
ನವದೆಹಲಿ(ಜೂ.27) 'ಪಿತ್ರಾರ್ಜಿತ ಆಸ್ತಿ ಮರುಹಂಚಿಕೆ, ದಕ್ಷಿಣ ಭಾರತೀಯರು ಆಫ್ರಿಕನ್ನರು' ಎಂದು ವಿವಾದಿತ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ಗೆ ಭಾರೀ ಮುಜುಗರ ಉಂಟು ಮಾಡಿದ್ದ ಸ್ಯಾಮ್ ಪಿತ್ರೋಡಾಗೆ ಪಕ್ಷ ಮತ್ತೆ ಮಹತ್ವದ ಹುದ್ದೆ ನೀಡಿದೆ. ವಿವಾದಿತ ಹೇಳಿಕೆ ಬಳಿಕ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ಸ್ಯಾಂ ಪಿತ್ರೋಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಆದೇಶ ಹೊರಡಿಸಿದ್ದಾರೆ. ಸ್ಯಾಮ್ ಪಿತ್ರೋಡಾ, ರಾಹುಲ್ ಅತ್ಯಾಪ್ತರಾಗಿದ್ದಾರೆ. ಕಾಂಗ್ರೆಸ್ ಈ ನಡೆಯನ್ನು ಪ್ರಧಾನಿ ಮೋದಿ ಮೊದಲೇ ಭವಿಷ್ಯ ನುಡಿದಿದ್ದರು.
ಲೋಕಸಭಾ ಚುನಾವಣೆ ವೇಳೆ ಎನ್ಡಿಟಿವಿ ಮಾಧ್ಯಮಕ್ಕೆ ಈ ಕುರಿತು ಉತ್ತರಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಸ್ಯಾಮ್ ಪಿತ್ರೋಡ ವಿಚಾರವನ್ನು ವ್ಯವಸ್ಥಿತವಾಗಿ ಮಾಡಿದೆ. ಉತ್ತರ ಭಾರತ, ದಕ್ಷಿಣ ಭಾರತ ಎಂದು ಒಡೆಯಲು ಕಾಂಗ್ರೆಸ್ ಉರುಳಿಸಿದ ದಾಳ ಸ್ಯಾಮ್ ಪಿತ್ರೋಡ. ಆದರೆ ತಿರುಗುಬಾಣವಾದಾಗ ತಕ್ಷಣವೇ ರಾಜೀನಾಮೆಯ ಪ್ರಹಸನ ಆಡಿದೆ. ಆದರೆ ಇದು ರಾಜೀನಾಮೆ ಇಲ್ಲ. ಪಕ್ಷದಿಂದ ಕೆಲ ದಿನಗಳ ಕಾಲ ಹೊರಗಿಡಲಾಗಿದೆ. ಅಷ್ಟೇ ವೇಗದಲ್ಲಿ ಸ್ಯಾಮ್ ಪಿತ್ರೋಡ ಮತ್ತೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದ್ದರು. ಇದೀಗ ಇದೇ ರೀತಿ, ಕಾಂಗ್ರೆಸ್ ಸ್ಯಾಮ್ ಪಿತ್ರೋಡಾರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದೆ.
ಒಂದೇ ತಿಂಗಳ ಗ್ಯಾಪಲ್ಲಿ ಅದೆಷ್ಟು ವಿವಾದಗಳು!? ಅಂದು ಸಾರಿ ಕೇಳಿದ್ರು.. ಈಗ ರಾಜೀನಾಮೆ.. ನಾಳೆ?
ಸ್ಯಾಂ ಪಿತ್ರೋಡಾ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ಮರು ಹಂಚಿಕೆ ಮಾಡಬೇಕು, ರಾಮ ಮಂದಿರ ನಿರ್ಮಾಣ ನಿರುಪಯುಕ್ತ ಎಂಬೆಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರೊಂದಿಗೆ 'ಪೂರ್ವ ಭಾರತೀಯರು ಚೀನಿಯರ ರೀತಿ, ದಕ್ಷಿಣ ಭಾರತೀಯರು ಆಫ್ರಿಕನ್ನರ ರೀತಿ. ಪಶ್ಚಿಮ ಭಾರತೀಯರು ಅರಬ್ಬರು ಹಾಗೂ ಉತ್ತರ ಭಾರತೀಯರು ಬಿಳಿಯರ ರೀತಿ ಕಾಣಿಸುತ್ತಾರೆ' ಎಂದು ಹೇಳಿ ವಿವಾದದ ಕಡಲನ್ನು ಸೃಷ್ಟಿಸಿದ್ದರು. ಇದರ ಪರಿಣಾಮ ಕಾಂಗ್ರೆಸ್ ಸಹ ಈ ಹೇಳಿಕೆಗಳಿಂದ ದೂರ ಉಳಿದಿತ್ತು. ಇದಾದ ಬಳಿಕ ಮೇ 8ರಂದು ಸ್ಯಾಂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ್ದರು.
ತಂದೆ ಮೃತನಾದ ಬಳಿಕ ಆತನ ಶೇ.55ರಷ್ಟು ಆಸ್ತಿಯನ್ನು ಸರ್ಕಾರಕ್ಕೆ ನೀಡುವ ಕಾಯ್ದೆ ಅಮೆರಿಕದಲ್ಲಿದೆ. ಅದೇ ಮಾದರಿಯಲ್ಲಿ ಭಾರತದಲ್ಲೂ ಪಿತ್ರಾರ್ಜಿತ ಆಸ್ತಿ ತೆರಿಗೆ ಕಾಯ್ದೆಯನ್ನು ಭಾರತದಲ್ಲಿ ಜಾರಿ ಮಾಡಲು ಚಿಂತನೆ ನಡೆಸಬೇಕು ಎಂದು ಇತ್ತೀಚಗೆ ಪಿತ್ರೋಡಾ ಹೇಳಿದ್ದರು. ಅದು ರಾಜಕೀಯ ಬಿರುಗಾಳಿ ಎಬ್ಬಿಸಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು.
ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಮತ್ತು ದಕ್ಷಿಣ ಭಾರತೀಯರನ್ನು ಕಪ್ಪುವರ್ಣೀಯರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆ ವಿರುದ್ಧ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವರ್ಣದ್ವೇಷವನ್ನು ಎಂದಿಗೂ ಒಪ್ಪಲಾಗದು ಎಂದು ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿ ನಾಯಕರು ಕಿಡಿಕಾರಿದ್ದರು.
ಬಕ್ವಾಸ್ ಮಾತಾಡ್ತಾನೆ, ಸ್ಯಾಮ್ ಪಿತ್ರೋಡಾ ರಾಜೀನಾಮೆ ಕೊಟ್ಟಿದ್ದು ಖುಷಿಯಾಯ್ತು ಎಂದ ರಾಬರ್ಟ್ ವಾದ್ರಾ!
‘ನನ್ನ ದೇಶದ ಜನರ ಸಾಮರ್ಥ್ಯವನ್ನು ಅವರ ಚರ್ಮದ ಬಣ್ಣದ ಮೇಲೆ ನಿರ್ಧರಿಸಲಾಗುವುದೇ? ಈ ಚರ್ಮದ ಬಣ್ಣದ ಆಟ ಆಡಲು ಶೆಹಜಾದಾಗೆ (ರಾಹುಲ್ ಗಾಂಧಿ) ಅನುಮತಿ ಕೊಟ್ಟಿದ್ದು ಯಾರು? ಇದಕ್ಕೆ ಶೆಹಜಾದಾ ಉತ್ತರಿಸಲೇಬೇಕು ಎಂದು ಮೋದಿ ಆಗ್ರಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ