
ಭೋಪಾಲ್ (ಜೂನ್ 28, 2023): ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರ ಬಲವಾಗಿ ‘ಬ್ಯಾಟ್’ ಬೀಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಸಮಾನ ಹಕ್ಕು ನೀಡುವ ಉಲ್ಲೇಖ ಮಾಡಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ‘ಬಿಜೆಪಿ ಯಾವತ್ತೂ ಮತ ಬ್ಯಾಂಕ್ ರಾಜಕೀಯ ಹಾಗೂ ತುಷ್ಟೀಕರಣ ರಾಜಕೀಯ ಮಾಡಲ್ಲ. ನಿಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಬೇಕಾದರೆ ಬಿಜೆಪಿಗೆ ಮತ ಹಾಕಿ. ಯಾವುದೇ ಕುಟುಂಬ ಆಧರಿತ ಪಕ್ಷಗಳಿಗೆ ಮತ ಹಾಕಬೇಡಿ’ ಎಂದು ಕರೆ ನೀಡಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಪರ ಕಾನೂನು ಆಯೋಗವು ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿರುವ ಬೆನ್ನಲ್ಲೇ, ಆ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ವಿಚಾರವಾಗಿ ಇತ್ತೀಚಿನ ವರ್ಷಗಳಲ್ಲಿ ಮೋದಿ ಮಾತನಾಡಿದ್ದು ಇದೇ ಮೊದಲು ಎಂಬುದು ಗಮನಾರ್ಹ.
ಇದನ್ನು ಓದಿ: ಈಜಿಪ್ಟ್ ಅತ್ಯುನ್ನತ ರಾಜ್ಯ ಗೌರವ 'ಆರ್ಡರ್ ಆಫ್ ದಿ ನೈಲ್' ಸ್ವೀಕರಿಸಿದ ಮೋದಿ: ಐತಿಹಾಸಿಕ ಮಸೀದಿಗೆ ಭೇಟಿ
ಮಧ್ಯಪ್ರದೇಶ ರಾಜಧಾನಿಯಲ್ಲಿ ಮಂಗಳವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಕೋರ್ಟೇ ಒಲವು ತೋರಿದೆ. ಆದರೆ ಮತ ಬ್ಯಾಂಕ್ ರಾಜಕೀಯದ ಕಾರಣ ವಿಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸಿ ಪ್ರಚೋದಿಸುತ್ತಿವೆ.
ನೀವೇ ಹೇಳಿ. ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಮತ್ತೊಂದು ಕಾನೂನು ಇರಬೇಕೆ? ಹಾಗಿದ್ದಾಗ ಆ ಮನೆ ನಡೆಯಲು ಸಾಧ್ಯವಿದೆಯೆ? ಇಂಥ ಎರಡೆರಡು ವ್ಯವಸ್ಥೆಗಳ ಮೂಲಕ ದೇಶ ನಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು ಹಾಗೂ ‘ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.
ಇದನ್ನೂ ಓದಿ: ಇಂದು ಐತಿಹಾಸಿಕ ಮಸೀದಿಗೆ ಭೇಟಿ ನೀಡಲಿರುವ ನಮೋ: ಈಜಿಪ್ಟ್ನಲ್ಲೂ ಮೋದಿ.. ಮೋದಿ ಘೋಷಣೆ
‘ಈ ಜನರು (ವಿಪಕ್ಷಗಳು), ನಮ್ಮ ವಿರುದ್ಧ ಆರೋಪ ಮಾಡುತ್ತಾರೆ. ಮುಸಲ್ಮಾನ, ಮುಸಲ್ಮಾನ ಎಂದು ಪಠಣ ಮಾಡುತ್ತಾರೆ. ಆದರೆ ಇವರು ಮುಸ್ಲಿಮರ ಹಿತಾಸಕ್ತಿಗೆ ಅನುಗುಣವಾಗಿಯೇ ಕೆಲಸ ಮಾಡಿದ್ದರೆ, ಮುಸ್ಲಿಂ ಕುಟುಂಬಗಳು ಇಂದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹಿಂದೆ ಬೀಳುತ್ತಿರಲಿಲ್ಲ’ ಎಂದರು.
‘ಆದರೆ ಅದೇ ಪಸ್ಮಾಂದಾ ಮುಸ್ಲಿಮರ (ಮುಸ್ಲಿಮರಲ್ಲೇ ಹಿಂದುಳಿದ ವರ್ಗ) ಬಗ್ಗೆ ವಿಪಕ್ಷಗಳು ನಿರ್ಲಕ್ಷ್ಯ ತಾಳಿದವು. ಏಕೆಂದರೆ ಅವರ ಸಂಖ್ಯೆ ಕಡಿಮೆ. ಇದರ ಹಿಂದೆ ಮತ ಬ್ಯಾಂಕ್ ರಾಜಕೀಯವಿದೆ’ ಎಂದು ಆರೋಪಿಸಿದರು.
ಇದನ್ನೂ ಓದಿ: ಭಾರತದಲ್ಲಿ ಅಮೆರಿಕ ದಿಗ್ಗಜ ಕಂಪನಿಗಳಿಂದ ಬಂಪರ್ ಬಂಡವಾಳ: ಮೋದಿ ಭೇಟಿ ಬೆನ್ನಲ್ಲೇ ಅಮೆಜಾನ್, ಗೂಗಲ್, ಬೋಯಿಂಗ್ ಹೂಡಿಕೆ
‘ತುಷ್ಟೀಕರಣ ನೀತಿ ದೇಶಕ್ಕೆ ಅಪಾಯಕಾರಿ. ಇದೇ ನೀತಿಯಿಂದಾಗಿ ಇಂದು ಉತ್ತರ ಪ್ರದೇಶ, ಬಿಹಾರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಅನೇಕ ಜಾತಿಗಳು ಹಿಂದೆ ಉಳಿದಿವೆ’ ಎಂದು ಕಿಡಿಕಾರಿದರು.
‘ತ್ರಿವಳಿ ತಲಾಖ್ ಬೆಂಬಲಿಸುವವರು ಮುಸ್ಲಿಂ ಹೆಣ್ಣುಮಕ್ಕಳಿಗೆ ಭಾರಿ ಅನ್ಯಾಯ ಮಾಡುವವರು. ಈಜಿಪ್ಟ್ನಲ್ಲಿ 80-90 ವರ್ಷ ಹಿಂದೆಯೇ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ. ಅದು ಅಗತ್ಯವೇ ಆಗಿದ್ದರೆ ಏಕೆ ಖತಾರ್, ಜೋರ್ಡಾನ್, ಇಂಡೋನೇಷ್ಯಾದಲ್ಲಿ ನಿಷೇಧ ಆಗುತ್ತಿತ್ತು?’ ಎಂದು ಮೋದಿ ಪ್ರಶ್ನಿಸಿದರು.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತದಲ್ಲಿನ ‘ಹುಸೇನ್ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ
ಏನಿದು ಏಕರೂಪ ನಾಗರಿಕ ಸಂಹಿತೆ?
ಪ್ರಸ್ತುತ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಮೊದಲಾದ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಷಯದಲ್ಲಿ ತಮ್ಮದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನುಗಳನ್ನು ಹೊಂದಿವೆ. ಇವು ಮಹಿಳೆಯರಿಗೆ ಹಲವು ವಿಷಯಗಳಲ್ಲಿ ಸಮಾನ ಹಕ್ಕು ಕಲ್ಪಿಸಿಲ್ಲ. ಜೊತೆಗೆ ಧಾರ್ಮಿಕ ಕಾಯ್ದೆಗಳು ದೇಶದ ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಾಗಿವೆ ಎಂಬ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಾತಿ, ಧರ್ಮದವರಿಗೂ ಎಲ್ಲಾ ವಿಷಯದಲ್ಲಿ ಒಂದೇ ರೀತಿಯ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.
ಇದನ್ನೂ ಓದಿ: 2024ರ ಅಂತ್ಯಕ್ಕೆ ಮೊದಲ ಸ್ವದೇಶಿ ನಿರ್ಮಿತ ಸೆಮಿ ಕಂಡಕ್ಟರ್ ಚಿಪ್: ಅಶ್ವಿನಿ ವೈಷ್ಣವ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ