
ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಘೋಷಣೆಯಾದ ಕದನ ವಿರಾಮ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಉಲ್ಲಂಘಿಸಿದೆ. ಭಾರತದ ಗಡಿ ಭಾಗಗಳ ಮೇಲೆ ದಾಳಿ ನಡೆಸಿದೆ. ಶ್ರೀನಗರದಾದ್ಯಂತ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನ ಹಲವು ಗಡಿ ಜಿಲ್ಲೆಗಳಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಗಳನ್ನು ಆರಂಭಿಸಿದೆ.
ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನ ಮತ್ತೆ ದಾಳಿ ಆರಂಭಿಸಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದಾರೆ. “ಕದನ ವಿರಾಮಕ್ಕೆ ಏನಾಯ್ತು? ಶ್ರೀನಗರದಾದ್ಯಂತ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ!!!” ಎಂದು ಉಮರ್ ಅಬ್ದುಲ್ಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಪವರ್ ಕಟ್
ಗುಜರಾತ್ನ ಕಚ್ ಪ್ರದೇಶದಲ್ಲಿ 10 ಪಾಕಿಸ್ತಾನಿ ಡ್ರೋನ್ಗಳು ಕಾಣಿಸಿಕೊಂಡಿದ್ದು, ಭಾರತೀಯ ಸೇನೆ ಅವುಗಳನ್ನು ವಿಫಲಗೊಳಿಸಿದೆ. ಇದರೊಂದಿಗೆ ಶ್ರೀನಗರದಲ್ಲಿ ಡ್ರೋನ್ಗಳನ್ನು ಸಹ ಹೊಡೆದುರುಳಿಸಲಾಗಿದೆ. ಕದನವಿರಾಮ ಘೋಷಣೆಯಾದ ಹಿನ್ನೆಲೆ ಇಂದು ಸಂಜೆಯಿಂದ ಪಠಾಣ್ಕೋಟ್ ನಗರದಲ್ಲಿ ವಿದ್ಯುತ್ ದೀಪಗಳನ್ನು ಬೆಳೆಸಲಾಗಿತ್ತು. ರಾತ್ರಿ 8 ಗಂಟೆಯ ನಂತರ ಡ್ರೋನ್ ಕಾಣಿಸಿಕೊಂಡಿದ್ದರಿಂದ ಮತ್ತೆ ಪಠಾಣ್ಕೋಟ್ ನಗರದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇಡೀ ಜಿಲ್ಲೆಯ ದೀಪಗಳನ್ನು ಆಫ್ ಮಾಡಲಾಗಿದೆ. ಫಿರೋಜ್ಪುರದಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪಾಕಿಸ್ತಾನದ ಡ್ರೋನ್ ದಾಳಿ:
ಫರ್ಮರ್ ನಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ತುರ್ತು ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಪಂಜಾಬ್ನ ಹೋಶಿಯಾರ್ಪುರ ಮತ್ತು ಫಿರೋಜ್ಪುರದಲ್ಲೂ ವಿದ್ಯುತ್ ಕಡಿತಗೊಂಡಿದೆ. ಉಧಮ್ಪುರ, ಅಕ್ನೂರ್, ನೌಶೇರಾ, ಪೂಂಚ್, ರಜೌರಿ, ಮೆಂಧಾರ್, ಜಮ್ಮು, ಸುಂದರ್ಬನಿ, ಆರ್.ಎಸ್. ಪುರ, ಅರ್ನಿಯಾ, ಕಥುವಾಗಳಲ್ಲಿ ಡ್ರೋನ್ ದಾಳಿ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: 'ಪ್ರಧಾನಿಗಳೇ ಅಮೆರಿಕವನ್ನು ತಂದೆಯಾಗಲು ಬಿಡಬೇಡಿ' ಕದನ ವಿರಾಮ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಪಪ್ಪು ಯಾದವ್ ಕಿಡಿ!
ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದು ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಘೋಷಿಸಿದ್ದಾರೆ. ಪಾಕಿಸ್ತಾನ ಸೇನೆಯು ಭಾರತೀಯ ಸೇನೆಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ ಮತ್ತು ವೈಮಾನಿಕ, ನೆಲ ಮತ್ತು ಸಮುದ್ರ ದಾಳಿಗಳನ್ನು ನಿಲ್ಲಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಾಕ್ ಸುಳ್ಳು ಬಯಲು
ಮೂರು ಸೇನಾಪಡೆಗಳ ಅಧಿಕಾರಿಗಳಾದ ಕಮೋಡೋರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನ ತನ್ನ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಎಂದು ಸುಳ್ಳು ಹೇಳಿದೆ. ನಮ್ಮದು ನಿಖರ ದಾಳಿ ಮತ್ತು ಜವಾಬ್ದಾರಿಯುತವಾದ ಕ್ರಮವಾಗಿತ್ತು. ಭಾರತೀಯ ಸೇನೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ದಾಳಿಯಿಂದ ಪಾಕಿಸ್ತಾನದ ಸೇನಾನಲೆಗಳಿಗೆ ಹಾನಿಯುಂಟಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿದ ಪಾಕ್; ಶ್ರೀನಗರದಲ್ಲಿ ಭಾರೀ ಸ್ಪೋಟಕ ಸದ್ದು, ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ