Covid-19 Variant: ಓಮಿಕ್ರೋನ್‌ ವಿದೇಶದಿಂದ ಬಂದಿಲ್ಲ, ಭಾರತದಲ್ಲೇ ಇದೆ : ಡಾ. ರಾಕೇಶ್‌ ಮಿಶ್ರಾ!

By Kannadaprabha NewsFirst Published Dec 5, 2021, 9:30 AM IST
Highlights

*ಸಿಎಸ್‌ಐಆರ್‌ ಮಾಜಿ ಮುಖ್ಯಸ್ಥ ಮಿಶ್ರಾ ಹೇಳಿಕೆ
*ಗಾಬರಿ ಬೇಕಿಲ್ಲ, ಮಾರ್ಗಸೂಚಿ ಪಾಲಿಸಿ ಸಾಕು
*ಹಿಮಾಚಲದಲ್ಲಿ 100% ಲಸಿಕೆ ವಿತರಣೆ : ಸರ್ಕಾರ

ನವದೆಹಲಿ (ಡಿ. 05): ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ (Covid 19 New Variant Omicron) ಕೇವಲ ವಿದೇಶದಿಂದ ಭಾರತಕ್ಕೆ ಬರಬೇಕಿಲ್ಲ. ಅದು ಈಗಾಗಲೇ ಇಲ್ಲಿ ಇದೆ ಮತ್ತು ದೇಶದ ಪ್ರಮುಖ ಎಲ್ಲಾ ನಗರಗಳಲ್ಲೂ ಇರುವ ಸಾಧ್ಯತೆ ದಟ್ಟವಾಗಿದೆ. ಯಾವುದೇ ಪ್ರವಾಸ ಇತಿಹಾಸವಿಲ್ಲದ ಬೆಂಗಳೂರಿನ ವ್ಯಕ್ತಿಗೆ ಸೋಂಕು ದೃಢ ಪಟ್ಟಿರುವುದು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಸಿಎಸ್‌ಐಆರ್‌ (CSIR) ಮಾಜಿ ಮುಖ್ಯಸ್ಥ ಡಾ.ರಾಕೇಶ್‌ ಮಿಶ್ರಾ (Dr Rakesh Mishra) ಹೇಳಿದ್ದಾರೆ.

ಹೊಸ ವೈರಸ್‌ ಪತ್ತೆ ಹೊರತಾಗಿಯೂ ಸಮಾಧಾನಕರ ವಿಷಯವೆಂದರೆ ಸೋಂಕು ಸಮುದಾಯಕ್ಕೆ ಹರಡಿದ (Community Spread) ಹೊರತಾಗಿಯೂ ಅದು ಸೌಮ್ಯ ಸ್ವರೂಪದಲ್ಲೇ ಇದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಅಪಾಯಕಾರಿಯಾಗಿ ಹೊರಹೊಮ್ಮಿಲ್ಲ. ಗುರುವಾರ ಭಾರತದಲ್ಲಿ ಮೊದಲ ಒಮಿಕ್ರೋನ್‌ ಪ್ರಕರಣ ದಾಖಲಾಯಿತು. ಒಬ್ಬ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ (South Africa) ಬಂದಿದ್ದರೆ, ಮತ್ತೊಬ್ಬರು ಯಾವುದೇ ಪ್ರಯಾಣ ಮಾಡಿರಲಿಲ್ಲ. ಇದು ಹೊಸ ರೂಪಾಂತರಿ ಭಾರತದಲ್ಲೇ ಇತ್ತು ಎನ್ನುವುದನ್ನು ಸ್ಪಷ್ಟವಾಗುತ್ತದೆ. ಒಮಿಕ್ರಾನ್‌ ನಾವು ಊಹಿಸಿರುವ ವ್ಯಾಪ್ತಿಯಲ್ಲಷ್ಟೇ ಇಲ್ಲ. ಭಾರತದ ಮುಖ್ಯ ನಗರಗಳಲ್ಲಿ ಈ ರೂಪಾಂತರಿ ಈಗಾಗಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

Covid Vaccine: ಕೊರೋನಾ ಯೋಧರಿಗೂ 2ನೇ ಡೋಸ್‌ ಬೇಡ್ವಂತೆ..!

‘ಈ ಹೊಸ ರೂಪಾಂತರಿ ಭಾರತೀಯರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಇದರ ಲಕ್ಷಣಗಳು ಸೌಮ್ಯವಾಗಿರುವುದು ಅದೃಷ್ಟಎಂದೇ ಹೇಳಬೇಕು. ಇದನ್ನು ತಡೆಗಟ್ಟಲು ಕೋವಿಡ್‌ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ, ಲಸಿಕೆ ಪಡೆಯುವುದು ಹಾಗೂ ನೈರ್ಮಲ್ಯವನ್ನು ಕಾಪಾಡಬೇಕು. ಭಾರತದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗಾಗಿ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ಹಿಮಾಚಲದಲ್ಲಿ ಲಸಿಕೆ ವಿತರಣೆ ಪೂರ್ಣ

ರಾಜ್ಯದ ಎಲ್ಲಾ 53.86 ಲಕ್ಷ ಅರ್ಹ ವಯಸ್ಕರಿಗೆ ಕೋವಿಡ್‌ನ ಎರಡೂ ಡೋಸ್‌ ಲಸಿಕೆ (Corona Vaccine) ವಿತರಿಸುವ ಮೂಲಕ, ಇಂಥ ಸಾಧನೆ ಮಾಡಿದ ಮೊದಲ ರಾಜ್ಯವಾಗಿ ಹಿಮಾಚಲಪ್ರದೇಶ (Himachal Pradesh) ಹೊರಹೊಮ್ಮಿದೆ. ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಈವರೆಗೆ 53.86 ಲಕ್ಷ ಅರ್ಹ ವಯಸ್ಕರು ಎರಡೂ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಆಗಸ್ಟ್‌ ಅಂತ್ಯದಲ್ಲಿ ಶೇ.100ರಷ್ಟುವಯಸ್ಕರಿಗೆ ವಯಸ್ಕರಿಗೆ ಮೊದಲ ಡೋಸ್‌ ಲಸಿಕೆ ನೀಡಿದ ದೇಶದ ಮೊದಲ ರಾಜ್ಯ ಎಂಬ ಪ್ರಶಂಸೆಗೂ ರಾಜ್ಯ ಪಾತ್ರವಾಗಿತ್ತು ಎಂದು ತಿಳಿಸಿದೆ.

Vaccine: ಒಂದೇ ದಿನ 1 ಕೋಟಿಗಿಂತ ಹೆಚ್ಚು ಡೋಸ್‌, ಒಮಿಕ್ರೋನ್‌ ಹಿನ್ನೆಲೆ ಲಸಿಕೆಗೆ ಮುಗಿಬಿದ್ದ ಜನ

ಇದೇ ವೇಳೆ ಲಸಿಕಾಕರಣದಲ್ಲಿ ಮಹತ್ವದ ಮೈಲುಗಲ್ಲು ತಲುಪಿರುವ ಹಿನ್ನೆಲೆಯಲ್ಲಿ ಭಾನುವಾರ ಬಿಲಾಸ್‌ಪುರ ಏಮ್ಸ್‌ನಲ್ಲಿ ಕಾರ‍್ಯಕ್ರಮ ಏರ್ಪಡಿಸಿ ಆರೋಗ್ಯ ಕಾರ‍್ಯಕರ್ತರಿಗೆ ಸನ್ಮಾನ ಮಾಡಲಾಗುತ್ತಿದೆ. ಕಾರ‍್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ಸಹ ಭಾಗಿಯಾಗಲಿದ್ದಾರೆ.

8603 ಕೇಸು, 415 ಜನರ ಸಾವು: 99974 ಸಕ್ರಿಯ ಸೋಂಕಿತರು

ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 8,603 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3.46 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 415 ಸೋಂಕಿತರು ಸಾವಿಗೀಡಾಗಿದ್ದು ಒಟ್ಟು ಸಾವು 4.70 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 99,974ರಷ್ಟಿದೆ. ಇದು 2020ರ ಮಾಚ್‌ರ್‍ನಿಂದ ದಾಖಲಾದ ಕಡಿಮೆ ಸಂಖ್ಯೆಯಾಗಿದೆ. ಸತತ 160 ದಿನಗಳಿಂದ ದೈನಂದಿನ ಪ್ರಕರರಣಗಳು 50 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.81ಆಗಿದ್ದು, ಕಳೆದ 2 ತಿಂಗಳಿನಿಂದ ಶೇ.2ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ದೇಶದಲ್ಲಿ ಈವರೆಗೆ 126.53 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

click me!