ಅಯೋಧ್ಯೆಗೆ ಹರಿದು ಬರುತ್ತಿರುವ ಜನಸಾಗರ : ಉತ್ತರಪ್ರದೇಶ ಬೊಕ್ಕಸಕ್ಕೆ ಹೆಚ್ಚುವರಿ 1 ಲಕ್ಷ ಕೋಟಿ ರು. ಆದಾಯ

By Kannadaprabha NewsFirst Published Jan 25, 2024, 7:52 AM IST
Highlights

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗಿರುವುದು ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಶುಕ್ರದೆಸೆ ತಂದಿದೆ. ಇದರಿಂದಾಗಿ ಪ್ರವಾಸಿಗರ ಹರಿವು ಹೆಚ್ಚಾಗಿ ರಾಜ್ಯಕ್ಕೆ 1ರಿಂದ 1.5 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯ ಹರಿದುಬರಲಿದೆ ಎಂದು  ’ಎಸ್‌ಬಿಐ ರೀಸರ್ಚ್‌’ ವರದಿ ಅಂದಾಜಿಸಿದೆ.

ಲಖನೌ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗಿರುವುದು ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಶುಕ್ರದೆಸೆ ತಂದಿದೆ. ಇದರಿಂದಾಗಿ ಪ್ರವಾಸಿಗರ ಹರಿವು ಹೆಚ್ಚಾಗಿ ರಾಜ್ಯಕ್ಕೆ 1ರಿಂದ 1.5 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯ ಹರಿದುಬರಲಿದ್ದು, ರಾಜ್ಯದ ವಾರ್ಷಿಕ ಪ್ರವಾಸೋದ್ಯಮ ಆದಾಯ 4 ಲಕ್ಷ ಕೋಟಿ ರು.ಗೆ ತಲುಪಬಹುದು ಎಂದು ’ಎಸ್‌ಬಿಐ ರೀಸರ್ಚ್‌’ ವರದಿ ಅಂದಾಜಿಸಿದೆ.

ವಾರಾಣಸಿ, ಆಗ್ರಾ, ಮಥುರಾದಂಥ ಪ್ರವಾಸಿ ತಾಣಗಳು ಹಾಗೂ ಶ್ರೀಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ ಈಗಾಗಲೇ ದೇಶೀ ಪ್ರವಾಸಿಗರಿಂದ 2.5 ಲಕ್ಷ ಕೋಟಿ ರು. ಹಾಗೂ ವಿದೇಶಿ ಪ್ರವಾಸಿಗರಿಂದ 10 ಸಾವಿರ ಕೋಟಿ ರು. ಪ್ರತಿ ವರ್ಷ ಹರಿದುಬರುತ್ತಿದೆ. ಈಗ ಅಯೋಧ್ಯೆಯ ಕಾರಣದಿಂದ ಪ್ರವಾಸಿಗರ ಹರಿವು ಹೆಚ್ಚಿ 1-1.50 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯವನ್ನು ರಾಜ್ಯಕ್ಕೆ ತಂದುಕೊಡಬಹುದು ಎಂದು ವರದಿ ಹೇಳಿದೆ.

Latest Videos

ರಾಮನೂರಿನಲ್ಲಿ ಲಕ್ಷಾಂತರ ಭಕ್ತರು, ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿದೆ?

ಆದಾಯ ಹೆಚ್ಚಳ ಹೇಗೆ?:

ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ, ಇದು ಶೀಘ್ರದಲ್ಲೇ ದಿನಕ್ಕೆ 3 ಲಕ್ಷಕ್ಕೆ ಹೋಗಬಹುದು. ಪ್ರತಿ ಭಕ್ತರು ತಮ್ಮ ಭೇಟಿಯ ಸಮಯದಲ್ಲಿ ಸರಿಸುಮಾರು 2,500 ರು. ಖರ್ಚು ಮಾಡಿದರೆ, ಅಯೋಧ್ಯೆಯ ಸ್ಥಳೀಯ ಆರ್ಥಿಕತೆಗೆ 25,000 ಕೋಟಿ ರು. ಆದಾಯ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

’ಜನರು ಬರೀ ಅಯೋಧ್ಯೆಗಷ್ಟೇ ಬರಲ್ಲ. ಅಯೋಧ್ಯೆಗೆ ಬಂದಾಗ ಭಕ್ತರು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಮಥುರಾದ ಬಂಕೆ ಬಿಹಾರಿ ದೇವಾಲಯದಂತಹ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ಇದು ವಾರಾಣಸಿ ಮತ್ತು ಮಥುರಾದ ಸ್ಥಳೀಯ ಆರ್ಥಿಕತೆಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಈ ರೀತಿಯಾಗಿ, ಯುಪಿ ಆರ್ಥಿಕತೆಯು ಪ್ರತಿ ವರ್ಷ ಸುಮಾರು 1ರಿಂದ 1.5 ಲಕ್ಷ ಕೋಟಿ ರು. ಹೆಚ್ಚುವರಿ ಆದಾಯ ಪಡೆಯಬಹುದು, ಅಂತಿಮವಾಗಿ ಭಾರತದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ’ ಎಂದರು.

ಮಾರ್ಚ್‌ವರೆಗೆ ಆಯೋಧ್ಯೆ ಭೇಟಿ ಮಾಡದಂತೆ ಸಂಪುಟ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ!

ಧಾರ್ಮಿಕ ಪ್ರವಾಸೋದ್ಯಮವು ಸಾರಿಗೆ, ಹೋಟೆಲ್‌ಗಳು ಮತ್ತು ಸ್ಥಳೀಯ ಸರಕುಗಳ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ, ರಾಮ ಪರಿವಾರದ 13 ದೇವಸ್ಥಾನಕ್ಕೆ ಅಯೋಧ್ಯೆ ಸಿದ್ಧತೆ!

click me!