
ಅಥೆನ್ಸ್ (ಆಗಸ್ಟ್ 25, 2023): ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ 15ನೇ ಬ್ರಿಕ್ಸ್ ಶೃಂಗಸಭೆಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗ್ರೀಸ್ಗೆ ಭೇಟಿ ನೀಡಿದ್ದಾರೆ. ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿನ ರಾಜಧಾನಿ ಅಥೆನ್ಸ್ಗೆ ಒಂದು ದಿನದ ಭೇಟಿಗೆ ತೆರಳಿದ್ದಾರೆ.
ಇನ್ನು, ಪ್ರಧಾನಿ ಮೋದಿ ಗ್ರೀಸ್ ರಾಜಧಾನಿಗೆ ಬಂದಿಳಿಯುತ್ತಿದ್ದಂತೆ ಪೋಸ್ಟರ್ಗಳು ಮತ್ತು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಪ್ರಧಾನ ಮಂತ್ರಿಯನ್ನು ಸ್ವಾಗತಿಸಲು ಭಾರತೀಯ ಮೂಲದವರು ಕಾಯುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿದವು. ಇನ್ನು, ಗ್ರೀಸ್ ಭೇಟಿಗೂ ಮುನ್ನ ಹೇಳಿಕೆ ನೀಡಿದ್ದ ಪ್ರಧಾನಿ, 40 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಗ್ರೀಸ್ಗೆ ಭೇಟಿ ನೀಡಲಿದ್ದಾರೆ. ನಮ್ಮ ಬಹುಮುಖಿ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ತೆರೆಯಲು ಸಿದ್ಧವಾಗಿದೆ ಎಂದಿದ್ದರು.
ಇದನ್ನು ಓದಿ: ಬಿಜೆಪಿ ಅಶ್ವಮೇಧ ಯಾಗ ಕಟ್ಟಿಹಾಕುತ್ತಾ ‘INDIA’? ಈಗ ಲೋಕಸಭೆ ಚುನಾವಣೆ ನಡೆದ್ರೆ ಗೆಲ್ಲೋದು ಇವರೇ..!
ಭಾರತೀಯ ಮತ್ತು ಗ್ರೀಕ್ ನಾಗರಿಕತೆಗಳ ನಡುವಿನ ಸಂಪರ್ಕವು ಎರಡು ಸಹಸ್ರಮಾನಗಳ ಹಿಂದಿನನದಾಗಿದ್ದು, ಆಧುನಿಕ ಕಾಲದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು "ಪ್ರಜಾಪ್ರಭುತ್ವ, ಕಾನೂನು ಮತ್ತು ಬಹುತ್ವದ ಹಂಚಿಕೆಯ ಮೌಲ್ಯಗಳಿಂದ ಬಲಗೊಂಡಿವೆ" ಎಂದೂ ಅವರು ಹೇಳಿದರು. ಇನ್ನು, ವಿವಿಧ ವಲಯಗಳಲ್ಲಿನ ಪಾಲುದಾರಿಕೆಯ ಕುರಿತು, "ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಮತ್ತು ಸಾಂಸ್ಕೃತಿಕ ಹಾಗೂ ಜನರ ಸಂಪರ್ಕಗಳಂತಹ ವೈವಿಧ್ಯಮಯ ವಲಯಗಳಲ್ಲಿನ ಸಹಕಾರವು ಎರಡು ದೇಶಗಳನ್ನು ಹತ್ತಿರಕ್ಕೆ ತಂದಿದೆ" ಎಂದೂ ಅವರು ಗಮನಿಸಿದರು.
ಅಥೆನ್ಸ್ನಲ್ಲಿ ಔಪಚಾರಿಕ ಸ್ವಾಗತದ ನಂತರ, ಮೋದಿ ಅವರು ಹುತಾತ್ಮ ಸೈನಿಕರೊಬ್ಬರ ಸಮಾಧಿಗೆ ಭೇಟಿ ನೀಡಲಿದ್ದಾರೆ ಮತ್ತು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರೊಂದಿಗೆ ನಿರ್ಬಂಧಿತ ಮತ್ತು ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರು ವ್ಯಾಪಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಮೋದಿ ಅವರು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Chandrayaan - 3: 'ಶಶಿ' ಸ್ಪರ್ಶಿಸಿದ ಇಸ್ರೋ: ವಿಜ್ಞಾನಿಗಳಿಗೆ ಅಭಿನಂದಿಸಲು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ
ಬ್ರಿಕ್ಸ್ ಶೃಂಗಸಭೆ ಅಂತ್ಯ
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳ ನಂತರ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ವರ್ಚುಯಲ್ ಅಲ್ಲದ ರೀತಿಯಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯನ್ನು ಪ್ರಧಾನಿ ಮೋದಿ ಗುರುವಾರ ಅಂತ್ಯಗೊಳಿಸಿದರು. ನಂತರ, ಈ ಬಗ್ಗೆ .ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡ ಪ್ರಧಾನಿ ಮೋದಿ, "ದಕ್ಷಿಣ ಆಫ್ರಿಕಾಕ್ಕೆ ನನ್ನ ಭೇಟಿಯು ಅತ್ಯಂತ ಫಲಪ್ರದವಾಗಿತ್ತು. ಬ್ರಿಕ್ಸ್ ಶೃಂಗಸಭೆಯು ಫಲಪ್ರದವಾಗಿದೆ ಮತ್ತು ಐತಿಹಾಸಿಕವಾಗಿದೆ. ಏಕೆಂದರೆ ನಾವು ಈ ವೇದಿಕೆಗೆ ಹೊಸ ದೇಶಗಳನ್ನು ಸ್ವಾಗತಿಸುತ್ತೇವೆ. ನಾವು ಜಾಗತಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಅಧ್ಯಕ್ಷ @CyrilRamaphosa, ದಕ್ಷಿಣ ಆಫ್ರಿಕಾದ ಜನರು ಮತ್ತು ಸರ್ಕಾರಕ್ಕೆ ಅವರ ಆತಿಥ್ಯಕ್ಕಾಗಿ ನನ್ನ ಕೃತಜ್ಞತೆಗಳು’’ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೊಂದೆಡೆ, ನಾಳೆ ಗ್ರೀಸ್ನಿಂದ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಇಸ್ರೋ ಮುಖ್ಯ ಕೆಂದ್ರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ, ಅಲ್ಲಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್: ಶೀಘ್ರದಲ್ಲೇ ಎಲ್ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ