ಟೀಮ್‌ ವರ್ಕ್‌ನ ಶ್ರೇಷ್ಠ ಉದಾಹರಣೆ, ಸಿಲ್‌ಕ್ಯಾರಾ ಸುರಂಗ ಯಶಸ್ವಿ ಕಾರ್ಯಾಚರಣೆಗೆ ಮೋದಿ ಸಂತಸ!

By Santosh NaikFirst Published Nov 28, 2023, 10:06 PM IST
Highlights

ಉತ್ತರಾಖಂಡ ರಾಜ್ಯದ ಉತ್ತರಕಾಶಿ ಬಳಿಯ ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಣಾ ತಂಡಗಳು ಒಟ್ಟು 41 ಕಾರ್ಮಿಕರನ್ನು ರಕ್ಷಿಸಿವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
 

ನವದೆಹಲಿ (ನ.28): ಸತತ 17 ದಿನಗಳ ಕಾಲ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಬಳಿಯ ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮಂಗಳವಾರ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ರಕ್ಷಣಾ ತಂಡಗಳು ಒಟ್ಟು 41 ಕಾರ್ಮಿಕರನ್ನು ಹೊರತೆಗೆಯಲು ಯಶಸ್ವಿಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.  ಉತ್ತರಕಾಶಿಯಲ್ಲಿ ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ಸುದೀರ್ಘ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಪ್ರಶಂಷೆ ಮಾಡಲೇಬೇಕಿದೆ. ಈ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಜನರಿಗೆ ನಾನು ನಮಸ್ಕರಿಸುತ್ತೇನೆ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಟೀಮ್‌ ವರ್ಕ್‌ಗೆ ಇದು ಅದ್ಭುತ ಉದಾಹಣೆಯಾಗಿದೆ ಎಂದು ಮೋದಿ ಬರೆದಿದ್ದಾರೆ.

उत्तरकाशी में हमारे श्रमिक भाइयों के रेस्क्यू ऑपरेशन की सफलता हर किसी को भावुक कर देने वाली है।

टनल में जो साथी फंसे हुए थे, उनसे मैं कहना चाहता हूं कि आपका साहस और धैर्य हर किसी को प्रेरित कर रहा है। मैं आप सभी की कुशलता और उत्तम स्वास्थ्य की कामना करता हूं।

यह अत्यंत…

— Narendra Modi (@narendramodi)


ಸಿಲ್‌ಕ್ಯಾರಾ  ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. 12 ರಾಟ್‌ ಹೋಲ್ ಗಣಿಗಾರರು ನೆಲಕ್ಕೆ ಸಮಾನಾಂತರವಾಗಿ ಕೆಲಸ ನಿಲ್ಲಿಸಿದ ಸ್ಥಳದಿಂದ ಕೊರೆಯಲು ಪ್ರಾರಂಭಿಸಿದರು ಮತ್ತು ಉಳಿದ ದೂರವನ್ನು ಪೂರ್ಣಗೊಳಿಸಿದರು. ಇದರಿಂದಾಗಿ ಕಾರ್ಮಿಕರು ಸಿಕ್ಕಿಬಿದ್ದ ಪ್ರದೇಶಕ್ಕೆ ಪೈಪ್ ಕಳುಹಿಸಲು ಸಾಧ್ಯವಾಗಿತ್ತು. ಒಟ್ಟು 41 ಜನರನ್ನು ಪ್ರತ್ಯೇಕವಾಗಿ ಕರೆತರಲಾಯಿತು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಾರ್ಮಿಕರ ಕುಟುಂಬ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಪ್ರದೇಶವನ್ನು ತಲುಪಿದರು.

ಹೊರ ಬಂದ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗಳಿಗೆ ಸಾಗಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಲ್ಲದೆ, ತುರ್ತು ಚಿಕಿತ್ಸೆ ನೀಡಲು ತಜ್ಞ ವೈದ್ಯರು ಕೂಡ ಸುರಂಗದ ಬಳಿ ಇದ್ದರು. ಅಗತ್ಯ ಆಂಬ್ಯುಲೆನ್ಸ್ ಮತ್ತು ಔಷಧಗಳನ್ನು ಸಿದ್ಧಪಡಿಸಲಾಗಿತ್ತು. ಸುರಂಗದಿಂದ 30 ಕಿ.ಮೀ ದೂರದಲ್ಲಿರುವ ಚಿನ್ಯಾಲಿಸೌರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾರ್ಮಿಕರನ್ನು ಸ್ಥಳಾಂತರಿಸಲು ಪೊಲೀಸರು ಗ್ರೀನ್ ಚಾನೆಲ್ ಸ್ಥಾಪಿಸಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಪೈಪ್ ಮೂಲಕ ಪ್ರವೇಶಿಸಿ ಒಬ್ಬೊಬ್ಬರನ್ನು ಹೊರತಂದಿದ್ದಾರೆ. ತುರ್ತು ಪರಿಸ್ಥಿತಿಗಳಲ್ಲಿ ಜನರನ್ನು ಏರ್ಲಿಫ್ಟ್ ಮಾಡಲು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸಹ ಸರ್ಕಾರ ಸಿದ್ಧಮಾಡಿಟ್ಟಿತ್ತು.

Uttarkashi Tunnel Rescue: ಕಾರ್ಮಿಕರ ರಕ್ಷಣೆಗೆ ನೆರವಾಯ್ತು ನಿಷೇಧಿತ Rat Hole ಮೈನಿಂಗ್‌, ಇದಕ್ಕೆ ನಿಷೇಧ ಯಾಕೆ?

ನವೆಂಬರ್ 12 ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಸುರಂಗದಲ್ಲಿ ಕುಸಿದಿದ್ದರಿಂದ ಇವರು ಅಲ್ಲಿಯೇ ಸಿಲುಕಿಕೊಂಡಿದ್ದರು. ಇದರಿಂದ ಅವರ ರಕ್ಷಣೆಗೆ ಅಧಿಕಾರಿಗಳು ಮುಂದಾದರು. ಅವರಿಗೆ ಹೊರಗಿನಿಂದ ನೀರು, ಆಹಾರ, ಔಷಧ ಒದಗಿಸಲಾಗಿತ್ತು. ಆದರೆ ಪರಿಹಾರ ಕಾರ್ಯಾಚರಣೆಯಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಹವಾಮಾನ ವೈಪರೀತ್ಯ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳ ನಡುವೆಯೂ ಕಾರ್ಮಿಕರನ್ನು ಹೊರಗೆ ಕರೆತರಲಾಯಿತು. ಆಗರ್ ಯಂತ್ರವನ್ನು ತಂದಾಗ 47 ಮೀಟರ್ ಅಗೆದು ಒಳಗೆ ಹೋಗುವಾಗ ಅದರ ಬ್ಲೇಡ್‌ಗಳು ಮುರಿದು ಹೋಗಿದ್ದವು. ಆದರೂ ಎದೆಗುಂದದೆ ರಾಟ್‌ ಹೋಲ್‌ ಗಣಿಗಾರಿಕೆಯಲ್ಲಿ ನಿಪುಣರಾಗಿದ್ದ 12 ಮಂದಿಯನ್ನು ಸ್ಥಳಕ್ಕೆ ಕರೆತಂದು ಕಾರ್ಮಿಕರಿದ್ದ ಪ್ರದೇಶಕ್ಕೆ ರಂಧ್ರ ಕೊರೆಯುವಲ್ಲಿ ಯಶಸ್ವಿಯಾಗಿದ್ದರು.

ತಪ್ಪಿನಿಂದ ಪಾಠ ಕಲಿತ ಸರ್ಕಾರ, ಸಿಲ್‌ಕ್ಯಾರಾ ಬಳಿ ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ತೀರ್ಮಾನ!

click me!