
ಬರ್ಲಿನ್(ಮೇ.03): ರಷ್ಯಾ ಉಕ್ರೇನ್ ಯುದ್ಧ ಕುರಿತು ಭಾರತದ ನಿಲುವಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಯೂರೋಪ್ ಪ್ರವಾಸದಲ್ಲಿ ಪುನರುಚ್ಚರಿಸಿದ್ದಾರೆ. ಯುದ್ಧದಲ್ಲಿ ಸಾವು ನೋವು ಖಚಿತ. ಮಾತುಕತೆ ಮೂಲಕ ಸಮಸ್ಸೆಯನ್ನು ಶಾಂತಿಯುತವಾಗಿ ಪರಿಹರಿಸಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಯೂರೋಪ್ ಪ್ರವಾಸದ ಮೊದಲ ದಿನ ಬರ್ಲಿನ್ನಲ್ಲಿ ಜರ್ಮನ್ ಚಾನ್ಸಲರ್ ಒಲಫ್ ಸ್ಕೋಲ್ಜ್ ಜೊತೆ ಮಹತ್ವದ ಚರ್ಚೆ ನಡೆಸಿದರು. ದ್ವಿಪಕ್ಷೀಯ ಸಹಕಾರ, ಒಪ್ಪಂದ ಹಾಗೂ ವ್ಯವಹಾರಗಳ ಕುರಿತು ಮಾತುಕತೆಯಲ್ಲಿ ಮೋದಿ, ಶಾಂತಿ ಪ್ರತಿಪಾದಿಸಿದ್ದಾರೆ.
ಮೋದಿ 3 ದಿನ ವಿದೇಶ ಪ್ರವಾಸ: ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್ಗೆ ಮೋದಿ ಭೇಟಿ!
ಉಕ್ರೇನ್ ಹಾಗೂ ರಷ್ಯಾ ದ್ವಿಪಕ್ಷೀಯ ಮಾತುಕತೆ ಮೂಲಕ ಯುದ್ಧಕ್ಕೆ ಅಂತ್ಯಕಾಣಬೇಕು. ಯುದ್ಧದಲ್ಲಿ ಯಾರು ವಿಜಯಶಾಲಿಗಳಾಗುವುದಿಲ್ಲ. ಗೆದ್ದವರಿಗೂ ಸೋತವರಿಗೂ ಸಾವು ನೋವುಗಳು ಇದ್ದೇ ಇದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದಿಂದ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಯುದ್ಧದ ಪರಿಣಾಮ ಬೀರುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಒಲಫ್ ಸ್ಕೂಲ್ಜ್ ವಿಶೇಷ ಮನವಿ ಮಾಡಿದ್ದಾರೆ. ತಕ್ಷಣವೇ ಯುದ್ಧ ನಿಲ್ಲಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಮನವಿ ಮಾಡಿದ್ದಾರೆ. ಭಾರತ ಹಾಗೂ ಜರ್ಮನಿ ಯುದ್ಧದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಉಭಯ ದೇಶಗಳು, ನಾಗರೀಕರ ಸಾವು ನೋವು ಸೇರಿದಂತೆ ಉಕ್ರೇನ್ ಹಾಗೂ ರಷ್ಯಾದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ಯುದ್ಧಕ್ಕೆ ಅಂತ್ಯ ಹಾಡಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಮನವಿ ಮಾಡಿದೆ.
ಮೋದಿ 3 ದಿನ ವಿದೇಶ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ಮೂರು ದಿನಗಳ ಕಾಲ 3 ವಿದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್್ಜ ಅವರ ಆಮಂತ್ರಣದ ಮೇರೆಗೆ ಮೋದಿ ಮೇ. 2 ರಂದು ಬರ್ಲಿನ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ 6 ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯಲ್ಲಿ ಮೋದಿ ಸಹ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಲ್ಲದೇ ವಾಣಿಜ್ಯ ದುಂಡುಮೇಜಿನ ಸಭೆಯಲ್ಲಿ ಕೈಗಾರಿಕಾ ಸಹಕಾರದ ಮೂಲಕ ಕೋವಿಡ್ ನಂತರದ ಸಮಯದಲ್ಲಿ ಉಭಯ ದೇಶಗಳ ಆರ್ಥಿಕತೆಯ ಪುನಶ್ಚೇತನದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
ಮೋದಿ ಬಿಡುವಿಲ್ಲದ ವಿದೇಶ ಪ್ರವಾಸ: 8 ವಿಶ್ವ ನಾಯಕರೊಂದಿಗೆ 25 ಮಹತ್ವದ ಮಾತುಕತೆ
ಸವಾಲಿನ ಸಮಯದಲ್ಲಿ ಪ್ರವಾಸ
ಪ್ರವಾಸ ಕೈಗೊಳ್ಳುವ ಮುನ್ನ ಮಾತನಾಡಿದ ಪ್ರಧಾನಿ, ‘ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಿದ್ದೇನೆ. ಶಾಂತಿ ಹಾಗೂ ಸಮೃದ್ಧಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಸಹಚಚರರಾಗಿರುವ ಯುರೋಪಿನ ನಾಯಕರೊಂದೊಗಿನ ಸಹಕಾರ ಸಂಬಂಧವನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆಸಲಿದ್ದೇನೆ’ ಎಂದಿದ್ದಾರೆ.
ಯುರೋಪಿಯನ್ ರಾಷ್ಟ್ರಗಳು ಮಿಲಿಯನ್ಗಟ್ಟಲೇ ಭಾರತೀಯರಿಗೆ ನೆಲೆ ನೀಡಿದೆ. ಇದು ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ಸಂಬಂಧವನ್ನು ಇನ್ನಷ್ಟುಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರವಾಸದ ವೇಳೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಸಹೋದರ ಸಹೋದರಿಯರೊಂದಿಗೂ ಮಾತುಕತೆ ನಡೆಸಲಿದ್ದೇನೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ