತದೆ. ಟರ್ಮಿನಲ್ ಕಟ್ಟಡದ ಮುಂಭಾಗವು ಅಯೋಧ್ಯೆಯ ಶ್ರೀರಾಮ ದೇವಾಲಯದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಟರ್ಮಿನಲ್ ಕಟ್ಟಡದ ಒಳಭಾಗವನ್ನು ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಗವಾನ್ ಶ್ರೀರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.
240 ಕೋಟಿ ವೆಚ್ಚದಲ್ಲಿ ಅಯೋಧ್ಯಾಧಾಮ ರೈಲು ನಿಲ್ದಾಣದ ಮೊದಲ ಹಂತ: ಅಯೋಧ್ಯಾಧಾಮ ರೈಲು ನಿಲ್ದಾಣದ ಮೊದಲ ಹಂತವನ್ನು 240 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ 3 ಅಂತಸ್ತಿನ ಆಧುನಿಕ ರೈಲು ನಿಲ್ದಾಣ ಕಟ್ಟಡವು ಲಿಫ್ಟ್, ಎಸ್ಕಲೇಟರ್, ಫುಡ್ ಪ್ಲಾಜಾ, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲೋಕ್ ರೂಮ್, ಮಕ್ಕಳ ಆರೈಕೆ ಕೊಠಡಿ, ವೇಟಿಂಗ್ ಹಾಲ್ನಂತಹ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ಐಜಿಬಿಸಿ ಪ್ರಮಾಣೀಕೃತ ಹಸಿರು ನಿಲ್ದಾಣವಾಗಿದೆ.
ಅಯೋಧ್ಯಾ ಧಾಮ್ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅಮೃತ್ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ. ಈ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ನಡುವೆ ಚಲಿಸುತ್ತವೆ. ಅಮೃತ್ ಭಾರತ್ ರೈಲು ಎಸಿ ಅಲ್ಲದ ಕೋಚ್ಗಳನ್ನು ಹೊಂದಿರುವ ಎಲ್ಹೆಚ್ಬಿ ಪುಶ್ ಪುಲ್ ರೈಲು. ಈ ರೈಲಿಗೆ ಎರಡೂ ಬದಿಗಳಲ್ಲಿ ಇಂಜಿನ್ಗಳನ್ನು ಜೋಡಿಸಲಾಗಿರುತ್ತದೆ. ಈ ರೈಲಿನಲ್ಲಿ ಆಕರ್ಷಕ ವಿನ್ಯಾಸದ ಆಸನಗಳು, ಉತ್ತಮ ಲಗೇಜ್ ರ್ಯಾಕ್, ಮೊಬೈಲ್ ಹೋಲ್ಡರ್ನೊಂದಿಗೆ ಚಾರ್ಜಿಂಗ್ ಪಾಯಿಂಟ್, ಎಲ್ಇಡಿ ಲೈಟ್, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಉತ್ತಮ ಸೌಲಭ್ಯಗಳಿವೆ.
6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ: ಇದಲ್ಲದೇ ಪ್ರಧಾನಿ 6 ಹೊಸ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಲಿದ್ದಾರೆ. ಅವುಗಳೆಂದರೆ ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್, ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್, ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ವಂದೇ ಭಾರತ್ ಎಕ್ಸ್ಪ್ರೆಸ್, ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್, ಜಲ್ನಾ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್ ಡಿ.30ರಿಂದ ಕಾರ್ಯಾರಂಭ ಮಾಡಲಿದೆ.
Video: ಅಯೋಧ್ಯೆ ರಾಮಮಂದಿರದಲ್ಲಿ ಸ್ಥಾಪಿತವಾಗಲಿದೆ 620 ಕೆಜಿ ತೂಕದ ಗಂಟೆ!
ಅಯೋಧ್ಯೆಗೆ 4 ಹೊಸ ಮಾರ್ಗ: ಶ್ರೀರಾಮ ಮಂದಿರಕ್ಕೆ ಪ್ರವೇಶವನ್ನು ಹೆಚ್ಚಿಸಲು ಅಯೋಧ್ಯೆಯಲ್ಲಿ ಹೊಸದಾಗಿ ಮರುಅಭಿವೃದ್ಧಿಪಡಿಸಿದ ನಾಲ್ಕು ಅಗಲವಾದ ರಸ್ತೆಗಳು - ರಾಮಪಥ್, ಭಕ್ತಿಪಥ್, ಧರ್ಮಪಥ್ ಮತ್ತು ಶ್ರೀ ರಾಮ ಜನ್ಮಭೂಮಿ ಪಥವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅಯೋಧ್ಯೆ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸುವ ಅನೇಕ ಯೋಜನೆಗಳು ಸಹ ಸೇರಿವೆ. ಇವುಗಳಲ್ಲಿ ರಾಜರ್ಷಿ ದಶರಥ್ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜು, ಅಯೋಧ್ಯೆ-ಸುಲ್ತಾನ್ಪುರ ರಸ್ತೆ-ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಚತುಷ್ಪಥ ರಸ್ತೆ, NH-27 ಬೈಪಾಸ್, ಮಹೋಬ್ರಾ ಬಜಾರ್ ಮೂಲಕ ತೇಧಿ ಬಜಾರ್ ಶ್ರೀರಾಮ ಜನ್ಮಭೂಮಿಯವರೆಗೆ ನಾಲ್ಕು ಪಥದ ರಸ್ತೆ, ನಗರದಾದ್ಯಂತ ಅನೇಕ ಸುಂದರ ರಸ್ತೆಗಳು ಮತ್ತು ಅಯೋಧ್ಯೆ ಬೈಪಾಸ್, ಅವರು NH-330A, ಮಹೋಲಿ-ಬರಗಾಂವ್-ದಿಯೋರ್ಹಿ ಮಾರ್ಗದ ಜಗದೀಶ್ಪುರ-ಫೈಜಾಬಾದ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ.
ಶಿಲ್ಪಕಲೆಗಳ ವೈಭವ, ಪುರಾಣಗಳ ಚಿತ್ರಕಾವ್ಯ... ರಾಮಮಂದಿರ ಒಳಾಂಗಣದ First look!
2300 ಕೋಟಿ ಮೌಲ್ಯದ 3 ರೈಲ್ವೆ ಯೋಜನೆಗಳ ಶಂಕುಸ್ಥಾಪನೆ: ರೈಲು ಮೂಲಸೌಕರ್ಯವನ್ನು ಬಲಪಡಿಸಲು 2300 ಕೋಟಿ ರೂಪಾಯಿ ಮೌಲ್ಯದ ಮೂರು ರೈಲ್ವೆ ಯೋಜನೆಗಳನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳಲ್ಲಿ ರುಮಾ ಚಾಕೇರಿ-ಚಾಂದೇರಿ ಮೂರನೇ ಸಾಲಿನ ಯೋಜನೆ, ಜೌನ್ಪುರ್-ಅಯೋಧ್ಯೆ-ಬಾರಾಬಂಕಿ ಡಬ್ಲಿಂಗ್ ಯೋಜನೆ, ಜೌನ್ಪುರ್-ತುಳಸಿ ನಗರ, ಅಕ್ಬರ್ಪುರ್-ಅಯೋಧ್ಯೆ, ಸೊಹಾವಾಲ್-ಪತ್ರಂಗಾ ಮತ್ತು ಸಫ್ದರ್ಗಂಜ್-ರಸೌಲಿ ವಿಭಾಗಗಳು, ಮಲ್ಹೌರ್-ದಲಿಗಂಜ್ ರೈಲ್ವೆ ವಿಭಾಗಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ