ನೂತನ ಸಂಸತ್‌ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ

By Kannadaprabha NewsFirst Published May 29, 2023, 8:36 AM IST
Highlights

ಭಾರತೀಯರು ಅದನ್ನು ಕಿತ್ತೊಗೆದು ಪ್ರಜಾಪ್ರಭುತ್ವಕ್ಕೆ ಸೇರಿದ್ದಾರೆ. ಇಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಭುತ್ವದಲ್ಲಿ ಸೆಂಗೋಲ್‌ ಪಾತ್ರವಿಲ್ಲ. ಇದು ಸರ್ವಾಧಿಕಾರತ್ವದ ಸಂಕೇತವಾಗಿದೆ ಎಂದಿದ್ದಾರೆ.

ನವದೆಹಲಿ (ಮೇ 29, 2023): ನೂತನ ಸಂಸತ್‌ ಉದ್ಘಾಟನೆಯನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ‘ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ವಿಪಕ್ಷಗಳ ಅನುಪಸ್ಥಿತಿಯಲ್ಲಿ ‘ನವ ಭಾರತ’ದ ಘೋಷಣೆ ಮಾಡಲಾಗಿದೆ. ಭಾರತವೆಂದರೆ ದೇಶ ಮತ್ತು ನಾಗರಿಕರು, ನವ ಭಾರತವೆಂದರೆ ರಾಜ ಮತ್ತು ಪ್ರಜೆ ಎಂದು ವ್ಯಂಗ್ಯವಾಡಿದ್ದಾರೆ.

ಜೊತೆಗೆ ಸೆಂಗೋಲ್‌, ಚಕ್ರವರ್ತಿಗಳು ಮತ್ತು ರಾಜಪ್ರಭುತ್ವಕ್ಕೆ ಸೇರಿದ್ದು. ಭಾರತೀಯರು ಅದನ್ನು ಕಿತ್ತೊಗೆದು ಪ್ರಜಾಪ್ರಭುತ್ವಕ್ಕೆ ಸೇರಿದ್ದಾರೆ. ಇಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಭುತ್ವದಲ್ಲಿ ಸೆಂಗೋಲ್‌ ಪಾತ್ರವಿಲ್ಲ. ಇದು ಸರ್ವಾಧಿಕಾರತ್ವದ ಸಂಕೇತವಾಗಿದೆ’ ಎಂದಿದ್ದಾರೆ. ಇನ್ನು ಸಿಪಿಐ ಸಂಸದ ದಿಪಂಕರ್‌ ಭಟ್ಟಾಚಾರ್ಯ ‘ಹೊಸ ಸಂಸತ್‌ ಭವನದ ಉದ್ಘಾಟನೆಯು ರಾಜನ ಪಟ್ಟಾಭಿಷೇಕವನ್ನು ಹೋಲುವಂತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ನೂತನ ಸಂಸತ್‌ ಭವನ ಲೋಕಾರ್ಪಣೆ: ಶೃಂಗೇರಿ ಶಾರದಾ ಪೀಠದ ಪುರೋಹಿತರಿಂದ ಪೂಜಾ ಕೈಂಕರ್ಯ

ಇನ್ನು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ‘ಮೇ 28ರ ಇದೇ ದಿನದಂದು ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ನೆಲೆಸಲು ಹೆಚ್ಚು ಶ್ರಮಿಸಿದ ಜವಾಹರಲಾಲ್‌ ನೆಹರು ಅವರು ಮೃತಪಟ್ಟಿದ್ದರು. ಸಾವರ್ಕರ್‌ರ ಸೈದ್ಧಾಂತಿಕ ಪರಿಸರ ವ್ಯವಸ್ಥೆಯು ಮಹಾತ್ಮ ಗಾಂಧಿ ಹತ್ಯೆಗೆ ಕಾರಣವಾಯಿತು. ಅದೇ ದಿನ ಇಂದು ಬುಡಕಟ್ಟು ಸಮುದಾಯದಿಂದ ಬಂದ ಪ್ರಥಮ ಮಹಿಳೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಂಸತ್ತಿನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ಸಂಸತ್‌ ಕಟ್ಟಡವನ್ನು ಉದ್ಘಾಟಿಸಲು ಅವಕಾಶವಿಲ್ಲ. ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿರುವ ಸ್ವಯಂ ವೈಭವೀಕೃತ ನಿರಂಕುಶ ಪ್ರಧಾನಿ ಸಂಸತ್ತನ್ನು ಉದ್ಘಾಟಿಸುತ್ತಾರೆ’ ಎಂದಿದ್ದಾರೆ.

ಸಂಸತ್‌ ಭವನ ಜನರ ಧ್ವನಿಯಾಗಿದೆ, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸತ್‌ ಉದ್ಘಾಟನೆಯನ್ನು ತಮ್ಮ ಸ್ವಂತ ಪಟ್ಟಾಭಿಷೇಕದಂತೆ ಅನುಭವಿಸುತ್ತಿದ್ದಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಇದನ್ನೂ ಓದಿ: ನೂತನ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ: ಬ್ರಾಹ್ಮಣತ್ವ ಸ್ಥಾಪನೆಗೆ ಬಿಜೆಪಿ ಯತ್ನ ಎಂದ ಎಸ್‌ಪಿ

ಅಂದು ಸಂಸತ್‌ನ ಶಂಕುಸ್ಥಾಪನೆಗೆ ಅಂದಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಆಹ್ವಾನಿಸಿರಲಿಲ್ಲ. ಇಂದು ಅದರ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಈ ಮೂಲಕ ಆರ್‌ಎಸ್‌ಎಸ್‌ನವರ ಸಿದ್ಧಾಂತದಂತೆ ಮೇಲ್ಜಾತಿ ಮನಸ್ಥಿತಿ, ಕೆಳವರ್ಗ ವಿರೋಧಿ ಮನಸ್ಥಿತಿಯಿಂದ ಬಿಜೆಪಿ ಸರ್ಕಾರವು ರಾಷ್ಟ್ರಪತಿಗಳ ಪದವಿಗೂ ಅಗೌರವ ತೋರಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ರಾಷ್ಟ್ರಪತಿಗಳನ್ನು ಟೋಕನ್‌ ರೀತಿ ಬಳಸಿಕೊಂಡಿದೆ.
-ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಇದನ್ನೂ ಓದಿ: ನೂತನ ಸಂಸತ್‌ ಭವನ ಉದ್ಘಾಟನೆ ಬೆನ್ನಲ್ಲೇ ವೀರ್‌ ಸಾವರ್ಕರ್‌ಗೆ ‘ನಮೋ’ ನಮನ

click me!