Farmer Land Auctioned in Rajasthan : ಬಡವ ಸಾಲ ಕಟ್ಟದಿದ್ರೆ ಭೂಮಿ ಹರಾಜು, ಶ್ರೀಮಂತ ಕಟ್ಟದಿದ್ರೆ ಲಂಡನ್ ಟಿಕೆಟು!

By Suvarna NewsFirst Published Jan 19, 2022, 4:33 PM IST
Highlights

ಬ್ಯಾಂಕ್ ನ ಸಾಲ ಮರುಪಾವತಿ ಮಾಡಲು ವಿಫಲ
ರಾಜಸ್ಥಾನದ ರಾಮಗಢ ಪಚ್ವಾರ ಗ್ರಾಮದಲ್ಲಿ ಬಡವನ ಜಮೀನು ಹರಾಜು
ಸಾಮಾಜಿಕ ಜಾಲತಾಣದಲ್ಲಿ ರಾಜಸ್ಥಾನ ಸರ್ಕಾರದ ವಿರುದ್ಧ ಟೀಕೆ

ಜೈಪುರ (ಜ. 19): ದೇಶದ ಬ್ಯಾಂಕ್ ಗಳಿಂದ (Bank) ಲೆಕ್ಕವಿಲ್ಲದಷ್ಟು ಮೊತ್ತವನ್ನು ಸಾಲವಾಗಿ ಪಡೆದು ಅದನ್ನು ಮರುಪಾವತಿ ಮಾಡದೇ ದೇಶ ಬಿಟ್ಟು ಪರಾರಿಯಾಗುವ "ಶ್ರೀಮಂತ"ನಿಗೆ ಇಲ್ಲದ ರೂಲ್ಸುಗಳು ದೇಶದ ಜನರಿಇಗೆ ಅನ್ನ ನೀಡುವ ರೈತನಿಗೆ (Farmer) ಇದೆ. ಚುನಾವಣೆಯ ವೇಳೆ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ಕೃಷಿಕರ ಸಾಲ ಮನ್ನಾ ಮಾಡ್ತೇನೆ ಎಂದು ಅಧಿಕಾರಕ್ಕೆ ಬರುವ ಪಕ್ಷ, ಅಧಿಕಾರಕ್ಕೆ ಬಂದ ಮೇಲೆ ತನ್ನ ವರಸೆಯನ್ನೇ ಬದಲಾಯಿಸೋದು ದೇಶದ ಜನರಿಗೆ ಅರ್ಥವಾಗಿಬಿಟ್ಟಿದೆ. ಅಂಥದ್ದೊಂದು ಸಾಕ್ಷಿಯಾಗಿ ರಾಜಸ್ಥಾನದ (Rajasthan) ದೌಸಾ ಜಿಲ್ಲೆಯಲ್ಲಿ ಪ್ರಕರಣವೊಂದು ನಡೆದಿದೆ. ರಾಜಸ್ಥಾನ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡಿದ್ದ ರೈತನೊಬ್ಬನಿಗೆ ಅದರ ಮರುಪಾವತಿ ಸಾಧ್ಯವಾಗಿಲ್ಲ. ಅದಕ್ಕಾಗಿ ರೈತ ದುಡಿಮೆ ಮಾಡುವ ಹೊಲವನ್ನೇ ಅಲ್ಲಿನ ಸರ್ಕಾರ ಹರಾಜು ಮಾಡಿದೆ. ಈ ಕುರಿತಾಗಿ ವರದಿ ಪ್ರಸಾರವಾದ ಬೆನ್ನಲ್ಲಿಯೇ ರಾಜಸ್ಥಾನ ಸರ್ಕಾರದ ವಿರುದ್ಧ ಜನ ಟೀಕಾಪ್ರಹಾರ ಮಾಡಿದ್ದು, ಬಡವ ಸಾಲ ಕಟ್ದೆ ಇದ್ರೆ ಭೂಮಿ ಹರಾಜು, ಶ್ರೀಮಂತ ಕಟ್ದೆ ಇದ್ರೆ ಲಂಡನ್ ಟಿಕೆಟ್ ಕೊಡೋ ನಿಮ್ಮ ಸರ್ಕಾರಕ್ಕೆ ಏನು ಹೇಳೋದು ಎಂದು ಪ್ರಶ್ನೆ ಮಾಡಿದ್ದಾರೆ.

ಹೊಲದಲ್ಲಿ ಉಳುಮೆ ಮಾಡುವ ಸಲುವಾಗಿ ದೌಸಾ (Dausa) ಜಿಲ್ಲೆಯ ಕಜೋದ್ ಮೀನಾ (Kajod Meena) ಎನ್ನುವ ವ್ಯಕ್ತಿ ರಾಜಸ್ಥಾನ ಮೃಧರ ಗ್ರಾಮೀಣ ಬ್ಯಾಂಕ್ ನಲ್ಲಿ (Rajasthan Marudhara Gramin Bank)ಅಂದಾಜು 3.5 ಲಕ್ಷ ರೂಪಾಯಿ ಕೆಸಿಸಿ ಸಾಲ ಪಡೆದುಕೊಂಡಿದ್ದರು. ಆದರೆ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕಜೋದ್ ಮೀನಾ 2017ರಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಈ ಅವಧಿಯಲ್ಲಿ ಅವರು ತೆಗೆದುಕೊಂಡಿದ್ದ ಅಸಲು ಬಡ್ಡಿ ಎಲ್ಲಾ ಸೇರಿ 7 ಲಕ್ಷ ರೂಪಾಯಿ ಆಗಿದ್ದವು. ಇದರ ನಡುವೆ ಎರಡೂವರೆ ತಿಂಗಳ ಹಿಂದೆ ಹೊಲದಲ್ಲಿ ಉಳುಮೆ ಮಾಡುವ ಸಮಯದಲ್ಲಿಯೇ ಕಜೋದ್ ಮೀನಾ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.

ಈ ನಡುವೆ ಕಜೋದ್ ಮೀನಾ ಹಾಗೂ ಅವರ ಕುಟುಂಬವನ್ನು ಸಂಪರ್ಕ ಮಾಡಿದ್ದ ಬ್ಯಾಂಕ್ ಅಧಿಕಾರಿಗಳು ಸಾಲವನ್ನು ಮರುಪಾವತಿ ಮಾಡುವಂತೆ ಹೇಳಿದ್ದಾರೆ. ಈ ಕುರಿತಾಗಿ ಕಜೋದ್ ಮೀನಾ ಅವರ ಮಕ್ಕಳಾದ ರಾಜುಲಾಲ್ ಹಾಗೂ ಪಪ್ಪುಲಾಲ್ ಅವರಿಗೆ ನೋಟಿಸ್ ಕೂಡ ನೀಡಲಾಗಿತ್ತು. ಒಂದೆಡೆ ತಂದೆಯ ಸಾವು, ಇನ್ನೊಂದೆದೆ ಆರ್ಥಿಕ ಸಂಕಷ್ಟ, ಇದರಿಂದಾಗಿ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಬ್ಯಾಂಕ್, ಕಜೋದ್ ಮೀನಾ ಸಾಲಕ್ಕಾಗಿ ಅಡವಿಟ್ಟಿದ್ದ ಜಮೀನನ್ನು ಹರಾಜು ಮಾಡಲು ನಿರ್ಧಾರ ಮಾಡಿದ್ದಲ್ಲದೆ,  ಇದರ ದಾಖಲೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಅದರಂತೆ ಮಂಗಳವಾರ 6 ಎಕರೆ 2 ಗುಂಟೆ ಜಾಗವನ್ನು ಹರಾಜು ಮಾಡಲಾಗಿದೆ. ಸ್ಥಳೀಯ ವ್ಯಕ್ತಿ ಕಿರಣ್ ಶರ್ಮ  ಎನ್ನುವವರು 46.51 ಲಕ್ಷ ರೂಪಾಯಿಗೆ ಈ ಜಮೀನನ್ನು ಖರೀದಿ ಮಾಡಿದ್ದಾರೆ.

UP Elections: ಮುಲಾಯಂ ಕಿರಿ ಸೊಸೆ ಬಿಜೆಪಿಗೆ, ಕೇಸರಿ ಪಾಳಯಕ್ಕೆ ಕಂಟಕ?
ತಮ್ಮ ಜೀವನಕ್ಕೆ ಏಕೈಕ ಆಧಾರವಾಗಿದ್ದ ಜಮೀನು ಕಳೆದುಕೊಂಡ ದುಃಖದಲ್ಲಿರುವ ಕಜೋದ್ ಮೀನಾ ಕುಟುಂಬ, ಈಗ ಸಾವು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದೇವೆ ಎಂದು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕೃಷಿ ಸಾಲವನ್ನು ಮನ್ನಾ ಮಾಡುವ ಆಶ್ವಾಸನೆ ನೀಡಿತ್ತು. ಆದರೆ, ಇದರ ಲಾಭ ನಮಗೆ ಸಿಕ್ಕಿಲ್ಲ. ನಮಗೆ ಆಧಾರವಾಗಿರುವ ಭೂಮಿಯನ್ನು ಕಳೆದುಕೊಂಡಿರುವುದರಿಂದ ಆತ್ಮಹತ್ಯೆಯೊಂದೇ ನಮಗೆ ದಿಕ್ಕು. ಸಾಲ ಮರುಪಾವತಿಗೆ ಕೆಲ ಸಮಯವನ್ನೂ ಕೇಳಿದ್ದೆವು. ಆದರೆ ಬ್ಯಾಂಕ್ ನವರು ಮತ್ತೆ ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

PM Modi : ಪ್ರಧಾನಿ ಮೋದಿ ರಾಮ, ಕೃಷ್ಣನ ಅವತಾರ ಎಂದ ಬಿಜೆಪಿ ಸಚಿವ!
ಸದ್ಯ ಮುಂದೇನು ಮಾಡುವುದು ಎನ್ನುವುದೇ ತಿಳಿಯುತ್ತಿಲ್ಲ ಕಜೋದ್ ಮೀನಾ ಅವರ ಪುತ್ರ ಪಪ್ಪುಲಾಲ್ ಹೇಳಿದ್ದಾರೆ. ಬ್ಯಾಂಕ್ ನಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಸೆಟಲ್ ಮೆಂಟ್ ನ ಅವಕಾಶವನ್ನೂ ನೀಡಿದ್ದೆವು. ಯಾವುದಕ್ಕೂ ಪ್ರತಿಕ್ರಿಯೆ ಬರದ ಕಾರಣ ಜಾಗವನ್ನು ಹರಾಜು ಮಾಡಿದ್ದೇವೆ ಎಂದು ಎಸ್ ಡಿಎಂ ಮಿಥ್ಲೇಶ್ ಮೀನಾ ತಿಳಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ: ಬಹುತೇಕ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲಿಯೇ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಮೇಲೆ ಟೀಕೆಗಳು ಕೇಳಿಬಂದಿದೆ. ರಾಹುಲ್ ಗಾಂಧಿ ಚುನಾವಣೆಯ ವೇಳೆ 10 ದಿನದಲ್ಲಿ ಕೃಷಿ ಸಾಲ ಮನ್ನಾ ಆಗಲಿದೆ ಎಂದಿದ್ದರು. ಆದರೆ, ಈವರೆಗೂ ಅದರ ಲಾಭ ಬೇಕಾದವರಿಗೆ ಸಿಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗ್ಲೆಹೋಟ್ ವಿರುದ್ಧವೂ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನೂ ಕೆಲವರು ಬ್ಯಾಂಕ್ ತನ್ನ ಕರ್ತವ್ಯವನ್ನು ಮಾಡಿದೆ ಎಂದು ಹೇಳಿದ್ದಾರೆ.

click me!