ಥಾಣೆ(ಫೆ.18): ರೈಲು ಬರುತ್ತಿದ್ದಂತೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನು ಎಳೆದುಕೊಂಡು ರೈಲ್ವೆ ಹಳಿಗೆ ಹಾರಿದ್ದು, ಈ ದುರಂತದಲ್ಲಿ ಮಗು ಯಾವುದೇ ಹಾನಿಯಾಗದೆ ಬದುಕುಳಿದಿದ್ದು, ತಂದೆ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣದ (Kalyan) ಸಮೀಪದ ವಿಠಲವಾಡಿ (Vitthalwadi) ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಮಗು ತನ್ನ ಕೈಯನ್ನು ಬಿಡಿಸಿಕೊಳ್ಳಲು ಯತ್ನಿಸಿದರು ಬಿಡದ ತಂದೆ ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ರೈಲಿನ ಮುಂದೆ ಬೀಳುತ್ತಾನೆ. ಆದರೆ ಅದೃಷ್ಟ ಚೆನ್ನಾಗಿತ್ತೇನೋ ಮಗು ಯಾವುದೇ ಸಣ್ಣ ಪುಟ್ಟ ಗಾಯವೂ ಆಗದೇ ಪವಾಡಸದೃಶವಾಗಿ ಬದುಕಿಕೊಂಡಿದೆ ಎಂದು ತಿಳಿದು ಬಂದಿದೆ.
ಭರತ್ ಘಂಡಟ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿ ಹಳಿಯ ಪಕ್ಕ ನಿಂತಿದ್ದು, ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ಹಳಿಗೆ ಹಾರುತ್ತಾನೆ. ರೈಲು ಚಕ್ರಕ್ಕೆ ಸಿಲುಕಿದ ಆತನನ್ನು ಎಳೆದುಕೊಂಡು ಹೋಗುತ್ತದೆ. ಆದರೆ ಮಗು ಕಾಣಿಸುವುದಿಲ್ಲ. ಆದರೆ ಸ್ಥಳೀಯ ವರದಿ ಪ್ರಕಾರ ಮಗು ಸಣ್ಣ ತರಚು ಗಾಯವೂ ಆಗದೇ ಸುರಕ್ಷಿತವಾಗಿದ್ದು, ತಂದೆಯ ದೇಹ ಹಳಿಗೆ ಸಿಲುಕಿ ಛಿದ್ರ ಛಿದ್ರವಾಗಿದೆ.
ಇನ್ನು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪ್ರಮೋದ್ ಅಂಧಲೆ(Pramod Andhale) ಎಂದು ಗುರುತಿಸಲಾಗಿದೆ. ಇವರು ಬೃಹತ್ ಮುಂಬೈ ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿರುವ ಶಾಂತಿನಗರದ ನಿವಾಸಿ ಎಂದು ತಿಳಿದು ಬಂದಿದೆ. ಈ ವ್ಯಕ್ತಿ ಸಂಜೆ 6 ಗಂಟೆ ಸುಮಾರಿಗೆ ತನ್ನ 6 ವರ್ಷದ ಪುತ್ರ ಸ್ವರಾಜ್ ( Swaraj )ನೊಂದಿಗೆ ವಿಠಲವಾಡಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಳಿಕ ಮುಂಬೈಗೆ ತೆರಳುತ್ತಿದ್ದ ಡೆಕ್ಕನ್ ಎಕ್ಸ್ಪ್ರೆಸ್ (Deccan Express) ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೈಕ್ ಪುಡಿಪುಡಿ... ಸಾವಿನಿಂದ ಗ್ರೇಟ್ ಎಸ್ಕೇಪ್ ಆದ ಯುವಕ... ನೋಡಿ ಭಯಾನಕ ವಿಡಿಯೋ
ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಯುವಕನೋರ್ವ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಜಾರಿ ಕೆಳಗೆ ಬಿದ್ದಿದ್ದ. ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿಈ ಘಟನೆ ನಡೆದಿತ್ತು.
ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಯುವಕನನ್ನು ದೊಡ್ಡ ದುರಂತದಿಂದ ರಕ್ಷಿಸಿತ್ತು. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ನಂತರ ವ್ಯಕ್ತಿ ಬಿದ್ದಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಆರ್ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಇದರ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರೈಲು ನಿಧಾನವಾಗಿ ಚಲಿಸುವಾಗ ಇಬ್ಬರು ಆರ್ಪಿಎಫ್ ಸಿಬ್ಬಂದಿ ಪ್ಲಾಟ್ಫಾರ್ಮ್ನಲ್ಲಿ ನಡೆಯುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಒಬ್ಬ ಪ್ರಯಾಣಿಕನು ಹಠಾತ್ತನೆ ಇಳಿಯಲು ಹೋಗಿ ಜಾರಿ ಬೀಳುತ್ತಾನೆ. ಕೂಡಲೇ ಆರ್ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಸುರಕ್ಷಿತವಾಗಿ ಮೇಲೆಳೆದುಕೊಳ್ಳುತ್ತಾರೆ. ಫೆಬ್ರವರಿ 8 ರಂದು ಸಂಜೆ 6:15 ರ ವೇಳೆ ಈ ಘಟನೆ ನಡೆದಿದೆ.
Selfie On Railway Track : ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿ, ನಾಲ್ವರ ಸಾವು!
ಫೆಬ್ರವರಿ 9 ರಂದು ಭಾರತೀಯ ರೈಲ್ವೆ ಇಲಾಖೆ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, 32 ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರೈಲ್ವೆ ಇಲಾಖೆ ಸೇವೆ ಮತ್ತು ಕಾಳಜಿಗೆ ಬದ್ಧವಾಗಿದೆ ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತ ಆರ್ಪಿಎಫ್ ಸಿಬ್ಬಂದಿ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಎಂದಿಗೂ ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೇ ಎಲ್ಲಾ ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ