ಜನ ಸತ್ವ ಬಯಸುತ್ತಾರೆ, ಗಲಾಟೆ ಅಲ್ಲ: ವಿಪಕ್ಷಕ್ಕೆ ಮೋದಿ ಪ್ರಹಾರ

By Kannadaprabha NewsFirst Published Jun 25, 2024, 9:33 AM IST
Highlights

ಇದುವರೆಗೆ ಪ್ರತಿಪಕ್ಷಗಳ ಸಾಧನೆ ನಿರಾಶಾದಾಯಕವಾಗಿದೆ. ಭಾರತಕ್ಕೆ ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ. ಜನರು ಸತ್ವ (ಚರ್ಚೆ) ಬಯಸುತ್ತಾರೆಯೇ ವಿನಾ ಗಲಾಟೆಯಲ್ಲ’ ಎಂದು ಮಾತಿನೇಟು ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಜೂ.25):  18ನೇ ಲೋಕಸಭೆಯ ಮೊದಲ ಅಧಿವೇಶನದ ಆರಂಭದಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪ್ರಹಾರ ನಡೆಸಿದ್ದಾರೆ. ‘ಇದುವರೆಗೆ ಪ್ರತಿಪಕ್ಷಗಳ ಸಾಧನೆ ನಿರಾಶಾದಾಯಕವಾಗಿದೆ. ಭಾರತಕ್ಕೆ ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ. ಜನರು ಸತ್ವ (ಚರ್ಚೆ) ಬಯಸುತ್ತಾರೆಯೇ ವಿನಾ ಗಲಾಟೆಯಲ್ಲ’ ಎಂದು ಮಾತಿನೇಟು ಕೊಟ್ಟಿದ್ದಾರೆ. ಅಲ್ಲದೆ, ತುರ್ತುಪರಿಸ್ಥಿತಿ ಹೇರಿ ಜೂ.25ಕ್ಕೆ 50 ವರ್ಷ ಸಂದಲಿದ್ದು, ಅದನ್ನು ‘ಪ್ರಜಾಪ್ರಭುತ್ವವನ್ನು ತಿರಸ್ಕರಿಸಿದ ಆ ನಡೆ ಭಾರತದ ಇತಿಹಾಸದ ಕಪ್ಪುಚುಕ್ಕೆ’ ಎಂದು ಬಣ್ಣಸಿ ಕಾಂಗ್ರೆಸ್‌ಗೆ ತಿವಿದಿದ್ದಾರೆ.

ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನ ಸೋಮವಾರ ಸಂಸತ್ತಿನ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಜನರು ಪ್ರತಿಪಕ್ಷಗಳಿಂದ ಒಳ್ಳೆಯ ಹೆಜ್ಜೆಗಳನ್ನು ನಿರೀಕ್ಷಿಸುತ್ತಾರೆ. ಆದರೆ ಇದುವರೆಗೆ ಅವುಗಳ ನಡೆ ನಿರಾಶಾದಾಯಕವಾಗಿದೆ, ಆದರೆ ವಿಪಕ್ಷಗಳು ತಮ್ಮ ಹೊಣೆಗಾರಿಕೆ ನಿರ್ವಹಿಸುತ್ತವೆ ಎಂಬ ಭರವಸೆ ನನಗಿದೆ’ ಎಂದರು.

Latest Videos

ರೈತರಿಗೆ ಬೆಂಬಲ ಬೆಲೆ ಬಂಪರ್; ಎಂಎಸ್‌ಪಿ ದರ ಏರಿಕೆಗೆ ಮೋದಿ ಸರ್ಕಾರ ನಿರ್ಧಾರ

‘ಇಂದು ಭಾರತಕ್ಕೆ ಜವಾಬ್ದಾರಿಯುತ ವಿರೋಧ ಪಕ್ಷದ ಅಗತ್ಯವಿದೆ ಮತ್ತು ಜನರು ಸತ್ವವನ್ನು ಬಯಸುತ್ತಾರೆಯೇ ವಿನಾ ಘೋಷಣೆಗಳಲ್ಲ. ಜನತೆಗೆ ಚರ್ಚೆ ಬೇಕು, ಶ್ರದ್ಧೆ ಬೇಕು. ಸಂಸತ್ತಿನಲ್ಲಿ ಗದ್ದಲವಲ್ಲ’ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ನಾನು ಗಂಗಾಮಾತೆಯ ದತ್ತುಪುತ್ರ: ಗಂಗೆ, ವಿಶ್ವನಾಥರೇ ನನ್ನನ್ನು ಆಶೀರ್ವದಿಸಿದ್ದಾರೆ: ಪ್ರಧಾನಿ ಮೋದಿ

ಇದೇ ವೇಳೆ. ‘ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಜೂ.25ಕ್ಕೆ 50 ವರ್ಷ ಆಗಲಿದೆ. ಪ್ರಜಾಪ್ರಭುತ್ವವನ್ನು ತಿರಸ್ಕರಿಸಿದ ಆ ನಡೆ ದೇಶಕ್ಕೆ ಒಂದು ಕಪ್ಪು ಚುಕ್ಕೆ’ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಇನ್ನು ತಮ್ಮ ಜಯದ ಬಗ್ಗೆ ಮಾತನಾಡಿದ ಮೋದಿ, ‘ಸತತ 3ನೇ ಅವಧಿಗೆ ಜನರು ನಮ್ಮ ಸರ್ಕಾರದ ಆದೇಶವನ್ನು ನೀಡಿದ್ದಾರೆ ಮತ್ತು ಅದರ ನೀತಿಗಳು ಮತ್ತು ಉದ್ದೇಶಗಳಿಗೆ ಅನುಮೋದನೆಯ ಮುದ್ರೆ ಹಾಕಿದ್ದಾರೆ. ‘ಶ್ರೇಷ್ಠ ಭಾರತ’ ಮತ್ತು ‘ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ 18ನೇ ಲೋಕಸಭೆ ಆರಂಭವಾಗುತ್ತಿದೆ’ ಎಂದರು.

‘ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಮ್ಮ ಸರ್ಕಾರ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುತ್ತದೆ ಎಂದು ಪ್ರತಿಪಾದಿಸಿದರು.‘ಇತ್ತೀಚೆಗೆ ನಡೆದ ಸಂಸತ್ತಿನ ಚುನಾವಣೆಯಲ್ಲಿ 65 ಕೋಟಿ ಮತದಾರರು ಭಾಗವಹಿಸಿದ್ದರು ಮತ್ತು ಸ್ವಾತಂತ್ರ್ಯದ ನಂತರ ಸತತ ಮೂರನೇ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡಿರುವುದು ಇದು 2ನೇ ಬಾರಿ. 60 ವರ್ಷಗಳ ನಂತರ ಈ ಸಂದರ್ಭ ಬಂದಿದೆ’ ಎಂದು ಪ್ರಧಾನಿ ಹರ್ಷಿಸಿದರು.

click me!