Covid In India: ಸಂಪರ್ಕಕ್ಕೆ ಬಂದಿದ್ದಾರೆ ಎಂದ ಮಾತ್ರಕ್ಕೆ ಎಲ್ಲರಿಗೂ ಪರೀಕ್ಷೆ ಬೇಡ

By Kannadaprabha NewsFirst Published Jan 11, 2022, 3:33 AM IST
Highlights

* ಸೋಂಕಿತರ ಸಂಪರ್ಕಕ್ಕೆ ಬಂದ  ಎಲ್ಲರಿಗೂ ಪರೀಕ್ಷೆ ಬೇಡ: ಕೇಂದ್ರ
* ಮತ್ತೆ 1.79 ಲಕ್ಷ ಕೇಸ್‌: 7 ತಿಂಗಳ ಗರಿಷ್ಠ
* -ಸಕ್ರಿಯ ಕೇಸ್‌ 7.23 ಲಕ್ಷ: 204 ದಿನದ ಗರಿಷ್ಠ
* ದೈನಂದಿನ ಪಾಸಿಟಿವಿಟಿ ದರ 13.2%ಗೆ ಏರಿಕೆ

ನವದೆಹಲಿ (ಜ. 11) ಕೋವಿಡ್‌ (Covid 19) ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಹೆಚ್ಚಿನ ರೋಗ ಲಕ್ಷಣಗಳು ಕಂಡುಬರದಿದ್ದರೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿಲ್ಲದಿದ್ದರೆ ಕೋವಿಡ್‌ (Coronavirus) ಪರೀಕ್ಷೆ ಮಾಡುವುದು ಬೇಡ ಎಂದು ಐಸಿಎಂಆರ್‌ (ICMR) ಸಲಹೆ ನೀಡಿದೆ. ಹಾಗೆಯೇ ದೇಶದೊಳಗೆ (Inter State) ಅಂತಾರಾಜ್ಯ ಪ್ರಯಾಣ ಮಾಡುವವರನ್ನು ಪರೀಕ್ಷೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ. ಕೋವಿಡ್‌ ಪರೀಕ್ಷೆಯನ್ನು ಆರ್‌ಟಿಪಿಸಿಆರ್‌, ಟ್ರೂನ್ಯಾಟ್‌, ಸಿಬಿನ್ಯಾಟ್‌, ಕ್ರಿಸ್ಪರ್‌, ಆರ್‌ಟಿಲ್ಯಾಂಪ್‌, ರಾರ‍ಯಪಿಡ್‌ ಮಾಲೆಕ್ಯುಲರ್‌ ಯಾವುದಲ್ಲಾದರೂ ನಡೆಸಬಹುದು ಎಂದು ಹೇಳಿದೆ. ಮನೆಯಲ್ಲೆ ಪರೀಕ್ಷೆ ಮಾಡಿಕೊಂಡವರಿಗೆ ರೋಗ ಲಕ್ಷಣ ಕಂಡುಬಂದರೆ ಆರ್‌ಟಿಪಿಸಿಆರ್‌ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಇನ್ನೊಂದು ಕಡೆ ಭಾರತದಲ್ಲಿ ಕೋವಿಡ್‌-19 ಆರ್ಭಟ ಮುಂದುವರೆದಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,79,723 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 227 ದಿನಗಳ (7 ತಿಂಗಳು)ಗರಿಷ್ಠ ಸಂಖ್ಯೆಯಾಗಿದೆ. ಕಳೆದ ಮೇ 27ರಂದು ದೇಶದಲ್ಲಿ ಒಂದೇ ದಿನ 1.86 ಲಕ್ಷ ಕೇಸ್‌ ಪತ್ತೆಯಾಗಿತ್ತು. ಅದಾದ ಬಳಿಕ ಇಷ್ಟೊಂದು ಕೊರೋನಾ ಪ್ರಕರಣ ಪತ್ತೆಯಾಗುತ್ತಿರುವುದು ಇದೇ ಮೊದಲು.

Latest Videos

ಕರ್ನಾಟಕದಲ್ಲಿ ಓಮಿಕ್ರೋನ್ ಜತೆ ಕೊರೋನಾ ಸ್ಫೋಟ

ಇನ್ನು ಸೋಮವಾರ ಇದೇ ಅವಧಿಯಲ್ಲಿ 146 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.57 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,83,936ಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 7.23ಲಕ್ಷಕ್ಕೆ ಏರಿಕೆಯಾಗಿದೆ. ಇದು ಕಳೆದ 204 ದಿನಗಳ ಗರಿಷ್ಠ ಸಂಖ್ಯೆ. ಚೇತರಿಕೆ ಪ್ರಮಾಣ ಶೇ.96.62ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.13.29ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 3.45 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 151.94 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

410 ಮಂದಿಗೆ ಒಮಿಕ್ರೋನ್‌ ಸೋಂಕು: ಸೋಮವಾರ ಒಟ್ಟು 410 ಒಮಿಕ್ರೋನ್‌ ರೂಪಾಂತರಿ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್‌ ಪ್ರಕರಣಗಳ ಸಂಖ್ಯೆ 4033ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1,216, ರಾಜಸ್ಥಾನದಲ್ಲಿ 529, ದೆಹಲಿಯಲ್ಲಿ 513, ಕರ್ನಾಟಕದಲ್ಲಿ 441, ಕೇರಳದಲ್ಲಿ 333 ಮತ್ತು ಗುಜರಾತಿನಲ್ಲಿ 236 ಕೇಸ್‌ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,552 ಮಂದಿ ಗುಣಮುಖರಾಗಿದ್ದಾರೆ.

ಹಲವು ರಾಜ್ಯಗಳಲ್ಲಿ ಕಠಿಣ ಕ್ರಮ ಜಾರಿ: ನವದೆಹಲಿ: ದೇಶದಲ್ಲಿ ಕೋರೋನಾ 3ನೇ ಅಲೆ ಎದ್ದಿರುವ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಮತ್ತಷ್ಟುಕಠಿಣ ಮಾರ್ಗಸೂಚಿಗಳನ್ನು ವಿಧಿಸಿವೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ.50ರಷ್ಟುಸಿಬ್ಬಂದಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ. ಕೇರಳದಲ್ಲಿ ಮದುವೆ, ಅಂತ್ಯ ಸಂಸ್ಕಾರ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾಗವಹಿಸುವ ಜನರ ಮಿತಿಯನ್ನು 50ಕ್ಕೆ ಇಳಿಸಲಾಗಿದೆ. ಇನ್ನು ಆಂಧ್ರಪ್ರದೇಶದಲ್ಲಿ ರಾತ್ರಿ 11 ಗಂಟೆಯಿಂದ ಮುಂಜಾನೆ 5ರವರೆಗೆ ರಾತ್ರಿ ಕಫä್ರ್ಯ ವಿಧಿಸಲಾಗಿದೆ. ಥಿಯೇಟರ್‌ಗಳು ಶೇ.50ರಷ್ಟುಮಿತಿ ವಿಧಿಸಲಾಗಿದೆ. ಹರ್ಯಾಣದಲ್ಲಿ ಜ.26ರವರೆಗೆ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಭೌತಿಕ ತರಗತಿಗಳು ಇಲ್ಲದ ಕಾರಣ ಆನ್ಲೈನ್‌ನಲ್ಲಿ ತರಗತಿಗಳನ್ನು ಮುಂದುವರೆಸುವಂತೆ ಸೂಚಿಸಲಾಗಿದೆ.

ದೆಹಲಿಯಲ್ಲಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಉಪಹಾರ ಸೇವಿಸುವಂತಿಲ್ಲ. ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ .ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ಕಚೇರಿಗಳ ಒಟ್ಟು ಸಾಮರ್ಥ್ಯದ ಶೇ.50ರಷ್ಟುಜನರೊಂದಿಗೆ ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ 5 ದಿನ ಮಾತ್ರ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ. ಒಳಾಂಗಣ ಕಾರ್ಯಕ್ರಮಗಳಿಗೆ 100 ಜನ ಮತ್ತು ಹೊರಾಂಗಣ ಕಾರ್ಯಕ್ರಮಗಳಿಗೆ 300 ಜನರ ಮಿತಿ ವಿಧಿಸಲಾಗಿದೆ.

click me!