ತಮಿಳುನಾಡಿನ 6 ಕಡೆ ಎನ್‌ಐಎ ದಾಳಿ 5 ಪಿಎಫ್‌ಐ ಕಾರ್ಯಕರ್ತರ ಸೆರೆ

By Kannadaprabha NewsFirst Published May 10, 2023, 7:54 AM IST
Highlights

ನಿಷೇಧಿತ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಯ ಕಾರ್ಯಕರ್ತರ ಆಸ್ತಿಪಾಸ್ತಿಗಳ ಮೇಲೆ ತಮಿಳುನಾಡಿನ 6 ಕಡೆ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ದಳವು (NIA), ಐವರನ್ನು ಬಂಧಿಸಿದೆ. ಇವರಿಂದ ಅಪಾರ ಶಸ್ತ್ರಾಸ್ತ್ರ, ದಾಖಲೆ ವಶಪಡಿಸಿಕೊಳ್ಳಲಾಗಿದೆ.

ನವದೆಹಲಿ: ಮಂಗಳವಾರ ನಿಷೇಧಿತ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಯ ಕಾರ್ಯಕರ್ತರ ಆಸ್ತಿಪಾಸ್ತಿಗಳ ಮೇಲೆ ತಮಿಳುನಾಡಿನ 6 ಕಡೆ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ದಳವು (NIA), ಐವರನ್ನು ಬಂಧಿಸಿದೆ. ಇವರಿಂದ ಅಪಾರ ಶಸ್ತ್ರಾಸ್ತ್ರ, ದಾಖಲೆ ವಶಪಡಿಸಿಕೊಳ್ಳಲಾಗಿದೆ.

ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ದಾಳಿಯನ್ನು ಚೆನ್ನೈ (Chennai), ಮಧುರೈ (Madhurai), ಥೇಣಿ (Theni) ಹಾಗೂ ದಿಂಡಿಗಲ್‌ನಲ್ಲಿ (Dindigal) ನಡೆಸಲಾಗಿದೆ. ಪಿಎಫ್‌ಐನ (PFI) ಮದುರೈ ಘಟಕದ ಅಧ್ಯಕ್ಷ ಮೊಹಮ್ಮದ್‌ ಖೈಸರ್‌ (45), ಎಸ್‌ಡಿಪಿಐನ ಥೇಣಿ ಜಿಲ್ಲಾ ಕಾರ್ಯದರ್ಶಿ ಸಾದಿಕ್‌ ಅಲಿ (39), ಚೆನ್ನೈನ ಅಬ್ದುಲ್‌ ರಜಾಕ್‌ (47), ವಕೀಲ ಮೊಹಮ್ಮದ್‌ ಯೂಸುಫ್‌ (35) ಹಾಗೂ ವಕೀಲ ಎಂ. ಮೊಹಮ್ಮದ್‌ ಅಬ್ಬಾಸ್‌ (45) ರನ್ನು ಬಂಧಿಸಲಾಗಿದೆ. ಈ ದಾಳಿಯಲ್ಲಿ ಅಪಾರ ಸಂಖ್ಯೆಯ ಶಸ್ತ್ರಗಳು, ವಿದ್ಯುತ್‌ ಉಪಕರಣಗಳು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಪಿಯಲ್ಲಿ ಉಗ್ರರ ಸೊಂಟ ಮುರಿದಂತೆ, ಕರ್ನಾಟಕದಲ್ಲೂ ಪಿಎಫ್ಐ, ಐಎಸ್ಐ ಹುಟ್ಟಡಗಿಸುತ್ತೇವೆ: ಯೋಗಿ ಆದಿತ್ಯನಾಥ್

ಈ ದಾಳಿಯ ಕುರಿತು ಕಳೆದ ವರ್ಷ ಸೆ.19ರಂದೇ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿದ್ದು, ಈ ವರ್ಷ ಮಾ.17ರಂದು 10 ಜನರ ವಿರುದ್ಧ ಆರೋಪಪಟ್ಟಿಸಲ್ಲಿಸಿತ್ತು. ಹೊಸ ಐವರ ಬಂಧನದೊಂದಿಗೆ ಬಂಧಿತರ ಸಂಖ್ಯೆ 15ಕ್ಕೇರಿದೆ.

ಇಸ್ಲಾಮಿಕ್‌ ದೇಶ ಮಾಡುವ ಹುನ್ನಾರ:

ಇವರು ಭಾರತವನ್ನು 2047ಕ್ಕೆ ಇಸ್ಲಾಮಿಕ್‌ ರಾಷ್ಟ್ರ ಮಾಡಬೇಕೆಂಬ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದ್ದರು. ಇವರು ತಮ್ಮ ಉದ್ದೇಶ ವಿರೋಧಿಸುವ ವ್ಯಕ್ತಿಗಳನ್ನು ಮುಗಿಸಲು ಸಂಚು ರೂಪಿಸುತ್ತಿದ್ದರು. ಇದರೊಂದಿಗೆ ಯುವಕರಿಗೆ ಮಾರಣಾಂತಿಕ ಶಸ್ತ್ರಗಳ ತರಬೇತಿ, ಕೊಲೆ ಮಾಡುವ ಕುರಿತು ತರಬೇತಿ ನೀಡುತ್ತಿದ್ದರು ಎಂದು ಎನ್‌ಐಎ ಹೇಳಿಕೆ ತಿಳಿಸಿದೆ. ನಿಷೇಧಿತ ಪಿಎಫ್‌ಐ ವಿರುದ್ಧ ದೇಶದ್ರೋಹ, ದ್ವೇಷ ಹರಡುವಿಕೆ, ಶಾಂತಿ ಕದಡುವಿಕೆ ಹಾಗೂ ದೇಶದ ವಿರುದ್ಧ ದ್ವೇಷ ವಾತಾವರಣ ನಿರ್ಮಾಣ ಸಂಬಂಧ ಹಲವಾರು ದೂರುಗಳು ದಾಖಲಾದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ ಎನ್‌ಐಎ ಎಂದು ಹೇಳಿದೆ.

ಪಿಎಫ್‌ಐ ಚಟುವಟಿಕೆಗೆ ಬಿದ್ದಿಲ್ಲ ಬ್ರೇಕ್‌..ಅಂದು ಪಿಎಫ್‌ಐ ನಾಯಕರು..ಇಂದು ಎಸ್‌ಡಿಪಿಐ ಲೀಡರ್ಸ್‌

 

click me!