ಉಚಿತವಾಗಿ ಸಿಕ್ಕರೇ ನನಗೂ ಬೇಕು ನನ್ನ ಅಪ್ಪನಿಗೂ ಬೇಕು ಎಂದು ಹೇಳೋರೆ ಜಾಸ್ತಿ ಹಾಗೆಯೇ ಉಚಿತವಾಗಿ ಸಿಕ್ಕ ಯಾವುದನ್ನೂ ಕೂಡ ನಮ್ಮ ಜನ ಯಾರೂ ಬೇಡ ಎನ್ನಲು ಸಿದ್ಧರಿರುವುದಿಲ್ಲ. ಉಚಿತವಾಗಿ ಸಿಗುವುದನ್ನು ಬಹುತೇಕ ಎಲ್ಲರೂ ಇಷ್ಟ ಪಡುತ್ತಾರೆ. ಅದೇ ರೀತಿ ಬಿಹಾರದಲ್ಲಿ ಘಟನೆಯೊಂದು ನಡೆದಿದೆ.
ಮೀನು ಸಾಗಣೆ ಮಾಡುತ್ತಿದ್ದ ಟ್ರಕ್ವೊಂದು ಉರುಳಿ ಬಿದ್ದ ಪರಿಣಾಮ ಮೀನು ಸಂಪೂರ್ಣವಾಗಿ ರಸ್ತೆ ಮೇಲೆಲ್ಲಾ ಚೆಲ್ಲಾಡಿದ್ದು, ಇದನ್ನು ನೋಡಿದ ಜನ ಸಿಕ್ಕಿದ್ದೇ ಸೀರುಂಡೆ ಅಂತ ರಸ್ತೆಗೆ ಬಿದ್ದ ಮೀನುಗಳನ್ನು ಬಕೆಟ್, ಬಟ್ಟೆ, ಚೀಲ ಮುಂತಾದವುಗಳಲ್ಲಿ ತುಂಬಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದ ಮೀನನ್ನು ಜನ ಮುಗಿಬಿದ್ದು ಹೆಕ್ಕಿ ತಮ್ಮ ತಮ್ಮ ಬುಟ್ಟಿ ಬಕೆಟ್ಗಳಿಗೆ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರದಂದು ಬಿಹಾರದ ಗಯಾ ಜಿಲ್ಲೆಯ ಅಮಾಸ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಮೀನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿತ್ತು. ಟ್ರಕ್ ಪಲ್ಟಿಯಾದ ಪರಿಣಾಮ ಟ್ರಕ್ನಲ್ಲಿದ್ದ ಬಹುತೇಕ ಮೀನುಗಳು ರಸ್ತೆಗೆ ಬಿದ್ದಿದ್ದವು. ಇದರಿಂದ ಜನರಿಗೆ ಲಾಟರಿ ಹೊಡೆದ ಅನುಭವವಾಗಿದ್ದು, ಮಹಿಳೆಯೊಬ್ಬಳು ಮೀನುಗಳನ್ನು ಹೆಕ್ಕಿ ತನ್ನ ಸೀರೆಯಲ್ಲಿ ಹಾಕಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಜನ ಪ್ರಾಮಾಣಿಕರಾದ್ರು...ಕಂತೆ-ಕಂತೆ ಹಣ ರಸ್ತೆಯಲ್ಲಿದ್ದರೂ ಮುಟ್ಟದ ಬೆಂಗ್ಳೂರು ಜನ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಈ ದೃಶ್ಯಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಅಸಭ್ಯ ನಡವಳಿಕೆ ಎಂದು ಬೈದಿದ್ದಾರೆ. ರಸ್ತೆಯಲ್ಲಿ ಅಪಘಾತವಾಗಿ ಯಾರಾದರೂ ಬಿದ್ದು ಒದ್ದಾಡುತ್ತಿದ್ದರೆ ಒಬ್ಬರೇ ಒಬ್ಬರು ಆತನ ನೆರವಿಗೆ ಧಾವಿಸುವುದಿಲ್ಲ. ಆದರೆ ಹೀಗೆ ಬಿಟ್ಟಿಯಾಗಿ ಸಿಗುವಂತಿದ್ದರೆ ಎಲ್ಲಿದ್ದರೂ ಓಡಿ ಬರುತ್ತಾರೆ.
ಲಾರಿ ನಡುವೆ ಅಪಘಾತ : ರಸ್ತೆಯಲ್ಲಿ ಬಿದ್ದ ಹಣ್ಣು ಕೊಂಡೊಯ್ಯಲು ಮುಗಿ ಬಿದ್ದ ಜನ
ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. 2020ರಲ್ಲಿ ಉತ್ತರ ಕನ್ನಡದ ಯಲ್ಲಾಪುರ ಪಟ್ಟಣದಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಗಳ ನಡುವೆ ಅಪಘಾತವಾಗಿತ್ತು. ಅಪಘಾತವಾದ ಪರಿಣಾಮ ಹಣ್ಣು ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿತ್ತು. ಈ ವೇಳೆ ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದಲ್ಲದೇ ಲಾರಿಯಲ್ಲಿದ್ದ ಹಣ್ಣೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಬಿದ್ದಿದ್ದವು. ಆದರೆ ಕೆಲ ಜನರು ಗಾಯಗೊಂಡ ಚಾಲಕನ ನೆರವಿಗೆ ಬಾರದೆ ರಸ್ತೆ ಮೇಲೆ ಬಿದ್ದಿದ್ದ ದಾಳಿಂಬೆ, ಗ್ರೀನ್ ಆ್ಯಪಲ್, ದ್ರಾಕ್ಷಿ ಹಣ್ಣುಗಳನ್ನು ಕೊಂಡೊಯ್ಯಲು ಜನರು ಮುಗಿ ಬಿದ್ದಿದ್ದರು. ನಂತರ ಯಾರೂ ಅಪಘಾತದಲ್ಲಿ ಗಾಯಗೊಂಡ ಹಣ್ಣಿನ ಲಾರಿ ಚಾಲಕನನ್ನು ತಾಲೂಕು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಈ ಹಿಂದೆಯೂ ಡಿಸೇಲ್ ಟ್ಯಾಂಕರ್ವೊಂದು ಪಲ್ಟಿಯಾಗಿದ್ದ ಸಂದರ್ಭದಲ್ಲಿ ಜನ ಕ್ಯಾನ್ ಬಕೆಟ್ ಡ್ರಮ್ಗಳನ್ನು ತಂದು ಬಿಟ್ಟಿಯಾಗಿ ಸಿಕ್ಕಿದ ಡಿಸೇಲ್ನ್ನು ಹೊತ್ತೊಯ್ದ ಘಟನೆಗಳು ವರದಿಯಾಗಿದ್ದವು. ರಸ್ತೆ ಮೇಲೆ ನೋಟುಗಳು ಬಿದ್ದಿದ್ದರೆ ಯಾರು ತಾನೆ ತಗೊಳಲ್ಲ ಹೇಳಿ?ಆದರೆ ರಾಜ್ಯದ ತುಮಕೂರಿನಲ್ಲಿ ಕೆಲ ದಿನಗಳ ಹಿಂದೆ ರಸ್ತೆ ಮೇಲೆ ರಾಶಿ ರಾಶಿ ನೋಡುಗಳು ಬಿದ್ದಿದ್ದ ಘಟನೆ ನಡೆದಿತ್ತು. ಆದರೆ ಜನಗಳು ಮಾತ್ರ ಈ ನೋಟನ್ನು ಮುಟ್ಟಲು ಭಯಪಟ್ಟಿದ್ದರು. ತಿಪಟೂರು ನಗರದ ಗೋವಿನ ಪುರದಲ್ಲಿ ನಡುರಾತ್ರಿ ರಸ್ತೆಯಲ್ಲಿ ಬಿದ್ದಿದ್ದ ಅನೇಕ 20 ರೂಪಾಯಿಯ ನೋಟುಗಳನ್ನು ನೋಡಿ ಜನ ಆತಂಕಗೊಂಡಿದ್ದರು. ರಸ್ತೆ ಮೇಲೆ ನೋಟು ಬಿದ್ದಿದ್ದರೂ ಎತ್ತಿಕೊಳ್ಳಲು ಜನ ಭಯಪಟ್ಟರು. ಆದರೆ ಬೆಳಗಾಗುವ ಹೊತ್ತಿಗೆಆ ನೋಟುಗಳು ಮಂಗಮಾಯವಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ