
ನವದೆಹಲಿ (ಜ.17): ಏಪ್ರಿಲ್ 1ರಿಂದ ಆರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು/ಸುಳ್ಳು ಮಾಹಿತಿ ನೀಡುವುದು ಅಥವಾ ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ 1 ಸಾವಿರ ರುಪಾಯಿ ದಂಡ ತೆರಬೇಕಾಗುತ್ತದೆ ಎಚ್ಚರ. ಹೌದು. ಈ ಪ್ರಕ್ರಿಯೆ ನಡೆಸುವ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೇ ಈ ವಿಷಯ ಹೇಳಿದ್ದಾರೆ.
‘ನಾಗರಿಕತ್ವ ನಿಯಮದ ನಿಯಮ-17ರ ಪ್ರಕಾರ ತಪ್ಪು ಮಾಹಿತಿ ನೀಡಿದವರಿಗೆ 1 ಸಾವಿರ ರು. ದಂಡ ಹಾಕಲು ಅವಕಾಶವಿದೆ’ ಎಂದು ಅವರು ಹೇಳಿದ್ದಾರೆ. ‘ಆದರೆ 2011 ಹಾಗೂ 2015ರಲ್ಲಿ ನಡೆದ ಎನ್ಪಿಆರ್ ಪ್ರಕ್ರಿಯೆ ವೇಳೆ ಈ ನಿಯಮವನ್ನು ಹೆಚ್ಚು ಬಳಕೆ ಮಾಡಿರಲಿಲ್ಲ’ ಎಂದವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಎನ್ಪಿಆರ್, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಲೇಖಕಿ ಅರುಂಧತಿ ರಾಯ್ ಅವರು, ‘ಎನ್ಪಿಆರ್ ಗಣತಿದಾರರು ನಿಮ್ಮ ಮನೆಗೆ ಬಂದರೆ ಅವರಿಗೆ ತಪ್ಪು ಮಾಹಿತಿ ನೀಡಿ. ನಿಮ್ಮ ಹೆಸರನು ರಂಗಾ-ಬಿಲ್ಲಾ, ಕುಂಗ್ಫು-ಕಟ್ಟಾಎಂದು ಬರೆಸಿರಿ’ ಎಂದು ಕರೆ ನೀಡಿದ್ದರು. ಈಗಾಗಲೇ ಎನ್ಪಿಆರ್ಗೆ ಕೇರಳ, ಪ.ಬಂಗಾಳ ಸರ್ಕಾರಗಳು ಬಹಿಷ್ಕಾರ ಹಾಕಿವೆ.
PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!...
ಪ್ಯಾನ್ ಸಂಖ್ಯೆ ಕೇಳಲ್ಲ:
‘ಎನ್ಪಿಆರ್ ಪ್ರಕ್ರಿಯೆ ಕೈಗೊಳ್ಳುವ ಸಲುವಾಗಿ ಪರೀಕ್ಷಾರ್ಥವಾಗಿ ದೇಶದ 73 ಜಿಲ್ಲೆಗಳಲ್ಲಿ ಈಗಾಗಲೇ 30 ಲಕ್ಷ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಗಣತಿ ವೇಳೆ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರ ಗುರುತು ಚೀಟಿ, ಪಾಸ್ಪೋರ್ಟ್, ಚಾಲನಾ ಪರವಾನಗಿ- ವಿವರ ನೀಡಲು ಜನರು ಹಿಂದೇಟು ಹಾಕಿಲ್ಲ. ಆದರೆ ಪ್ಯಾನ್ ಸಂಖ್ಯೆ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮುಂಬರುವ ಎನ್ಪಿಆರ್ ಗಣತಿಯಲ್ಲಿ ಪ್ಯಾನ್ ಸಂಖ್ಯೆ ಕೇಳುವುದನ್ನು ಕೈಬಿಡಲು ತೀರ್ಮಾನಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಧಾರ್, ವೋಟರ್ ಐಡಿ ಕಡ್ಡಾಯವಲ್ಲ:
‘ಇತ್ತೀಚೆಗೆ ಪತ್ರಿಕೆಯೊಂದು, ‘‘ಎನ್ಪಿಆರ್ ವೇಳೆ ಆಧಾರ್ ಸಂಖ್ಯೆ, ವೋಟರ್ ಐಡಿ, ಆಧಾರ್ ಸಂಖ್ಯೆ, ಡಿಎಲ್- ಇತ್ಯಾದಿ ವಿವರ ನೀಡುವುದು ಕಡ್ಡಾಯ’’ ಎಂದು ಬರೆದಿತ್ತು. ಇದು ತಪ್ಪು ವರದಿ. ಆಧಾರ್, ವೋಟರ್ ಐಡಿ, ಪಾಸ್ಪೋರ್ಟ್, ಡಿಎಲ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ’ ಎಂದು ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ