17ರ ನಂತರ ದೇಶವ್ಯಾಪಿ ಮೃದು ಲಾಕ್‌ಡೌನ್‌ ಜಾರಿ ಸಂಭವ: ಏನಿರುತ್ತೆ? ಏನಿರಲ್ಲ?

By Kannadaprabha NewsFirst Published May 12, 2020, 7:10 AM IST
Highlights

15ರೊಳಗೆ ಲಾಕ್‌ಡೌನ್‌ ತೆರವು ಪ್ಲ್ಯಾನ್‌ ಕಳಿಸಿ| ಸಿಎಂಗಳಿಗೆ ಮೋದಿ ಸೂಚನೆ| 17ರ ನಂತರ ಮೃದು ಲಾಕ್‌ಡೌನ್‌ ಜಾರಿ ಸಂಭವ| ನಿರ್ಬಂಧ ಮತ್ತಷ್ಟು ಸಡಿಲ ಬಗ್ಗೆ ಪ್ರಧಾನಿ ಇಂಗಿತ| ಮುಖ್ಯಮಂತ್ರಿಗಳ ಜತೆ 6 ತಾಸು ಸಭೆ| ಲಾಕ್‌ಡೌನ್‌ ತೆರವು ನಂತರದ ಸಮಸ್ಯೆ | ದುರಿಸಲು ರಾಜ್ಯಗಳು ನೀಲನಕ್ಷೆ ತಯಾರಿಸಲು ಸೂಚನೆ, ಆರ್ಥಿಕತೆ ಉತ್ತೇಜನಕ್ಕೂ ಪಿಎಂ ಒತ್ತು

ನವದೆಹಲಿ(ಮೇ.12):: ಕೊರೋನಾ ನಿಗ್ರಹಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಬರುವ ಭಾನುವಾರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಕುರಿತು ಮೇ 15ರೊಳಗೆ ವಿಸ್ತೃತ ಸಲಹೆ ರವಾನಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೋಮವಾರ ಸಿಎಂಗಳ ಜತೆ ಸುದೀರ್ಘ 6 ತಾಸು ಸಭೆ ನಡೆಸಿದ ಅವರು, ಲಾಕ್‌ಡೌನ್‌ ವೇಳೆ ಹಾಗೂ ಹಂತಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ರಾಜ್ಯಗಳು ನೀಲನಕ್ಷೆ ತಯಾರಿಸಬೇಕು ಎಂದು ಹೇಳಿದರು.

ಹೃದಯಾಘಾತ, ಕ್ಯಾನ್ಸರ್ ನಡುವೆಯೂ ಕೊರೋನಾ ಮಣಿಸಿದ 74ರ ವೃದ್ಧ!

ಮೊದಲ ಹಂತದ ಲಾಕ್‌ಡೌನ್‌ ವೇಳೆ ಅಗತ್ಯವಿದ್ದ ಕ್ರಮಗಳು 2ನೇ ಹಂತದಲ್ಲಿ ಅವಶ್ಯವಿರಲಿಲ್ಲ. ಅದೇ ರೀತಿ, 3ನೇ ಹಂತಕ್ಕೆ ಅಗತ್ಯವಿರುವ ಅಗತ್ಯಗಳು ನಾಲ್ಕನೇ ಅಂತ್ಯಕ್ಕೆ ಅವಶ್ಯವಿರುವುದಿಲ್ಲ ಎಂದು ಮೋದಿ ಅವರು ಹೇಳಿದರು. ತನ್ಮೂಲಕ ಮೇ 17ರ ನಂತರ ಲಾಕ್‌ಡೌನ್‌ ವಿಸ್ತರಣೆಯಾಗುವ ಹಾಗೂ ನಿರ್ಬಂಧಗಳು ಸಡಿಲಿಕೆಯಾಗುವ ಕುರಿತು ಅತ್ಯಂತ ಸ್ಪಷ್ಟಸುಳಿವನ್ನು ನೀಡಿದರು. ಮೂಲಗಳ ಪ್ರಕಾರ, ಮೇ 17ರ ನಂತರ ಕಂಟೈನ್ಮೆಂಟ್‌ ವಲಯಗಳಲ್ಲಿ ಲಾಕ್‌ಡೌನ್‌ ಮುಂದುವರಿಯಲಿದೆ. ಆದರೆ ಇತರೆಡೆ ನಿರ್ಬಂಧಗಳು ಮತ್ತಷ್ಟುಸಡಿಲವಾಗುವ ಸಾಧ್ಯತೆ ಇದೆ.

ಎಲ್ಲ ಕಡೆ ರೈಲು ಸಂಚಾರ ಇಲ್ಲ:

ಆರ್ಥಿಕತೆ ಪುನಶ್ಚೇತನಗೊಳಿಸಲು ರೈಲು ಸಂಚಾರದ ಅವಶ್ಯಕತೆ ಇದೆ. ಆದರೆ ಎಲ್ಲ ಮಾರ್ಗಗಳಲ್ಲೂ ರೈಲು ಸಂಚಾರ ಆರಂಭವಾಗುವುದಿಲ್ಲ. ಸೀಮಿತ ಸಂಖ್ಯೆಯಲ್ಲಿ ರೈಲುಗಳ ಓಡಾಟವಿರುತ್ತದೆ ಎಂದು ಪ್ರಧಾನಿ ಸಭೆಯಲ್ಲಿ ತಿಳಿಸಿದರು.

ನಮ್ಮ ಮುಂದೆ ಎರಡು ರೀತಿಯ ಸವಾಲುಗಳು ಇವೆ. ಕೊರೋನಾ ಸೋಂಕಿನ ಪಸರಣ ವೇಗವನ್ನು ತಗ್ಗಿಸಬೇಕು. ಎಲ್ಲ ಮಾರ್ಗಸೂಚಿಗಳಿಗೆ ಬದ್ಧವಾಗಿ ಹಂತಹಂತವಾಗಿ ಸಾರ್ವಜನಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ಈ ಎರಡೂ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಭಾರತದ ಚೊಚ್ಚಲ ಸೋಂಕು ಪತ್ತೆ ಕಿಟ್‌ ಅಭಿವೃದ್ಧಿ ಯಶಸ್ವಿ!

ಜನರಿಂದ ಜಗತ್ತಿನವರೆಗೆ:

ಗ್ರಾಮೀಣ ಪ್ರದೇಶಗಳಿಗೆ ಕೊರೋನಾ ಹಬ್ಬದಂತೆ ಪ್ರಯತ್ನ ನಡೆಸಬೇಕಾಗಿದೆ. ‘ಜನರಿಂದ ಜಗತ್ತಿನವರೆಗೆ’ ಎಂಬ ಹೊಸ ಸಿದ್ಧಾಂತದೊಂದಿಗೆ ನಾವು ಹೊಸ ಜೀವನ ನಡೆಸಬೇಕಾಗಿದೆ. ಹೊಸ ವಾಸ್ತವಕ್ಕೆ ನಾವು ಸಜ್ಜಾಗಬೇಕಾಗಿದೆ. ಲಾಕ್‌ಡೌನ್‌ ಅನ್ನು ಹಂತಹಂತವಾಗಿ ತೆರವುಗೊಳಿಸುವ ಬಗ್ಗೆ ಪರಿಶೀಲನೆ ಇದ್ದರೂ, ಲಸಿಕೆ ಅಥವಾ ಪರಿಹಾರ ಸಿಗುವವರೆಗೂ ಈ ವೈರಸ್‌ ವಿರುದ್ಧ ಹೋರಾಡಲು ನಮ್ಮ ಬಳಿ ಇರುವ ಏಕೈಕ ಅಸ್ತ್ರ ಸಾಮಾಜಿಕ ಅಂತರ. ಹೀಗಾಗಿ ಎರಡು ಗಜ ದೂರ ಮಹತ್ವದ್ದು. ರಾತ್ರಿ ವೇಳೆ ಕಫä್ರ್ಯ ಹೇರುವ ಸಿಎಂಗಳ ಸಲಹೆ ಜನರಲ್ಲಿ ಎಚ್ಚರಿಕೆ ಮೂಡಿಸುತ್ತದೆ ಎಂದು ತಿಳಿಸಿದರು.

ಮುಂಗಾರು ರೋಗಕ್ಕೆ ಸಜ್ಜಾಗಿ:

ಮುಂಗಾರು ಆರಂಭವಾದ ಬಳಿಕ ಕೊರೋನಾಯೇತರ ರೋಗಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ನಾವು ಸಜ್ಜಾಗಬೇಕು. ನಮ್ಮ ವೈದ್ಯ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.

‘ಕೊರೋನಾಜನಕ’ ಸ್ಥಿತಿಗೆ ರಾಜ್ಯದ ಆಸ್ಪತ್ರೆಗಳು ಸಿದ್ಧ!

ಮೋದಿ ಭಾಷಣದ ಮುಖ್ಯಾಂಶಗಳು

- ಲಾಕ್‌ಡೌನ್‌- 1 ಇದ್ದಂತೆ ಲಾಕ್‌ಡೌನ್‌- 2 ಇರಲಿಲ್ಲ. ಲಾಕ್‌ಡೌನ್‌-3 ರ ರೀತಿ ಲಾಕ್‌ಡೌನ್‌- 4 ಇರಲ್ಲ

- ಆರ್ಥಿಕತೆ ಪುನಶ್ಚೇತನಕ್ಕೆ ರೈಲು ಸಂಚಾರ ಬೇಕು. ಆದರೆ ಎಲ್ಲ ಕಡೆ ರೈಲುಗಳ ಸಂಚಾರ ಆರಂಭವಾಗಲ್ಲ

- ನಮ್ಮ ಮುಂದೆ 2 ಸವಾಲಿವೆ. ಕೊರೋನಾ ಪಸರಣ ತಗ್ಗಿಸಬೇಕು. ಸಾರ್ವಜನಿಕ ಚಟುವಟಿಕೆ ಹೆಚ್ಚಿಸಬೇಕು

- ಹಳ್ಳಿಗಳಿಗೆ ಕೊರೋನಾ ಹಬ್ಬದಂತೆ ತಡೆಯಬೇಕು. ‘ಜನರಿಂದ ಜಗತ್ತಿನವರೆಗೆ’ ಸಿದ್ಧಾಂತ ನಮ್ಮದಾಗಬೇಕು

- ಲಸಿಕೆ ಸಿಗುವವರೆಗೂ ವೈರಸ್‌ ವಿರುದ್ಧ ಹೋರಾಡಲು ನಮ್ಮ ಬಳಿ ಇರುವ ಏಕೈಕ ಅಸ್ತ್ರ ಸಾಮಾಜಿಕ ಅಂತರ

- ಮುಂಗಾರು ಬಳಿಕ ಕೊರೋನಾಯೇತರ ರೋಗ ಕಾಣಿಸಿಕೊಳ್ಳುತ್ತವೆ. ಅದಕ್ಕೆ ನಾವು ಈಗಲೇ ಸಜ್ಜಾಗಬೇಕು.

"

click me!