
ಚಂಡೀಗಢ: ಹರಿಯಾಣದ ಸಿರ್ಸಾ ಪ್ರದೇಶದ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 12.10ಕ್ಕೆ ಪಾಕಿಸ್ತಾನದ ಕ್ಷಿಪಣಿಯನ್ನು ಭಾರತದ ವಾಯಪಡೆ ನಾಶಪಡಿಸಿತ್ತು. ಈ ಕ್ಷಿಪಣಿಯ ಒಂದು ಅವಶೇಷ ರಾನಿಯನ್, ಮತ್ತೊಂದು ಖಾಜಖೇಢ ಗ್ರಾಮದಲ್ಲಿ ಬಿದ್ದಿದೆ. ವಾಯುಪಡೆಯ ಸಿಬ್ಬಂದಿ ಈ ಅವಶೇಷಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ಕುರಿತು ಮಾತನಾಡಿರುವ ಖಾಜಖೇಡ ಗ್ರಾಮದ ನಿವಾಸಿ ಸುಮಿತ್, ರಾತ್ರಿ ಜೋರಾದ ಸ್ಪೋಟವಾದ ರೀತಿಯ ಸೌಂಡ್ ಕೇಳಿಸಿತು. ಆ ಸಮಯದಲ್ಲಿ ಜನರು ಭಯಗೊಂಡಿದ್ದರು. ನಂತರ ಅವಶೇಷ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯ್ತು ಎಂದು ಹೇಳಿದ್ದಾರೆ.
ಬೆಳಗ್ಗೆ 5.30ರ ವೇಳೆಗೆ ವಾಯುಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ತಂಡ ಅವಶೇಷಗಳು ಬಿದ್ದ ಸ್ಥಳಕ್ಕೆ ತಲುಪಿದ್ದರು. ರಾನಿಯಾನ್ನ ಕುಂದನ್ಲಾಲ್ ಎಂಬವರ ಜಮೀನಿನಲ್ಲಿ ಬಿದ್ದಿದ್ದ ಎಲ್ಲಾ ಅವಶೇಷಗಳನ್ನು ವಾಯುಪಡೆ ಸಿಬ್ಬಂದಿ ತಮ್ಮ ವಶಕ್ಕೆ ತೆಗೆದುಕೊಂಡಿದೆ. ವಾಯುಪಡೆ ನಾಶಪಡಿಸಿದ ಕ್ಷಿಪಣಿಯ ಅವಶೇಷಗಳು ಪತ್ತೆಯಾಗಿವೆ. ಈ ಕ್ಷಿಪಣಿ ಯಾವುದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ. ಬೆಳಗ್ಗೆ ಸುಮಾರು 8 ಗಂಟೆ ಮತ್ತೆ ಸ್ಪೋಟದ ಸದ್ದು ಕೇಳಿದ್ದರಿಂದ ಸೈರನ್ ಮೊಳಗಿಸಲಾಗಿತ್ತು.
ಸ್ಥಳೀಯ ವ್ಯಕ್ತಿಯೊಬ್ಬರು ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡುತ್ತಾ, ನನ್ನ ಮಗ ಇದನ್ನು ನೋಡಿದನು. ಆಕಾಶದಿಂದ ಏನೋ ಬೀಳುತ್ತಿದೆ ಎಂದು ಹೇಳಿದನು. ನಾನು ಜೋರಾದ ಸದ್ದಿನೊಂದಿಗೆ ವಸ್ತುವೊಂದು ತುಂಡಾಗುತ್ತಾ ಬೀಳುವುದನ್ನು ಗಮನಿಸಿದೇವು. ರಾತ್ರಿ ನಾವು ನೋಡಿದ ವಸ್ತು ಚರ್ಚ್ ಬಳಿ ಬಿದ್ದಿರುವ ವಿಷಯ ಗೊತ್ತಾಯ್ತು ಎಂದು ಹೇಳಿದ್ದಾರೆ.
ಬೆಳಗಿನ ಜಾವ ಸ್ಪೋಟ
ಶನಿವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಅಖ್ನೂರ್ ಕ್ಷೇತ್ರದ ನಿವಾಸಿಯೊಬ್ಬರು ಮನೆ ಬಳಿ ದಿಢೀರ್ ವಸ್ತುವೊಂದು ಸ್ಪೋಟದ ಸದ್ದು ಕೇಳಿಸಿತು ಎಂದು ಹೇಳಿದ್ದಾರೆ. ಬೆಳಗಿನ ಜಾವ ಸುಮಾರು 3.30ರ ವೇಳೆ ಸ್ಪೋಟದ ಸದ್ದು ಕೇಳಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಬೆಳಗಿನ ಜಾವ 3:30 ರ ಸುಮಾರಿಗೆ ನನಗೆ ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ನಾವು ಹೊರಗೆ ಓಡಿ ನೆರೆಹೊರೆಯವರಿಗೆ ಕರೆ ಮಾಡಿದೆವು. ಸುತ್ತಲೂ ಹೊಗೆ ಇತ್ತು. ಅದು ಏನೆಂದು ನನಗೆ ಗೊತ್ತಿಲ್ಲ. ಯಾರಿಗೂ ಗಾಯಗಳಾದ ಬಗ್ಗೆ ಯಾವುದೇ ಸುದ್ದಿ ಇಲ್ಲ. ಸ್ಥಳೀಯರ ಪ್ರಕಾರ, ಹತ್ತಿರದ ಪ್ರದೇಶಗಳಿಂದಲೂ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿವೆ ಎಂದು ಸೋಮರಾಜ್ ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ IMFನಿಂದ 1 ಬಿಲಿಯನ್ ಡಾಲರ್ ಆರ್ಥಿಕ ನೆರವು; ಓವೈಸಿ ಪ್ರತಿಕ್ರಿಯೆ ಹೀಗಿತ್ತು
ಶನಿವಾರ ಬೆಳಗ್ಗೆಯವರೆಗೂ ಅಖ್ನೂರ್ ಪ್ರದೇಶದಲ್ಲಿ ಸಂಪೂರ್ಣವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಈ ಪ್ರದೇಶದಲ್ಲಿ ನಿರಂತರವಾಗಿ ಸ್ಪೋಟದ ಶಬ್ದ ಮತ್ತು ಸೈರನ್ಗಳು ಕೇಳಿ ಬರುತ್ತಿವೆ. ಪಂಜಾಬ್ ಜಲಂಧರ್ ಪ್ರದೇಶದಲ್ಲಿ ಕೆಲವು ಡ್ರೋನ್ಗಳು ಕಂಡುಬಂದ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಡ್ರೋನ್ ಕಾಣಿಸಿವೆ ಎಂಬ ವರದಿಗಳು ಬಂದ ಹಿನ್ನೆಲೆ ಕೆಲ ಸಮಯದವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಜಲಂಧರ್ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡ್ರೋನ್ಗಳು ಕಾಣಿಸಿವೆ ಎಂಬುದರ ಬಗ್ಗೆ ಸೇನೆ ತನಿಖೆ ನಡೆಸುತ್ತಿದೆ. ಜನರು ಶಾಂತವಾಗಿರಬೇಕು ಮತ್ತು ಬ್ಲ್ಯಾಕೌಟ್ ಪ್ರೋಟೋಕಾಲ್ಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಭಾರತೀಯ ನಗರಗಳ ಮೇಲೆ ಪಾಕಿಸ್ತಾನ ಸೇನೆ ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಜಮ್ಮು ವಲಯದಲ್ಲಿ ಬಲವಾಗಿ ಪ್ರತಿದಾಳಿ ನಡೆಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಶುಕ್ರವಾರ ಉತ್ತರದ ಬಾರಾಮುಲ್ಲಾದಿಂದ ಪಶ್ಚಿಮದ ಭುಜ್ವರೆಗಿನ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ 26 ಸ್ಥಳಗಳಲ್ಲಿ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ.
ಇದನ್ನೂ ಓದಿ: ಯಾವುದೇ ಭಯೋತ್ಪಾದಕ ದಾಳಿ ನಡೆದರೆ, ಅದನ್ನು ಯುದ್ಧವೆಂದು ಪರಿಗಣಿಸಲು ಭಾರತ ಸರ್ಕಾರದಿಂದ ಮಹತ್ವದ ನಿರ್ಧಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ