
ಪಾಟ್ನಾ: ಬದ್ಧವೈರಿಗಳಾದ ಹಾವು ಮುಂಗುಸಿಗಳು ಪರಸ್ಪರ ಕಿತ್ತಾಡುತ್ತಿರುವ ದೃಶ್ಯವೊಂದು ಪಾಟ್ನಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಕಂಡು ಬಂದಿದೆ. ಹಾವು ಮುಂಗುಸಿಗಳ ಈ ಉಗ್ರ ಹೋರಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾವು ಹಾಗೂ ಮುಂಗುಸಿ ಪ್ರಾಣಿ ಲೋಕದ ಬದ್ಧವೈರಿಗಳು ಹಾವಿನ ತಲೆಕಂಡರೆ ಸಾಕು ಮುಂಗುಸಿ ಸುಮ್ಮನೇ ಬಿಡುವುದಿಲ್ಲ, ಅಲ್ಲಿ ದೊಡ್ಡ ಯುದ್ಧವೇ ಶುರುವಾಗುತ್ತದೆ. ಈ ಎರಡು ಸರೀಸೃಪಗಳ ನಡುವಿನ ಯುದ್ಧದಲ್ಲಿ ಮಾಡು ಇಲ್ಲವೇ ಮಡಿ ಎಂಬುದೇ ಧ್ಯೆಯ ವಾಕ್ಯ. ಹೀಗಾಗಿ ಈ ಹೋರಾಟದಲ್ಲಿ ಹಾವು ಇಲ್ಲವೇ ಮುಂಗುಸಿ ಪ್ರಾಣ ಬಿಡುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಮುಂಗುಸಿ ಮುಂದೆ ಹಾವುಗಳು ಗೆಲ್ಲುವುದು ಕಡಿಮೆ.
ಸಾಮಾನ್ಯವಾಗಿ ಒಂದು ಮುಂಗುಸಿ ಒಂದು ಹಾವು ಇದ್ದರೇನೇ ಹಾವಿಗೆ ಆ ಯುದ್ಧವನ್ನು ಗೆಲ್ಲುವುದು ಬಲು ಕಷ್ಟವಾಗುತ್ತದೆ. ಹೀಗಿರುವಾಗ ಇಲ್ಲಿ ಒಟ್ಟು ಮೂರು ಮುಂಗುಸಿಗಳು ಹಾಗೂ ಒಂದು ಹಾವಿನ ಮಧ್ಯೆ ಘೋರ ಹೋರಾಟ ನಡೆದಿದೆ. ಮೊದಲಿಗೆ ಆಖಾಡದಲ್ಲಿ ಒಂದು ಹಾವು ಒಂದು ಮುಂಗುಸಿ ಪಾಟ್ನಾದ ಜಯಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಲ್ಲೇ ಉಗ್ರ ಹೋರಾಟ ನಡೆಸುವುದು ಕಾಣಿಸಿದೆ. ಆದರೆ ಕೆಲ ಸೆಕೆಂಡುಗಳಲ್ಲಿ ಇನ್ನೆರಡು ಮುಂಗುಸಿಗಳು ಅಲ್ಲಿಗೆ ಬಂದಿದ್ದು, ಹಾವಿನ ಮೇಲೆ ಮುಗಿಬಿದ್ದಿವೆ. ಮೂರು ಮುಂಗುಸಿಗಳು ಸೇರಿ ಹಾವಿನೊಂದಿಗೆ ಕಿತ್ತಾಡುತ್ತಿದ್ದು, 37 ಸೆಕೆಂಡ್ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ನೀರು ಕುಡಿಯಲು ಬಂದ ಹಾವು ಮುಂಗುಸಿ ಮಧ್ಯೆ ಘನಘೋರ ಕಾಳಗ
ಆದರೆ ಕೊನೆಗೆ ಏನಾಯ್ತು ಎಂಬುದು ವೀಡಿಯೋದಲ್ಲಿ ಇಲ್ಲ, ವೀಡಿಯೋ ನೋಡಿದ ನೆಟ್ಟಿಗರು ಕೂಡ ಈ ವೀಡಿಯೋಗೆ ಸಖತ್ ಕಾಮೆಂಟ್ ಮಾಡಿದ್ದಾರೆ, ಕೆಲವು ಜನರು ಪ್ರತಿ ಹಾವಿನ ಹಿಂದೆ ಬೀಳುತ್ತಾರೆ ಅದರಿಂದ ಅವರಿಗೇನು ಸಿಗುತ್ತೋ ಗೊತ್ತಿಲ್ಲ ಎಂದು ಒಬ್ಬರು ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಇದು ದ್ವೇಷದ ಹೋರಾಟದಂತೆ ಕಾಣುತ್ತದೆ ಆದರೆ ಈ ಮುಂಗುಸಿ ಹಾವನ್ನು ತಿನ್ನುವುದಕ್ಕೆ ನೋಡುತ್ತದೆ. ಭಾರತ ಆರಂಭಿಕರಿಗೆ ಅಲ್ಲ, ಇಲ್ಲಿ ಮುಂಗುಸಿ ಕೂಡ ಒಲಿಂಪಿಕ್ ಗೆಲ್ಲುವುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುಂಗುಸಿ ತಂಡದ ಸದಸ್ಯರು ತುರ್ತು ಪರಿಸ್ಥಿತಿ ಸಂಭವಿಸಿದರೆ ಎಂದು ರೆಡಿಯಾಗಿ ಕಾಯುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್..!
ಹಾವುಗಳು ಹಾಗೂ ಮುಂಗುಸಿಗಳು ನೈಸರ್ಗಿಕವಾಗಿ ಶತ್ರುಗಳು, ಇವರದ್ದು ಹಠಾತ್ ಆಗಿ ನಡೆಯುವ ಯುದ್ಧವಲ್ಲ, ಇವರು ಶತಮಾನಗಳಿಂದಲೂ ವೈಷಮ್ಯ ಹೊಂದಿರುವ ಶತ್ರುಗಳು. ಹಾವುಗಳು ಮುಂಗುಸಿ ಹಾಗೂ ಅವುಗಳ ಪುಟ್ಟ ಮರಿಗಳನ್ನು ಬೇಟೆಯಾಡಿ ತಿನ್ನಲು ನೋಡುತ್ತವೆ. ಹೀಗಾಗಿ ಮುಂಗುಸಿಗಳು ಹಾವುಗಳು ಎಲ್ಲಿ ಕಂಡರೂ ಬಿಡದೇ ದಾಳಿ ಮಾಡಿ ಸಾಯಿಸಲು ನೋಡುತ್ತವೆ.
ಬೇಟೆಯ ಹೊರತಾಗಿ ಇವುಗಳ ಮಧ್ಯೆ ಆಹಾರ, ಆಶ್ರಯ ತಾಣ, ತಾವಿರುವ ಸೀಮೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಪರಸ್ಪರ ತೀವ್ರ ಪೈಪೋಟಿ ಇದೆ. ಈ ಎರಡೂ ವನ್ಯಜೀವಿಗಳು ಮಾಂಸಹಾರಿಗಳಾಗಿದ್ದು, ತಾವು ವಾಸ ಮಾಡುವ ಸ್ಥಳದಲ್ಲಿ ತಮ್ಮ ಆಹಾರ ಹಾಗೂ ಬೇಟೆಗಾಗಿ ಪರಸ್ಪರ ತೀವ್ರವಾಗಿ ಹೋರಾಡುತ್ತವೆ. ಮುಂಗುಸಿಗಳು ಪ್ರಬಲ ಪ್ರಾದೇಶಿಕವಾದಿಗಳಾಗಿದ್ದು, ಹಾವುಗಳು ತಮ್ಮ ಸೀಮೆಗೆ ಆಹಾರ ಅರಸಿ ಬಂದಾಗ ತಮ್ಮ ಸೀಮೆಯನ್ನು ರಕ್ಷಿಸುವ ಸಲುವಾಗಿ ಹಾವುಗಳ ಮೇಲೆ ದಾಳಿ ಮಾಡುತ್ತವೆ. ಇವರ ಹೋರಾಟ ಮಾಡು ಇಲ್ಲವೇ ಮಡಿ ಎಂಬಂತಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ